ಎನ್ಡಿಎ ಗೆದ್ದಿದ್ದು ಹಣ, ತೋಳ್ಬಲದಿಂದ: ತೇಜಸ್ವಿ ಯಾದವ್ ಆರೋಪ
ಪಟ್ನಾ, ನವೆಂಬರ್ 12: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎಗೆ ತೀವ್ರ ಪೈಪೋಟಿ ನೀಡಿದ ಬಳಿಕ ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ವಿರೋಚಿತ ಸೋಲು ಕಂಡಿದೆ. ತಮಗೆ ಜನರ ಬೆಂಬಲ ಸಿಕ್ಕಿದೆ. ಆದರೆ ಎನ್ಡಿಎಗೆ ಹಣ, ತೋಳ್ಬಲ ಮತ್ತು ವಂಚನೆಯ ಮೂಲಕ ಗೆಲುವು ಸಾಧಿಸಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ಅವರ ಜೆಡಿಯು ಮೂರನೇ ಸ್ಥಾನಕ್ಕೆ ಕುಸಿದಿದೆ. ಅವರಿಗೆ ಆತ್ಮಸಾಕ್ಷಿ ಎಂಬುದು ಇನ್ನೂ ಇದ್ದರೆ ಮುಖ್ಯಮಂತ್ರಿ ಕುರ್ಚಿಯ ಮೇಲಿನ ತಮ್ಮ ಆಸೆಯನ್ನು ಬಿಟ್ಟುಬಿಡಬೇಕು ಎಂದು ತೇಜಸ್ವಿ ಹೇಳಿದ್ದಾರೆ.
"ತೇಜಸ್ವಿ ಯಾದವ್ ಒಳ್ಳೆ ಹುಡುಗ" ಎಂದ ಬಿಜೆಪಿ ಮುಖಂಡೆ ಉಮಾ ಭಾರತಿ!
'ನಾವು ಸುಮಾರು 20 ಕ್ಷೇತ್ರಗಳಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಸೋತಿದ್ದೇವೆ. ಅನೇಕ ಕ್ಷೇತ್ರಗಳಲ್ಲಿ ಸುಮಾರು 900ಕ್ಕೂ ಅಧಿಕ ಅಂಚೆ ಮತಪತ್ರಗಳನ್ನು ಅಸಿಂಧು ಎಂದು ಪರಿಗಣಿಸಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.
'ನಾವು ಕಡಿಮೆ ಅಂತರದಿಂದ ಸೋಲು ಕಂಡ ಕ್ಷೇತ್ರಗಳಲ್ಲಿ ಅಂಚೆ ಮತಪತ್ರಗಳ ಮರುಎಣಿಕೆ ಮಾಡುವಂತೆ ನಾವು ಒತ್ತಾಯಿಸುತ್ತೇವೆ. ಏಕೆಂದರೆ ಅಂಚೆಮತಪತ್ರಗಳನ್ನು ಆರಂಭದಲ್ಲಿ ಎಣಿಕೆ ಮಾಡಿಲ್ಲ. ಬದಲಾಗಿ ಕೊನೆಯಲ್ಲಿ ಎಣಿಕೆ ಮಾಡಲಾಗಿದೆ' ಎಂದು ಅವರು ಹೇಳಿದ್ದಾರೆ.
ತೇಜಸ್ವಿ ಯಾದವ್ರನ್ನೇ ಬಿಹಾರ ಸಿಎಂ ಮಾಡುತ್ತಾರಾ ನಿತೀಶ್ ಕುಮಾರ್?
ಎನ್ಡಿಎ ಮೈತ್ರಿಕೂಟವು ಮಹಾಘಟಬಂಧನಕ್ಕಿಂತ 15 ಹೆಚ್ಚು ಸೀಟುಗಳಲ್ಲಿ ಗೆಲ್ಲಲು ಯಶಸ್ವಿಯಾದರೂ ಕೇವಲ 12,270 ಅಧಿಕ ಮತಗಳನ್ನಷ್ಟೇ ಪಡೆಯಲು ಯಶಸ್ವಿಯಾಗಿರುವುದು ಅಚ್ಚರಿ ಮೂಡಿಸುತ್ತದೆ ಎಂದಿದ್ದಾರೆ.