ಕನ್ಹಯ್ಯಾಗೆ ಟಿಕೆಟ್ ತಪ್ಪಿಸಿದ ತೇಜಸ್ವಿ: ಮಹಾಘಟಬಂಧನದಲ್ಲಿ ಬಿರುಕು?
ಪಟ್ನಾ, ಮಾರ್ಚ್ 23: ಬಿಹಾರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸುವ ಅಪೇಕ್ಷೆ ಹೊಂದಿದ್ದ ದೆಹಲಿ ಜೆಎನ್ಯು ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಆಸೆಗೆ ಮಹಾಮೈತ್ರಿಕೂಟ ತಣ್ಣೀರೆರಚಿದೆ.
ಬಿಹಾರದಲ್ಲಿ ಒಂದುಗೂಡಿರುವ ವಿರೋಧಪಕ್ಷಗಳು ಮಹಾಮೈತ್ರಿಕೂಟದ ಸೂತ್ರದಡಿ 40 ಕ್ಷೇತ್ರಗಳಿಗೆ ಸೀಟು ಹಂಚಿಕೆಯನ್ನು ಪ್ರಕಟಿಸಿವೆ. ಇದರಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) 20 ಸೀಟುಗಳನ್ನು ತನ್ನಲ್ಲಿ ಇರಿಸಿಕೊಂಡಿದ್ದರೆ, ಕಾಂಗ್ರೆಸ್ಗೆ ಕೇವಲ 9 ಸೀಟುಗಳನ್ನು ಬಿಟ್ಟುಕೊಡಲಾಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಈ ಸೀಟು ಹಂಚಿಕೆ ಒಪ್ಪಂದ ಕನ್ಹಯ್ಯಾಕುಮಾರ್ಗೆ ಹಿನ್ನಡೆಯುಂಟುಮಾಡಿದೆ. ಕನ್ಹಯ್ಯಾ ಸ್ಪರ್ಧೆ ಕುರಿತು ಸಹಮತವಿಲ್ಲದ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಅವರಿಗೆ ಟಿಕೆಟ್ ಸಿಗದಂತೆ ಆಯ್ಕೆಗಳಿಗೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಬಿಹಾರ: ತೇಜಸ್ವಿ ಅನುಪಸ್ಥಿತಿಯಲ್ಲಿ ಮಹಾಘಟಬಂದನ್ ಸೀಟು ಹಂಚಿಕೆ ಅಂತಿಮ
ಬಿಹಾರ ಮಹಾಘಟಬಂಧನ ಸೀಟು ಹಂಚಿಕೆ ಸೂತ್ರದಡಿ ತನಗೆ 3-4 ಕ್ಷೇತ್ರಗಳಿಗಿಂತ ಕಡಿಮೆ ನೀಡುವುದನ್ನು ಒಪ್ಪುವುದಿಲ್ಲ ಎಂದು ಸಿಪಿಐ ಹೇಳಿತ್ತು. ಆದರೆ, ಈ ಮೈತ್ರಿಕೂಟದಲ್ಲಿ ಸಿಪಿಐಅನ್ನು ಕಡೆಗಣಿಸಲಾಗಿದೆ. ಸಿಪಿಐ ಮತ್ತು ಸಿಪಿಐ (ಎಂ) ಪಕ್ಷಗಳನ್ನು ಇದರಲ್ಲಿ ಪರಿಗಣಿಸಿಯೇ ಇಲ್ಲ. ಕೇವಲ ಸಿಪಿಐಎಂಎಲ್ ಪಕ್ಷಕ್ಕೆ ಆರ್ಜೆಡಿಯ 20 ಸೀಟುಗಳ ಕೋಟಾದಲ್ಲಿಯೇ ಒಂದೇ ಒಂದು ಸೀಟನ್ನು ನೀಡಲಾಗಿದೆ.
ಮಹಾಮೈತ್ರಿಕೂಟದಿಂದ ದ್ರೋಹ
'ಇದು ರಾಜಕೀಯ ವಂಚನೆ. ಮಹಾಮೈತ್ರಿಕೂಟ ನಮಗೆ ದ್ರೋಹ ಬಗೆದಿದೆ' ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸತ್ಯ ನಾರಾಯಣ್ ಸಿಂಗ್ ಆರೋಪಿಸಿದ್ದಾರೆ.
'ಅವರು ಒಂದು ವರ್ಷದ ಹಿಂದೆಯೇ ಮೈತ್ರಿಕೂಟಕ್ಕೆ ಒಪ್ಪಿಕೊಂಡಿದ್ದರು. ನಾನು ಲಾಲೂ ಪ್ರಸಾದ್ ಅವರನ್ನು ಮೂರು ಬಾರಿ ಭೇಟಿ ಮಾಡಿದ್ದೆ. ಅವರ ಬಳಿ ದೂರವಾಣಿಯಲ್ಲಿ ಮಾತನಾಡಿದ್ದೆ. ತೇಜಸ್ವಿ ಯಾದವ್ ಅವರೊಂದಿಗೂ ಮಾತುಕತೆ ನಡೆಸಿದ್ದೆ. ಮೈತ್ರಿಕೂಟದಲ್ಲಿ ನಮಗೂ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಅಕ್ಟೋಬರ್ 25ರಂದು ನಡೆದ ಸಮಾವೇಶದಲ್ಲಿ ಆರ್ಜೆಡಿ ರಾಜ್ಯ ಘಟಕದ ಅಧ್ಯಕ್ಷ ರಾಮಚಂದ್ರ ಪೂರ್ವೆ ಮತ್ತು ಮುಖಂಡ ತನ್ವೀರ್ ಹಾಸನ್ ನಾವು ಒಂದಾಗಿ ಹೋರಾಟ ನಡೆಸೋಣ ಎಂದಿದ್ದರು. ಈಗ ಅವರೇ ಓಡಿಹೋಗಿದ್ದಾರೆ' ಎಂದು ಕಿಡಿಕಾರಿದ್ದಾರೆ.
ಸಮೀಕ್ಷೆ: ಮೋದಿ- ನಿತೀಶ್ ಜೋಡಿಯ ಮೋಡಿ, ಬಿಹಾರದಲ್ಲಿ ಕೇಸರಿ ಅಲೆ
ಕನ್ಹಯ್ಯಾ ಸ್ಪರ್ಧೆ ಖಚಿತ
ಬೇಗುಸರೈ ಕ್ಷೇತ್ರದಿಂದ ಸ್ಪರ್ಧೆಗೆ ಪಕ್ಷ ಮತ್ತು ಕನ್ಹಯ್ಯಾ ಕುಮಾರ್ ಇಬ್ಬರೂ ಸಿದ್ಧರಾಗಿದ್ದೆವು. ಈಗಲೂ ಮೈತ್ರಿ ಇರಲಿ, ಇಲ್ಲದಿರಲಿ ಪಕ್ಷದ ಬಯಕೆಯಂತೆ ಸ್ಪರ್ಧೆ ಖಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ಅವರು ನಮ್ಮ ಬಾಗಿಲನ್ನು ಮುಚ್ಚಿದ್ದಾರೆ. ಆದರೆ, ಬೇಗುಸರೈನಲ್ಲಿ ನಮ್ಮ ಹೋರಾಟ ಖಂಡಿತವಾಗಿಯೂ ಇರಲಿದೆ. ಮತ್ತು ನಮ್ಮ ಸಿದ್ಧತೆಗಳು ನಡೆದಿವೆ' ಎಂದು ಸಿಂಗ್ ತಿಳಿಸಿದ್ದಾರೆ.
ಮಧುಬನಿ, ಮೋತಿಹರಿ ಮತ್ತು ಖಗಾರಿಯಾ ಕ್ಷೇತ್ರಗಳಿಂದಲೂ ಸಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಬಿಹಾರದಲ್ಲಿನ ತನ್ನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಮಾರ್ಚ್ 24ರಂದು ಪಕ್ಷದ ಸಭೆ ನಡೆಸಲು ನಿರ್ಧರಿಸಲಾಗಿದೆ.
ಕನ್ಹಯ್ಯಾ ಸಮರ್ಥ ಅಭ್ಯರ್ಥಿಯಲ್ಲ
ಬಿಜೆಪಿಯ ಗಿರಿರಾಜ್ ಸಿಂಗ್ ಅವರ ಎದುರು ಸ್ಪರ್ಧಿಸುವಷ್ಟು ಕನ್ಹಯ್ಯಾ ಕುಮಾರ್ ಸಮರ್ಥರಾಗಿಲ್ಲ. ಗಿರಿರಾಜ್ ಸಿಂಗ್ ಅವರಿಗೆ ಇರುವ ಜಾತಿ ಬಲ ಕನ್ಹಯ್ಯಾಗೆ ಸಿಗಲಾರದು ಎಂದು ಆರ್ಜೆಡಿ ಆಲೋಚಿಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಕನ್ಹಯ್ಯಾ ಸಾಕಷ್ಟು ವಿವಾದಿತ ವ್ಯಕ್ತಿ. ಅವರನ್ನು ಬೆಂಬಲಿಸಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ತೇಜಸ್ವಿ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಲಾಲೂ ಅವರು ಕನ್ಹಯ್ಯಾಗೆ ಬೆಂಬಲ ನೀಡಿದ್ದರೂ, ಈಗ ಪಕ್ಷದ ಪ್ರಮುಖ ನಿರ್ಧಾರಗಳನ್ನು ತೇಜಸ್ವಿ ಯಾದವ್ ತೆಗೆದುಕೊಳ್ಳುವುದರಿಂದ ಕನ್ಹಯ್ಯಾಗೆ ಬಾಗಿಲು ತೆರೆಯದಿರುವ ತೀರ್ಮಾನ ಅವರೇ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಪ್ರಭಾವ ತಗ್ಗುತ್ತದೆ
ದೆಹಲಿಯ ಜೆಎನ್ಯುದಲ್ಲಿ ಕನ್ಹಯ್ಯಾ ಸಂಸದನಾಗುವುದನ್ನು ಇಷ್ಟಪಡದ ಅವರ ವಿರೋಧಿ ಆರ್ಜೆಡಿ ಬೆಂಬಲಿಗರು ಸಭೆ ನಡೆಸಿದ್ದರು. ಜೆಎನ್ಯುದ ಕೆಲವು ವಿದ್ಯಾರ್ಥಿಗಳು, ದಿಲೀಪ್ ಮಂಡಲ್, ಜಯಂತ್ ಜಿಗ್ಯಾಸು ಮತ್ತು ರಾಜ್ಯಸಭಾ ಸಂಸದ ಮನೋಜ್ ಝಾ ಮುಂತಾದವರಿಗೆ ಕನ್ಹಯ್ಯಾ ಕುರಿತು ಸಮಸ್ಯೆ ಇದೆ. ಒಂದು ವೇಳೆ ಕನ್ಹಯ್ಯಾ ಗೆದ್ದರೆ ದೆಹಲಿಯಲ್ಲಿ ಎಡಪಂಥೀಯ ವಲಯಗಳಲ್ಲಿನ ತಮ್ಮ ಪ್ರಭಾವ ತಗ್ಗಲಿದೆ ಎಂಬ ಕಾರಣಕ್ಕೆ ಅವರು ಕನ್ಹಯ್ಯಾರನ್ನು ವಿರೋಧಿಸುತ್ತಿದ್ದಾರೆ ಎಂದು ಸತ್ಯನಾರಾಯಣ್ ಸಿಂಗ್ ಹೇಳಿದ್ದಾರೆ.