'ಶ್ರಮಿಕ'ರ ಮನಕಲಕುವ ಘಟನೆ: ಹಾಲು ತರುವಷ್ಟರಲ್ಲಿ ಕೊನೆಯುಸಿರೆಳೆದ ಕಂದಮ್ಮ
ಪಾಟ್ನಾ, ಮೇ 28: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಏಕಾಏಕಿ ಘೋಷಿಸಿದ ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರು ಎದುರಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಸ್ವಂತ ಊರು ಬಿಟ್ಟು, ಹೊಟ್ಟೆಪಾಡಿಗಾಗಿ ಬೇರೆಡೆ ಬಂದು ಜೀವನ ಸಾಗಿಸುತ್ತಿದ್ದವರಿಗೆ ಲಾಕ್ ಡೌನ್ ಅಕ್ಷರಶಃ ಶಾಪವಾಗಿ ಪರಿಣಮಿಸಿತು.
Recommended Video
ಅತ್ತ ಕೆಲಸ ಇಲ್ಲ, ಇತ್ತ ಕೈಯಲ್ಲಿ ಕಾಸಿಲ್ಲ. ಒಂದ್ಕಡೆ ಹಸಿವು, ಇನ್ನೊಂದೆಡೆ ರೋಗದ ಭೀತಿ.. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಗ್ರಾಮಕ್ಕೆ ತೆರಳುವುದೇ ಲೇಸು ಅಂತ ಲಕ್ಷಾಂತರ ಕಾರ್ಮಿಕರು 'ಶ್ರಮಿಕ್' ಸ್ಪೆಷಲ್ ರೈಲು ಹತ್ತುತ್ತಿದ್ದಾರೆ.
ಹಾಗೆ, ರೈಲು ಹತ್ತಿ ಊರಿಗೆ ಹೊರಟ್ಟಿದ್ದ ಓರ್ವ ವಲಸೆ ಕಾರ್ಮಿಕನ ಮಗು ರೈಲ್ವೇ ನಿಲ್ದಾಣದಲ್ಲೇ ಮೃತಪಟ್ಟ ಘಟನೆ ಮುಜಾಫರ್ ಪುರ್ ನಲ್ಲಿ ನಡೆದಿದೆ.
ಮೃತ ತಾಯಿಯ ಎಬ್ಬಿಸಲು ಕಂದನ ವಿಫಲ ಪ್ರಯತ್ನ: ರೈಲ್ವೆ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆ
ತಾಯಿ ಸತ್ತಿದ್ದಾಳೆ ಎಂಬ ಪರಿವೆ ಇಲ್ಲದೆ, ತಾಯಿಯನ್ನು ಎಬ್ಬಿಸುವ ವಿಫಲ ಪ್ರಯತ್ನ ನಡೆಸುತ್ತಿದ್ದ ಮಗುವಿನ ಹೃದಯ ವಿದ್ರಾವಕ ಘಟನೆ ಮಾಸುವ ಮುನ್ನವೇ ಮತ್ತೊಂದು ಮನಕಲಕುವ ಘಟನೆ ವರದಿಯಾಗಿದೆ.
ಮಗುವಿಗೆ ಹಾಲು ತರುವಷ್ಟರಲ್ಲಿ ನಾಲ್ಕುವರೆ ವರ್ಷದ ಕಂದಮ್ಮ ಕೊನೆಯುಸಿರೆಳೆದಿದೆ.
ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರಿ
ಬಿಹಾರ ಮೂಲದ ಮಖ್ಸೂದ್ ಅಲಮ್ ಅಲಿಯಾಸ್ ಮೊಹಮ್ಮದ್ ಪಿಂಟು ದೆಹಲಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಘೋಷಣೆಯಾಗಿದ್ರಿಂದ ಮೊಹಮ್ಮದ್ ಪಿಂಟುಗೆ ಕೆಲಸ ಇಲ್ಲದಂತಾಯಿತು. ಕೆಲಸ ಮತ್ತು ಕೈಯಲ್ಲಿ ಕಾಸು ಇಲ್ಲದ ಕಾರಣ ದೆಹಲಿಯ ಸ್ಲಂನಲ್ಲಿದ್ದ ಬಾಡಿಗೆ ಮನೆಯನ್ನು ತೊರೆದು ಬಿಹಾರದ ಸ್ವಗ್ರಾಮಕ್ಕೆ ತೆರಳಲು ಮೊಹಮ್ಮದ್ ಪಿಂಟು ಮುಂದಾದರು.
ನಿತ್ರಾಣಗೊಂಡಿದ್ದ ಮಗು
ಪತ್ನಿ ಝೆಬಾ ಮತ್ತು ನಾಲ್ಕುವರೆ ವರ್ಷದ ಮಗು ಇಶಾಖ್ ನೊಟ್ಟಿಗೆ ಮೊಹಮ್ಮದ್ ಪಿಂಟು ಶ್ರಮಿಕ್ ರೈಲು ಹತ್ತಿದರು. ಬಿಸಿಲ ಧಗೆಯಿಂದ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಮುಜಾಫರ್ ಪುರ್ ರೈಲ್ವೇ ನಿಲ್ದಾಣ ತಲುಪುವ ಹೊತ್ತಿಗೆ ನಿತ್ರಾಣಗೊಂಡಿತ್ತು.
ಲಾಕ್ ಡೌನ್ ವೇಳೆ ರಸ್ತೆ ಅಪಘಾತ; 196 ವಲಸೆ ಕಾರ್ಮಿಕರು ಸಾವು
ಮೃತಪಟ್ಟ ಕಂದಮ್ಮ
ಮಗುವಿಗೆ ಹಾಲು ತರಲು ಮುಜಾಫರ್ ಪುರ್ ರೈಲ್ವೇ ನಿಲ್ದಾಣದಲ್ಲಿ ಮೊಹಮ್ಮದ್ ಪಿಂಟು ಹುಡುಕಾಡಿದ್ದಾರೆ. ವಾಪಸ್ ಬರುವಷ್ಟರಲ್ಲಿ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿತ್ತು. ''ರಂಜಾನ್ ಹಬ್ಬವನ್ನು ಊರಲ್ಲಿ ಆಚರಿಸಬೇಕು ಅಂದುಕೊಂಡಿದ್ವಿ. ಆದ್ರೆ, ದೇವರು ನಮಗೆ ಇಂಥಾ ಶಿಕ್ಷೆ ನೀಡಿದ್ದಾನೆ'' ಎಂದು ಮಗನನ್ನು ಕಳೆದುಕೊಂಡ ತಂದೆ ಕಣ್ಣೀರಿಟ್ಟಿದ್ದಾರೆ. ಕಂದಮ್ಮನನ್ನು ಕಳೆದುಕೊಂಡ ತಾಯಿ ಆಘಾತಕ್ಕೊಳಗಾಗಿದ್ದಾರೆ.
ರೈಲ್ವೇ ನಿಲ್ದಾಣ ತಲುಪುವ ಮುನ್ನವೇ ಮಗು ಮೃತಪಟ್ಟಿತ್ತೇ.?
''ಮೊದಲೇ ಅನಾರೋಗ್ಯದಿಂದ ಮಗು ಬಳಲಿತ್ತು. ಮುಜಾಫರ್ ಪುರ್ ರೈಲ್ವೇ ನಿಲ್ದಾಣ ತಲುಪುವ ಮುನ್ನವೇ ಮಗು ಮೃತಪಟ್ಟಿದೆ. ವಿಷಯ ತಿಳಿದ ಕೂಡಲೆ ನಾವು ಹಾಜರ್ ಆಗಿದ್ದೇವೆ. ಸ್ವಗ್ರಾಮಕ್ಕೆ ತೆರಳಲು ಕುಟುಂಬಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ'' ಎಂದು ಡೆಪ್ಯೂಟಿ ಸೂಪರ್ ಇಂಟೆಂಡೆನ್ಟ್ ಆಫ್ ಪೊಲೀಸ್, ರೈಲ್ವೇ ರಮಾಕಾಂತ್ ಉಪಾಧ್ಯಾಯ್ ತಿಳಿಸಿದ್ದಾರೆ.