ಬಿಹಾರದಲ್ಲಿ ನಡೆಯೋದಿಲ್ಲ ಸಿಎಎ ಮತ್ತು ಎನ್ಆರ್ ಸಿ ಆಟ -ನಿತೀಶ್ ಕುಮಾರ್
ಪಾಟ್ನಾ, ಡಿಸೆಂಬರ್.20: ಬಿಹಾರದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸದಿರಲು ಸಿಎಂ ತೀರ್ಮಾನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದೇ ತಂದಿದ್ದು. ಕೇಂದ್ರ ಸರ್ಕಾರದ ವಿರುದ್ಧ ಜನರಷ್ಟೇ ರೊಚ್ಚಿಗೇಳುತ್ತಿಲ್ಲ. ಬಿಜೆಪಿಯ ಮಿತ್ರ ಪಕ್ಷಗಳೇ ಕೇಂದ್ರ ಸರ್ಕಾರದ ನೂತನ ಕಾಯ್ದೆ ವಿರುದ್ಧ ಸಿಡಿದೇಳುತ್ತಿದ್ದಾರೆ.
ಎನ್ಆರ್ಸಿ ಗೆ ಬೆಂಬಲ ಇಲ್ಲ ಎಂದ ನವೀನ್ ಪಟ್ನಾಯಕ್, ಬಿಜೆಪಿಗೆ ಆಘಾತ
ಇತ್ತೀಚಿಗಷ್ಟೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಎನ್ ಡಿಎ ನೇತೃತ್ವದಲ್ಲೇ ಗುರುತಿಸಿಕೊಂಡಿದ್ದ ಬಿಜೆಡಿ ಕೂಡಾ ಧ್ವನಿಯೆತ್ತಿತ್ತು. ಲೋಕಸಭೆಯಲ್ಲಿ ಮಸೂದೆ ಮಂಡಿಸಿದಾಗಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತಿದ್ದುಪಡಿ ಮಸೂದೆಗೆ ತಮ್ಮ ಬೆಂಬಲವಿಲ್ಲ ಎಂದು ಹೇಳಿದ್ದರು.
ನವೀನ್ ಪಟ್ನಾಯತ್ ಬಳಿಕ ನಿತೀಶ್ ಕುಮಾರ್ ಸರದಿ:
ಪೌರತ್ವ ತಿದ್ದುಪಡಿ ಕಾಯ್ದೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬೆನ್ನಲ್ಲೇ ಎನ್ ಡಿಎ ಮೈತ್ರಿಕೂಟದ ಜೊತೆ ಗುರುತಿಸಿಕೊಂಡಿದ್ದ ಮತ್ತೊಂದು ಪಕ್ಷವಾಗಿರುವ ಜೆಡಿಯು ಕೂಡಾ ವಿರೋಧ ವ್ಯಕ್ತಪಡಿಸಿದೆ. ಬಿಹಾರದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೊಳಿಸದಿರಲು ಮುಖ್ಯಮಂತ್ರಿ ನಿತೀಶ್ ಕುಮಾರ್ ತೀರ್ಮಾನಿಸಿದ್ದಾರೆ.
ಡಿಸೆಂಬರ್.21ರಂದು ಬಿಹಾರದಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸಿ ಪ್ರತಿಭಟನೆ ನಡೆಸಲು ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ ) ನಿರ್ಧರಿಸಿತ್ತು. ಈ ಸಂಬಂಧ ಶನಿವಾರ ಬಿಹಾರ ಬಂದ್ ಗೆ ಕರೆ ನೀಡಲಾಗಿತ್ತು. ಅದಕ್ಕೂ ಮೊದಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.