ಚಿರಾಗ್ ಪತ್ರದ ಗುಟ್ಟು: ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ ಒಡೆಯಲು ಇದೇ ಕಾರಣ?
ಪಾಟ್ನಾ, ಜೂನ್ 23: "ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷ ಇಬ್ಭಾಗಗೊಳಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ, ಎಂದು ಎಲ್ ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ. ಎಲ್ ಜೆಪಿ ಒಡೆಯುವ ಪ್ರಯತ್ನದಲ್ಲಿ ತಮ್ಮ ಚಿಕ್ಕಪ್ಪ ಹಾಗೂ ಹಾಜಿಪುರ್ ಸಂಸದ ಪಶುಪತಿ ಕುಮಾರ್ ಪಾರಸ್ ನೇತೃತ್ವ ವಹಿಸಿಕೊಂಡಿದ್ದರು ಎಂದು ದೂಷಿಸಿದ್ದಾರೆ.
ಲೋಕ ಜನಶಕ್ತಿ ಪಕ್ಷದ ಕಾರ್ಯಕರ್ತರಿಗೆ ಬರೆದ ಬಹಿರಂಗ ಪತ್ರದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ವೇಳೆ ತಾವು ತೆಗೆದುಕೊಂಡ ನಿರ್ಧಾರ ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಸರಿಯಾಗಿದೆ ಎಂದು ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
'ನಾನು ಸಿಂಹದ ಮಗ' : ಚಿರಾಗ್ ಪಾಸ್ವಾನ್ ಎಚ್ಚರಿಕೆ
'ಲೋಕ ಜನಶಕ್ತಿ ಪಕ್ಷದ ಸಂಸ್ಥಾಪಕ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ತಮ್ಮ ಜೀವನದ ಉದ್ದಕ್ಕೂ ನಿತೀಶ್ ಕುಮಾರ್ ರಾಜಕೀಯದ ನೀತಿ ಮತ್ತು ಸಿದ್ದಾಂತಗಳಿಗೆ ವಿರುದ್ಧವಾಗಿದ್ದರು. ಅಂಥ ನಿತೀಶ್ ಕುಮಾರ್ ಇರುವ ಎನ್ ಡಿಎ ಒಕ್ಕೂಟದೊಂದಿಗೆ ಸೇರಿಕೊಂಡು ಚುನಾವಣೆಗೆ ಸ್ಪರ್ಧಿಸುವುದು ಕಷ್ಟವಾಗಿತ್ತು,' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎಲ್ ಜೆಪಿ ಇಬ್ಭಾಗಗೊಳಿಸುವಲ್ಲಿ ಜೆಡಿಯು ಹುನ್ನಾರ
"ಬಿಹಾರದಲ್ಲಿ ಜೆಡಿಯು ಯವಾಗಲೂ ಲೋಕ ಜನಶಕ್ತಿ ಪಕ್ಷವನ್ನು ಒಡೆಯುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. 2005ರಲ್ಲಿ 29 ಶಾಸಕರನ್ನು ಹೊಂದಿದ್ದ ಎಲ್ ಜೆಪಿ 2020ರ ವೇಳೆಗೆ ಕೇವಲ ಒಬ್ಬ ಶಾಸಕರನ್ನು ಹೊಂದುವಂತೆ ಮಾಡಿದೆ. ಈ ಬಾರಿ ಐದು ಸಂಸದರನ್ನು ಬಳಸಿಕೊಂಡು ಜೆಡಿಯು ಒಡೆದು ಆಳುವ ನೀತಿಯನ್ನು ಪ್ರದರ್ಶಿಸುತ್ತಿದೆ. ಈ ಹಿಂದೆಯೂ ಕೂಡಾ ಮುಖ್ಯಮಂತ್ರಿ ನಿತೀಶ್ ಕುಮಾರ್ ನಮ್ಮ ನಾಯಕ ರಾಮ್ ವಿಲಾಸ್ ಪಾಸ್ವಾನ್ ಜೀವಿತವಧಿಯಲ್ಲಿ ಹಲವು ಬಾರಿ ರಾಜಕೀಯವಾಗಿ ತುಳಿಯುವುದಕ್ಕೆ ಪ್ರಯತ್ನಿಸಿದ್ದರು," ಎಂದು ಚಿರಾಗ್ ಪಾಸ್ವಾನ್ ದೂಷಿಸಿದ್ದಾರೆ.
"ನನ್ನ ಬಗ್ಗೆ ಮಾತನಾಡದಿದ್ದರೆ ಅವರಿಗೆ ಪ್ರಚಾರ ಸಿಗುವುದೇ?"
"ತಮ್ಮ ಪ್ರಚಾರಕ್ಕಾಗಿ ಕೆಲವರು ನನ್ನ ಬಗ್ಗೆ ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ. ಒಂದು ವೇಳೆ ಅವರು ನನ್ನ ವಿರುದ್ಧ ಮಾತನಾಡದಿದ್ದರೆ, ಅವರಿಗೆ ಹೇಗೆ ತಾನೇ ಪ್ರಚಾರ ಸಿಗುವುದಕ್ಕೆ ಸಾಧ್ಯವಾಗುತ್ತದೆ," ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಮಧ್ಯೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಪತ್ರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನಡುವೆ ವಿಭಜನೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
|
ಕಳೆದ 7 ವರ್ಷಗಳಿಂದ ಬಿಜೆಪಿ ಜೊತೆಗೆ ಲೋಕ ಜನಶಕ್ತಿ ಪಕ್ಷ
"ಬಿಹಾರದಲ್ಲಿ ನನ್ನನ್ನು ಹಾಗೂ ತಮ್ಮ ತಂದೆಯನ್ನು ಅವಮಾನಿಸುವ ಹಾಗೂ ರಾಜಕೀಯವಾಗಿ ಮುಗಿಸುವ ಯಾವುದೇ ಪ್ರಯತ್ನವನ್ನು ನಿತೀಶ್ ಕುಮಾರ್ ಕಳೆದುಕೊಳ್ಳಲಿಲ್ಲ. ಆದರೆ ನಮ್ಮ ತಂದೆ ಎಂದಿಗೂ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡವರಲ್ಲ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ( ಎನ್ ಡಿಎ)ದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೆಸರು ಘೋಷಣೆಯಾಗುತ್ತಿದ್ದಂತೆ ನಿತೀಶ್ ಕುಮಾರ್ ಒಕ್ಕೂಟವನ್ನು ತೊರೆದರು. ಆದರೆ 2014ರಿಂದಲೂ ಎನ್ ಡಿಎ ಜೊತೆಗೆ ಲೋಕ ಜನಶಕ್ತಿ ಪಕ್ಷ ಗುರುತಿಸಿಕೊಂಡಿದೆ," ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
2017ರಲ್ಲಿ ಮತ್ತೆ ಎನ್ ಡಿಎ ಒಕ್ಕೂಟಕ್ಕೆ ನಿತೀಶ್
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎನ್ ಡಿಎ ಮೈತ್ರಿಕೂಟವನ್ನು ತೊರೆದ ನಿತೀಶ್ ಕುಮಾರ್ 2017ರಲ್ಲಿ ರಾತ್ರೋರಾತ್ರಿ ದಿಢೀರನೇ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸೇರಿಕೊಂಡರು. ಅಂದು ನಿತೀಶ್ ಕುಮಾರ್ ಸೇರಿಕೊಂಡಿರುವ ಒಕ್ಕೂಟದಲ್ಲಿ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುವುದು ಸ್ವತಃ ನಮ್ಮ ತಂದೆಯವರಿಗೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲಿನ ವಿಶ್ವಾಸದಿಂದಾಗಿ ನಾವು ಒಕ್ಕೂಟದಲ್ಲಿ ಮುಂದುವರಿದೆವು," ಎಂದು ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.
ಐದು ಸಂಸದರಿಗೆ ಗೇಟ್ ಪಾಸ್ ನೀಡಿದ ಎಲ್ ಜೆಪಿ
ಬಿಹಾರದ ಲೋಕ ಜನಶಕ್ತಿ ಪಕ್ಷದ ಆರು ಸಂಸದರ ಪೈಕಿ ಐದು ಸಂಸದರು ಚಿರಾಗ್ ಪಾಸ್ವಾನ್ ಚಿಕ್ಕಪ್ಪ( ರಾಮ್ ವಿಲಾಸ್ ಪಾಸ್ವಾನ್ ಸಹೋದರ) ಪಶುಪತಿ ಕುಮಾರ್ ಪಾರಸ್ ಅನ್ನು ಬೆಂಬಲಿಸಿದ್ದರು. ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದಿರುವ ಐದು ಸಂಸದರನ್ನು ದಿಢೀರ್ ಬೆಳವಣಿಗೆಯೊಂದರಲ್ಲಿ ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಪಶುಪತಿ ಕುಮಾರ್ ಪಾರಸ್, ಶ್ರೀಮತಿ ಬೀನಾ ದೇವಿ, ಚೌಧರಿ ಮೆಹಬೂಬ್ ಅಲಿ ಕೈಸೆರ್, ಚಂದನ್ ಸಿಂಗ್, ಪ್ರಿನ್ಸ್ ರಾಜ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದಲೇ ಉಚ್ಛಾಟಿಸಲಾಗಿದೆ.
ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ
ಬಿಹಾರದಲ್ಲಿ ನಡೆದ 243 ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿತು. ಜೆಡಿಯು ಜೊತೆ ಜಿದ್ದಿಗೆ ಬಿದ್ದ ಎಲ್ ಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲುವುದಕ್ಕೆ ಸಾಧ್ಯವಾಯಿತು. ಚಿರಾಗ್ ಪಾಸ್ವಾನ್ ಹಠದಿಂದಾಗಿ ಎಲ್ ಜೆಪಿ 30 ಕ್ಷೇತ್ರಗಳನ್ನು ಕಳೆದುಕೊಂಡಿತು ಎಂದು ಪಕ್ಷದ ನಾಯಕರು ದೂರಿದ್ದಾರೆ. ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ಆಟ ಶುರು ಮಾಡಿದರು. "ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) ಹಾಗೂ ಚಿರಾಗ್ ಪಾಸ್ವಾನ್ ನಡುವೆ ಯಾವುದೇ ಸಂಪರ್ಕ ಇಲ್ಲ," ಎಂದು ಸ್ಪಷ್ಟಪಡಿಸಿದ್ದರು.