ನೀವು ನಕಲಿ ಹಿಂದುಳಿದ ವರ್ಗದವರು: ಮೋದಿ ವಿರುದ್ಧ ತೇಜಸ್ವಿ ವಾಗ್ದಾಳಿ
ಪಟ್ನಾ, ಏಪ್ರಿಲ್ 18: 'ನಾನು ಹಿಂದುಳಿದ ವರ್ಗದವನು ಎಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಬಯ್ಯುತ್ತಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಆರೋಪದ ವಿರುದ್ಧ ವಾಗ್ದಾಳಿ ನಡೆಸಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಮೋದಿ ಅವರು ನಕಲಿ ಹಿಂದುಳಿದ ವರ್ಗದವರು ಎಂದು ಹೇಳಿದ್ದಾರೆ.
ಅಲ್ಲದೆ, ನರೇಂದ್ರ ಮೋದಿ ಒಬ್ಬ ಅವಕಾಶವಾದಿ. ಹಿಂದುಳಿದ ವರ್ಗದವರು ಎಂದು ಹೇಳಿಕೊಳ್ಳುವ ಅವರು ಹಿಂದುಳಿದ ವರ್ಗದವರಿಗಾಗಿ ಏನನ್ನೂ ಮಾಡಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಹಲವು ಸಲ ನನ್ನನ್ನು ಬೈದಿವೆ. ಆದರೆ ಈ ಸಲ ಇಡೀ ಹಿಂದುಳಿದ ವರ್ಗವನ್ನೇ ಕಳ್ಳರು ಎಂದು ಬ್ರ್ಯಾಂಡ್ ಮಾಡಿಬಿಟ್ಟರು. ಹಿಂದುಳಿದ ವರ್ಗದವರನ್ನು ವಿರೋಧ ಪಕ್ಷದವರು ಹೇಗೆ ನೋಡುತ್ತಾರೆ ಎಂಬುದಕ್ಕೆ ಸಾಕ್ಷ್ಯ ಇದು. ಇತ್ತೀಚೆಗೆ ನಾಮ್ ಧಾರ್ (ರಾಹುಲ್ ಗಾಂಧಿ) ಇಡೀ ಸಮುದಾಯವನ್ನು ಕಳ್ಳರು ಅಂತ ಬ್ರ್ಯಾಂಡ್ ಮಾಡಿದ್ದಾರೆ. ಯಾರ ಹೆಸರಿನಲ್ಲಿ ಮೋದಿ ಅಂತಿದೆಯೋ ಅವರೆಲ್ಲ ಕಳ್ಳರು ಎಂದಿದ್ದಾರೆ. ನಾನು ಹಿಂದುಳಿದ ವರ್ಗದವನು ಅಂತ ಬಯ್ತಾರೆ. ಇದು ಹಿಂದುಳಿದ ವರ್ಗದವರನ್ನು ನೋಡುವ ರೀತಿ ಎಂದು ಮೋದಿ ಬುಧವಾರ ಹೇಳಿದ್ದರು.
ಇದನ್ನು ಟೀಕಿಸಿರುವ ತೇಜಸ್ವಿ, ಮೋದಿ ನೈಜ ಹಿಂದುಳಿದ ವರ್ಗದವರಲ್ಲ. ಅವರು 55ನೇ ವಯಸ್ಸಿನವರೆಗೂ ಮೇಲ್ವರ್ಗದವರಾಗಿದ್ದರು. ಬಳಿಕ ಇದ್ದಕ್ಕಿದ್ದಂತೆ ಹಿಂದುಳಿದ ಸಮುದಾಯದವರಾದರು ಎಂದು ಮೋದಿ ಅವರ ಜಾತಿಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾನು ಹಿಂದುಳಿದ ವರ್ಗದವನು ಅಂತ ಹೀಗೆಲ್ಲ ಬಯ್ತಾರೆ ಎಂದ ಪ್ರಧಾನಿ ಮೋದಿ
ಪ್ರಧಾನಿ ಕಚೇರಿಯಲ್ಲಿ ಒಬ್ಬರೇ ಒಬ್ಬ ಒಬಿಸಿ ವ್ಯಕ್ತಿ ಕೆಲಸ ಮಾಡುತ್ತಿಲ್ಲ. ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳಲ್ಲಿ ಅಥವಾ ಪ್ರೊಫೆಸರ್ಗಳಾಗಿ ಯಾವ ಒಬಿಸಿ ವ್ಯಕ್ತಿಯೂ ಇಲ್ಲ ಎಂದು ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ತೇಜಸ್ವಿ ಯಾದವ್ ತಮ್ಮ ಖಾಸಗಿ ಸಂತೋಷಕ್ಕಾಗಿ ರಾಜಕೀಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಿದೆ.
ನಕಲಿ ಹಿಂದುಳಿದ ವರ್ಗದವರು
'ನರೇಂದ್ರ ಮೋದಿ ಒಬ್ಬ ನಕಲಿ ಹಿಂದುಳಿದ ವರ್ಗದವರು. ಹುಟ್ಟಿನಿಂದ 55ನೇ ವಯಸ್ಸಿನವರೆಗೂ ಅವರು ಮೇಲ್ವರ್ಗದವರಾಗಿದ್ದರು. ಇದ್ದಕ್ಕಿದ್ದಂತೆಯೇ ಒಂದು ದಿನ ಹಿಂದುಳಿದ ಸಮುದಾಯದವರಾದರು. ಉತ್ತಮ, ಪ್ರಾಮಾಣಿಕ ಮತ್ತು ನೈಜ ಹಿಂದುಳಿದ ವರ್ಗದ ವ್ಯಕ್ತಿ ಸುಳ್ಳು ಹೇಳುವುದಿಲ್ಲ ಅಥವಾ ನಾಟಕ ಮಾಡುವುದಿಲ್ಲ. ಗುಜರಾತಿ ಸರ್, ನೀವು ಹಿಂದುಳಿದ ವರ್ಗದ ಜನರು ಮೂರ್ಖರೆಂದು ಭಾವಿಸಿದ್ದೀರೇ? ಹಿಂದುಳಿದ ವರ್ಗದ ಜನರಿಗೆ ಮತ್ತು ಮೇಲ್ವರ್ಗದ ಜನರಿಗೆ ನೀವು ಏನು ಮಾಡಿದ್ದೀರಿ? ಎಂದು ತೇಜಸ್ವಿ ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದಾರೆ.
ತೇಜಸ್ವಿ ಒರಟಾಟಕ್ಕೆ ಬೇಸತ್ತು ಪಕ್ಷ ತೊರೆದ ಹಿರಿಯ ಮುಖಂಡ
|
ಒಬಿಸಿಯವರಿಗೆ ಏನನ್ನೂ ನೀಡಿಲ್ಲ
'ಪ್ರಿಯ ನರೇಂದ್ರ ಮೋದಿ ಜಿ, ನೀವು ಹುಟ್ಟಿನಿಂದ ಒಬಿಸಿ ಅಲ್ಲ. ಆದರೆ ನಕಲಿ ಒಬಿಸಿ. ಹೌದು ನೀವು ಕಳ್ಳತನ ಮಾಡಿದ್ದೀರಿ. ನೀವು ಹಿಂದುಳಿದ ವರ್ಗದವರಿಗೆ ಏನನ್ನು ಮಾಡಿದ್ದೀರಿ? ಪಿಎಂಒದಲ್ಲಿ ಒಬಿಸಿ ಒಬ್ಬರೇ ಒಬ್ಬ ಅಧಿಕಾರಿಯಿಲ್ಲ. ದೇಶದ ಯಾವ ಕುಲಪತಿ ಅಥವಾ ಪ್ರೊಫೆಸರ್ ಒಬಿಸಿಯವರಿಲ್ಲ. ಯಾವ ಸಂವಿಧಾನಾತ್ಮಕ ಸಂಸ್ಥೆಯ ನಿರ್ದೇಶಕರೂ ಒಬಿಸಿಯಲ್ಲ. ಜಾತಿ ಆಧಾರಿತ ಮೀಸಲಾತಿಯಲ್ಲಿ ಒಬಿಸಿಯ ಮೀಸಲಾತಿ ಪ್ರಮಾಣವನ್ನು ಏಕೆ ಹೆಚ್ಚಿಸಲಿಲ್ಲ?' ಎಂದು ಕೇಳಿದ್ದಾರೆ.
ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ
ರಾಹುಲ್ ಸಲಹೆಯಂತೆ ಟ್ವೀಟ್
'ತೇಜಸ್ವಿ ಯಾದವ್ ಒಬ್ಬ ಅಹಂಕಾರಿ, ಕೃತಘ್ನ ಮತ್ತು ಬಾಲಿಶ ವ್ಯಕ್ತಿತ್ವದವರು. ಅವರು ಬಿಹಾರದ ನಾಯಕರ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕ ಎಂದು ಕರೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಲಹೆಯಂತೆ ಟ್ವೀಟ್ಗಳನ್ನು ಮಾಡುತ್ತಾರೆ' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಲೇವಡಿ ಮಾಡಿದ್ದಾರೆ.
ಮೇ 23ಕ್ಕೆ ಆರ್ಜೆಡಿ ರಾಜಕೀಯ ಅಂತ್ಯ
ಒಬಿಸಿ ಸಮುದಾಯದ ಬೆಂಬಲ ಪಡೆದುಕೊಂಡಿರುವ ಆರ್ಜೆಡಿ, ರಾಮ ಮನೋಹರ್ ಲೋಹಿಯಾ ಅವರ ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ವಂಚಿಸಿದೆ ಎಂದು ಭೂಪೇಂದ್ರ ಆರೋಪಿಸಿದ್ದಾರೆ. ಈ ಕಾರಣದಿಂದಲೇ ಬಿಹಾರದ ಜನರು ಆರ್ಜೆಡಿಯನ್ನು ಲೋಕಸಭೆ ಚುನಾವಣೆಯಲ್ಲಿ ತಿರಸ್ಕರಿಸಲಿದ್ದಾರೆ. ಮೇ 23ರಂದು ಮತ ಎಣಿಕೆ ನಡೆದ ಬಳಿಕ ಅವರ ರಾಜಕೀಯಕ್ಕೆ ಅಂತ್ಯ ಹಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಾತಿ ವಿಚಾರದ ಕುರಿತು ಚರ್ಚೆಗೆ ಬರುವಂತೆಯೂ ಅವರು ತೇಜಸ್ವಿಗೆ ಸವಾಲು ಹಾಕಿದ್ದಾರೆ.