"ಉದ್ಯೋಗದ ಆಶ್ವಾಸನೆ ನೀಡುವುದೇ ಅನೇಕರಿಗೆ ಹೊಸ ಉದ್ಯೋಗ"
ಪಾಟ್ನಾ, ಅಕ್ಟೋಬರ್.19: ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ನಾಯಕರು ಮಾತಿನ ಏಟಿ-ಎದುರೇಟು ನೀಡುತ್ತಿದ್ದಾರೆ. ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ವಿರುದ್ಧ ಸಿಎಂ ನಿತೀಶ್ ಕುಮಾರ್ ವಾಗ್ದಾಳಿ ಮುಂದುವರಿಸಿದ್ದಾರೆ.
ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವ ತೇಜಸ್ವಿ ಯಾದವ್ ಅವರು, ಉದ್ಯೋಗ ಕೊಡಿಸುವ ಭರವಸೆ ನೀಡುವುದನ್ನೇ ಒಂದು ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸಿಎಂ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ.
ಬಿಹಾರ ಚುನಾವಣೆ: "ಬಿಹಾರಿ ಪುತ್ರ"ನಿಗಾಗಿ ಮತ ಕೇಳಿದ ಶತ್ರುಜ್ಞ ಸಿನ್ಹಾ
ಬಿಹಾರದಲ್ಲಿ ತಾವು ಅಧಿಕಾರಕ್ಕೆ ಬಂದರೆ 10 ಲಕ್ಷ ಜನರಿಗೆ ಉದ್ಯೋಗ ಕೊಡಿಸುವುದಾಗಿ ತೇಜಸ್ವಿ ಯಾದವ್ ಆಶ್ವಾಸನೆ ನೀಡಿದ್ದಾರೆ. ಬಹುಶಃ ಅವರಿಗೆ ಜ್ಞಾನ ಮತ್ತು ಅನುಭವದ ಕೊರತೆ ಹೆಚ್ಚಾದಂತೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳುವುದನ್ನೇ ಹೊಸ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸಿಎಂ ನಿತೀಶ್ ಕುಮಾರ್ ತಿವಿದಿದ್ದಾರೆ.
"ಉದ್ಯೋಗ
ನೀಡಲು
ಹಣ
ಎಲ್ಲಿಂದ
ಬರುತ್ತೆ":
ಕೆಲವು ಜನರಿಗೆ ಯಾವುದೇ ರೀತಿ ಜ್ಞಾನ ಇರುವುದಿಲ್ಲ. ಸುಖಾಸುಮ್ಮನೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ಮತ್ತು ಭರವಸೆಗಳನ್ನು ನೀಡುತ್ತಾ ಹೋಗುತ್ತಿದ್ದಾರೆ. ಉದ್ಯೋಗ ನೀಡುವುದಕ್ಕೆ ಹಣವು ಎಲ್ಲಿಂದ ಬರುತ್ತದೆ. ಲಕ್ಷಗಟ್ಟಲೆ ಜನರಿಗೆ ಉದ್ಯೋಗ ನೀಡುವುದು ಹೇಗೆ ಎಂಬ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದೇ ಮಾತನಾಡುತ್ತಿದ್ದಾರೆ. ಬಹುಶಃ ಅವರಿಗೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ನೀಡುವುದೇ ಹೊಸ ಉದ್ಯೋಗವಾದಂತೆ ಕಾಣುತ್ತದೆ ಎಂದು ಸಿಎಂ ನಿತೀಶ್ ಕುಮಾರ್ ಕಿಡಿ ಕಾರಿದ್ದಾರೆ.
ಮಾಜಿ ಸಿಎಂ ಲಾಲೂ ವಿರುದ್ಧವೂ ವಾಗ್ದಾಳಿ:
ಕಳೆದ 15 ವರ್ಷಗಳಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಪತ್ನಿಯನ್ನು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಿದ್ದೇ ದೊಡ್ಡ ಸಾಧನೆ. ಅದನ್ನು ಬಿಟ್ಟರೆ, ರಾಜ್ಯದ ಮಹಿಳೆಯರ ಶ್ರೇಯೋಭಿವೃದ್ಧಿ ಲಾಲೂ ಪ್ರಸಾದ್ ಯಾದವ್ ಆಗಲಿ, ರಾಷ್ಟ್ರೀಯ ಜನತಾ ಪಕ್ಷದ ಸರ್ಕಾರವಾಗಲಿ ಯಾವ ಕೆಲಸವನ್ನು ಮಾಡಿದೆ ಎಂದು ಸಿಎಂ ನಿತೀಶ್ ಕುಮಾರ್ ಪ್ರಶ್ನೆ ಮಾಡಿದ್ದರು.
ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.