ಬಿಹಾರದಲ್ಲಿ ಬಿಕ್ಕಟ್ಟು: ಲೋಕ ಜನಶಕ್ತಿ ಪಕ್ಷದಲ್ಲಿ ಮಗನ ವಿರುದ್ಧವೇ ಚಿಕ್ಕಪ್ಪನ ದಂಗೆ
ಪಾಟ್ನಾ, ಜೂನ್ 15: ಲೋಕ ಜನಶಕ್ತಿ ಪಕ್ಷ. ಹೇಳಿಕೊಳ್ಳುವಂಥ ದೊಡ್ಡ ಪಕ್ಷವಾಗಿ ಗುರುತಿಸಿಕೊಳ್ಳದಿದ್ದರೂ ಬಿಹಾರದಲ್ಲಿ ತನ್ನದೇ ಆಗಿರುವ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರುವ ರಾಜಕೀಯ ಪಕ್ಷ. ಪ್ರಧಾನಮಂತ್ರಿ ನರೇಂದ್ರ ಮೋದಿ 'ರಾಮ' ಎಂದಾದರೆ ನಾನೇ 'ಹನುಮಾನ್' ಎಂದು ಹೇಳಿಕೆ ನೀಡಿದ್ದ ಚಿರಾಗ್ ಪಾಸ್ವಾನ್ ಪಕ್ಷದಲ್ಲೇ ಆಂತರಿಕ ದಂಗೆ ಶುರುವಾಗಿದೆ.
ಬಿಹಾರ ರಾಜಕಾರಣದಲ್ಲಿ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಚಿರಾಗ್ ಪಾಸ್ವಾನ್ ಅನ್ನು ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ. ಸೂರಜ್ ಬಾನ್ ಸಿಂಗ್ ಅನ್ನು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆಗಾಗಿ ಚುನಾವಣೆ ನಡೆಸುವ ಅಧಿಕಾರವನ್ನು ಇವರಿಗೆ ನೀಡಲಾಗಿದೆ.
ಚಿರಾಗ್ ವಿರುದ್ಧ ಕ್ರಮದ ಬಗ್ಗೆ ಬಿಜೆಪಿ ನಿರ್ಧರಿಸಲಿ: ನಿತೀಶ್ ಕುಮಾರ್
ಲೋಕಜನಶಕ್ತಿ ಪಕ್ಷದ ಆರು ಮಂದಿ ಸಂಸದರ ಪೈಕಿ ಐವರು ಸಂಸದರು ಚಿರಾಗ್ ಪಾಸ್ವಾನ್ ನಾಯಕತ್ವವನ್ನು ಪ್ರಶ್ನೆ ಮಾಡಿದ್ದರು. ಅಲ್ಲದೇ, ಚಿರಾಗ್ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅನ್ನು ತಮ್ಮ ನಾಯಕ ಎಂದು ಆಯ್ಕೆ ಮಾಡಲು ಮುಂದಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹುನ್ನಾರ ಅಡಗಿದೆ ಎಂದ ಆರೋಪ ಕೇಳಿ ಬರುತ್ತಿದೆ. ಬಿಹಾರ ರಾಜಕಾರಣದಲ್ಲಿ ನಡೆಯುತ್ತಿರುವ ದಿಢೀರ್ ಬೆಳವಣಿಗೆಗಳೇನು, ಈ ರಾಜಕೀಯ ಚದುರಂಗದ ಆಟದ ಹಿಂದಿನ ನಾಯಕರು ಯಾರು, ಚಿರಾಗ್ ಪಾಸ್ವಾನ್ ಮುಂದಿನ ಹಾದಿ ಏನು ಎಂಬುವುದರ ಕುರಿತು ವಿಶೇಷ ವರದಿಗಾಗಿ ಮುಂದೆ ಓದಿ.
ಐದು ಸಂಸದರಿಗೆ ಗೇಟ್ ಪಾಸ್ ನೀಡಿದ ಎಲ್ ಜೆಪಿ
ಬಿಹಾರದ ಲೋಕ ಜನಶಕ್ತಿ ಪಕ್ಷದ ಆರು ಸಂಸದರ ಪೈಕಿ ಐದು ಸಂಸದರು ಚಿರಾಗ್ ಪಾಸ್ವಾನ್ ಚಿಕ್ಕಪ್ಪ( ರಾಮ್ ವಿಲಾಸ್ ಪಾಸ್ವಾನ್ ಸಹೋದರ) ಪಶುಪತಿ ಕುಮಾರ್ ಪಾರಸ್ ಅನ್ನು ಬೆಂಬಲಿಸಿದ್ದರು. ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದಿರುವ ಐದು ಸಂಸದರನ್ನು ದಿಢೀರ್ ಬೆಳವಣಿಗೆಯೊಂದರಲ್ಲಿ ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಪಶುಪತಿ ಕುಮಾರ್ ಪಾರಸ್, ಶ್ರೀಮತಿ ಬೀನಾ ದೇವಿ, ಚೌಧರಿ ಮೆಹಬೂಬ್ ಅಲಿ ಕೈಸೆರ್, ಚಂದನ್ ಸಿಂಗ್, ಪ್ರಿನ್ಸ್ ರಾಜ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದಲೇ ಉಚ್ಛಾಟಿಸಲಾಗಿದೆ.
ಪಶುಪತಿ ಕುಮಾರ್ ಪಾರಸ್ ದಂಗೆ ಹಿಂದೆ ಸಿಎಂ ನೆರಳು?
ಲೋಕ ಜನಶಕ್ತಿ ಪಕ್ಷದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ಪಶುಪತಿ ಕುಮಾರ್ ಪಾರಸ್ ದಂಗೆ ಏಳುವುದರ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಹುನ್ನಾರವಿದೆಯೇ ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್ ಚಿಕ್ಕಪ್ಪನಿಗೆ ಕೇಂದ್ರ ಸಚಿವ ಸ್ಥಾನದ ಆಮಿಷ ತೋರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಶುಪತಿ ಕುಮಾರ್ ಪಾರಸ್ ತಮ್ಮ ಬೆಂಬಲಿಗರ ಜೊತೆ ಸೇರಿಕೊಂಡು ದಂಗೆ ಶುರು ಮಾಡಿದರು. ಚಿರಾಗ್ ವಿರುದ್ಧ ದಂಗೆ ಎದ್ದಿರುವ ಎಲ್ಲ ಸಂಸದರು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಗುಲ್ಲೆದ್ದಿದೆ.
"ಪಕ್ಷವನ್ನು ಒಡೆಯುವುದು ನನ್ನ ಉದ್ದೇಶವಲ್ಲ"
ಬಿಹಾರದ ಲೋಕ ಜನಶಕ್ತಿ ಪಕ್ಷದಲ್ಲಿ ದಂಗೆ ಎಬ್ಬಿಸಿರುವ ಪಶುಪತಿ ಕುಮಾರ್ ಪಾರಸ್ ಮೊದಲ ಬಾರಿಗೆ ಹಾಜಿಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎಲ್ ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಸಹೋದರ ಆಗಿರುವ ಪಾರಸ್, ರಾಜಕೀಯ ನಡೆಯ ಬಗ್ಗೆ ತಮ್ಮದೇ ವಾದ ಮಂಡಿಸಿದ್ದಾರೆ. "ನಮ್ಮ ಪಕ್ಷದಲ್ಲಿ ಆರು ಮಂದಿ ಸಂಸದರು ಇದ್ದಾರೆ. ಈ ಪೈಕಿ ಐದು ಸಂಸದರು ಸೇರಿಕೊಂಡು ಪಕ್ಷವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಆದ್ದರಿಂದ ನಾನು ಪಕ್ಷವನ್ನು ಒಡೆಯುತ್ತಿಲ್ಲ, ಬದಲಿಗೆ ರಕ್ಷಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದೇವೆ. ಚಿರಾಗ್ ಪಾಸ್ವಾನ್ ನನ್ನ ಪುತ್ರ ಅಲ್ಲದೇ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದು, ಆತನ ಬಗ್ಗೆ ನನ್ನ ವಿರೋಧವಿಲ್ಲ," ಎಂದು ಪಶುಪತಿ ಕುಮಾರ್ ಪಾರಸ್ ಹೇಳಿದ್ದಾರೆ.
ಬಿಹಾರದ ಎಲ್ ಜೆಪಿ ಇಬ್ಭಾಗಕ್ಕೆ ಕಾರಣವೇನು?
ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ವಿಧಿವಶರಾದ ನಂತರದಲ್ಲಿ ಚಿರಾಗ್ ಪಾಸ್ವಾನ್ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳಿಂದ ಲೋಕ ಜನಶಕ್ತಿ ಪಕ್ಷದ ಸಂಸದರು ಅಸಮಾಧಾನಗೊಂಡಿದ್ದರು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣದಿಂದ ದೂರ ಸರಿದು 243 ಕ್ಷೇತ್ರಗಳ ಪೈಕಿ 138 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಹಲವು ನಾಯಕರು ವಿರೋಧಿಸಿದ್ದರು. ಸ್ವಪಕ್ಷೀಯರ ವಿರೋಧದ ನಡುವೆಯೂ ಚಿರಾಗ್ ಪಾಸ್ವಾನ್ ತಮ್ಮ ನಡೆಯನ್ನು ಬದಲಿಸಲಿಲ್ಲ. ಇಂಥ ಏಕಪಕ್ಷೀಯ ನಿರ್ಧಾರಗಳಿಂದ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿತ್ತು.
ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ
ಬಿಹಾರದಲ್ಲಿ ನಡೆದ 243 ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿತು. ಜೆಡಿಯು ಜೊತೆ ಜಿದ್ದಿಗೆ ಬಿದ್ದ ಎಲ್ ಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲುವುದಕ್ಕೆ ಸಾಧ್ಯವಾಯಿತು. ಚಿರಾಗ್ ಪಾಸ್ವಾನ್ ಹಠದಿಂದಾಗಿ ಎಲ್ ಜೆಪಿ 30 ಕ್ಷೇತ್ರಗಳನ್ನು ಕಳೆದುಕೊಂಡಿತು ಎಂದು ಪಕ್ಷದ ನಾಯಕರು ದೂರಿದ್ದಾರೆ. ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ಆಟ ಶುರು ಮಾಡಿದರು. "ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) ಹಾಗೂ ಚಿರಾಗ್ ಪಾಸ್ವಾನ್ ನಡುವೆ ಯಾವುದೇ ಸಂಪರ್ಕ ಇಲ್ಲ," ಎಂದು ಸ್ಪಷ್ಟಪಡಿಸಿದ್ದರು.