'ಐ ಮಿಸ್ ಯು ಪಪ್ಪಾ', ಲಾಲೂ ಪುತ್ರನ ಭಾವನಾತ್ಮಕ ಟ್ವೀಟ್
ಮಹಾಘಟಬಂದನ್ ರ್ಯಾಲಿಯಲ್ಲಿ ಭಾಷಣ ಮಾಡಲು ಅವಕಾಶ ಸಿಗದ ಹಿನ್ನಲೆಯಲ್ಲಿ ಲಾಲೂ ಹಿರಿಯ ಪುತ್ರ ತೇಜ್ ಪ್ರತಾಪ್ ತೀವ್ರ ನಿರಾಶೆಗೊಂಡು, ತಂದೆಯನ್ನು ನೆನಪಿಸಿಕೊಂಡು ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ಪಾಟಲಿಪುತ್ರ, ಮೇ 18: ಮಹಾಘಟಬಂದನ್ ರ್ಯಾಲಿಯಲ್ಲಿ ಭಾಷಣ ಮಾಡಲು ಅವಕಾಶ ಸಿಗದ ಹಿನ್ನಲೆಯಲ್ಲಿ ಲಾಲೂ ಹಿರಿಯ ಪುತ್ರ ತೇಜ್ ಪ್ರತಾಪ್ ತೀವ್ರ ನಿರಾಶೆಗೊಂಡು, ತಂದೆಯನ್ನು ನೆನಪಿಸಿಕೊಂಡು ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಮತ್ತು ಆರ್ಜೆಡಿ ಜಂಟಿ ಸಾರ್ವಜನಿಕ ಸಭೆಯಲ್ಲಿ ಆಯೋಜಕರು ತೇಜ್ ಪ್ರತಾಪ್ ಗೆ ಭಾಷಣ ಮಾಡಲು ಅವಕಾಶ ನೀಡಿರಲಿಲ್ಲ. ಇದರಿಂದ, ಬೇಸರಗೊಂಡ ತೇಜ್ ಪ್ರತಾಪ್ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತೇಜ್ ಪ್ರತಾಪ್, ' ನನ್ನ ಪೂಜ್ಯ ತಂದೆಯ ಅನುಪಸ್ಥಿತಿಯಿಂದಾಗಿ ನನಗಿಂದು ಭಾಷಣ ಮಾಡಲು ಅವಕಾಶ ನೀಡಲಿಲ್ಲ, ಐ ಮಿಸ್ ಯು ಪಪ್ಪಾ' ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಖುದ್ದು ನನ್ನ ಬಳಿ ಬಂದು ಭಾಷಣ ಮಾಡುವಂತೆ ಹೇಳಿದ್ದರು. ಆದಾಗ್ಯೂ ನನಗೆ ಅವಕಾಶ ನೀಡಲಾಗಲಿಲ್ಲ ಬಿಹಾರದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಆದರೂ, ಇಲ್ಲಿನ ಮುಖಂಡರ ಕಾರ್ಯಶೈಲಿ ಬದಲಾಗುತ್ತಿಲ್ಲ ಎಂದು ತೇಜ್ ಪ್ರತಾಪ್ ಬೇಸರದ ಮಾತನ್ನಾಡಿದ್ದಾರೆ.
मेरे आदरणीय पिता के अनुपस्थिति की वजह से मुझे आज बोलने नहीँ दिया गया।#IMissYouPapa😭😭 pic.twitter.com/w5F6uIzckb
— Tej Pratap Yadav (@TejYadav14) May 16, 2019
ವರ್ಣರಂಜಿತ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಮೇವು ಹಗರಣದಿಂದ ಜೈಲು ಪಾಲಾದ ಮೇಲೆ, ಅವರ ಮನೆಯ ನೆಮ್ಮದಿ, ಪಕ್ಷದ ಭವಿಷ್ಯ ಮಂಕಾಗಿ ಹೋಗುತ್ತಿರುವ ನಡುವೆ, ಸಹೋದರರಿಬ್ಬರ ನಡುವಿನ ಮನಸ್ತಾಪವೂ ಕಮ್ಮಿಯಾಗುತ್ತಿಲ್ಲ.
ಪಕ್ಷದ ಚಟುವಟಿಕೆಯಿಂದ ದೂರವಿದ್ದರೂ ತೇಜ್ ಪ್ರತಾಪ್, ಸಹೋದರಿ ಮಿಸಾ ಭಾರತಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಇವರು ಪಾಟಲಿಪುತ್ರ ಕ್ಷೇತ್ರದ ಆರ್ಜೆಡಿ-ಕಾಂಗ್ರೆಸ್ ಅಭ್ಯರ್ಥಿ.