ನಾನು ಬಿಜೆಪಿ ಬಿಟ್ಟು ಹೊರಟಾಗ ಅಡ್ವಾಣಿ ಕಣ್ಣಲ್ಲಿ ನೀರಿತ್ತು: ಶತ್ರುಘ್ನ ಸಿನ್ಹಾ
ಪಾಟ್ನಾ, ಮೇ 15: "ನಾನು ಬಿಜೆಪಿ ತೊರೆಯುವುದಕ್ಕೂ ಮುನ್ನ ಎಲ್ ಕೆ ಅಡ್ವಾಣಿ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಆಗ ಅವರ ಕಣ್ಣಲ್ಲಿ ನೀರು ತುಂಬಿತ್ತು" ಎಂದು ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಹೇಳಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಎನ್ ಡಿಟಿವಿ ಜೊತೆ ಮಾತನಾಡುತ್ತಿದ್ದ ಅವರು, "ನಾನು ಸರಿಯಾದ ದಿಕ್ಕನ್ನು ಆರಿಸಿಕೊಂಡಿದ್ದೇನೆ. ನನ್ನೊಂದಿಗೆ ಎಲ್ ಕೆ ಅಡ್ವಾಣಿ ಅವರ ಆಶೀರ್ವಾದವಿದೆ. ಇನ್ನೇನು ಬೇಕು? ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದು ಅವರಿಗೆ ಹೇಳಿದಾಗ ಅವರು ನನ್ನನ್ನು ತಡೆಯಲಿಲ್ಲ. ಹೋಗಬೇಡ, ಪಕ್ಷದಲ್ಲೇ ಇರು ಎನ್ನಲೂ ಇಲ್ಲ. ಆದರೆ ಅವರ ಕಣ್ಣಲ್ಲಿ ನೀರು ತುಂಬಿತ್ತು" ಎಂದು ಸಿನ್ಹಾ ಹೇಳಿದರು.
ವಾಜಪೇಯಿ ಕೋಪದಿಂದ ಮೋದಿಯನ್ನು ಉಳಿಸಿದ್ದು ಅಡ್ವಾಣಿ: ಸಿನ್ಹಾ
"ಆಯ್ತು ಹೋಗು, ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಅಡ್ವಾಣಿ ನನ್ನ ಬಳಿ ಹೇಳಿದರು. ಅವರು ನನ್ನನ್ನು ಹೋಗಬೇಡ ಎಂದು ತಡೆಯದಿದ್ದರೂ, ಅವರ ಮನಸ್ಸಿನ ದುಃಖ ಅವರ ಕಣ್ಣಲ್ಲಿದ್ದ ನೀರಿನಲ್ಲಿ ಕಾಣುತ್ತಿತ್ತು ಎಂದು ಸಿನ್ಹಾ ಹೇಳದರು.
ಇಪ್ಪತ್ತು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಸಿನ್ಹಾ, ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೂ ಒಡನಾಡಿದ್ದರು. ಆ ದಿನಗಳನ್ನು ನೆನಪಿಸಿಕೊಂಡ 72 ವರ್ಷ ವಯಸ್ಸಿನ ಸಿನ್ಹಾ, "ಆಗಿನದು ಪ್ರಜಾಪ್ರಭುತ್ವ, ಈಗಿನದು ಸರ್ವಾಧಿಕಾರ. ಈಗಿನ ಬಿಜೆಪಿ ನಾಯಕರು ಪಕ್ಷದ ಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಅಡ್ವಾಣಿ, ವಾಜಪೇಯಿ ಅವರಿಗೆ ನೀಡಿದ ಗೌರವ(!)ವನ್ನು ನೋಡಿದರೆ ಗೊತ್ತಾಗುತ್ತದೆ" ಎಂದು ಸಿನ್ಹಾ ಲೇವಡಿ ಮಾಡಿದರು.
ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಮಾತನ್ನೇ ಪುನರುಚ್ಚರಿಸಿದ ನಿತಿನ್ ಗಡ್ಕರಿ
ಇತ್ತೀಚೆಗಷ್ಟೇ ಬಿಜೆಪಿ ತೊರೆದ ಶತ್ರುಘ್ನ ಸಿನ್ಹಾ, ಮೋದಿ ನಾಯಕತ್ವವನ್ನು ಹಲವು ದಿನಗಳಿಂದ ವಿರೋಧಿಸುತ್ತ ಬಂದಿದ್ದರು. ಅವರಿಗೆ ಬಿಜೆಪಿ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಟಿಕೆಟ್ ನೀಡದ ಕಾರಣಕ್ಕೆ ಅವರು ಕಾಂಗ್ರೆಸ್ ನಿಂದ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕಣದಲ್ಲಿದ್ದಾರೆ.