ರಾಜ್ಯಸಭೆಗೆ ಸುಶೀಲ್ ಮೋದಿ ನಾಮನಿರ್ದೇಶನದ ಬಗ್ಗೆ ಚಿರಾಗ್ ಮಾತು!
ಪಾಟ್ನಾ, ನವೆಂಬರ್.29: ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿಯವರನ್ನು ರಾಜ್ಯಸಭೆ ಬಿಜೆಪಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿರುವ ಬಗ್ಗೆ ಮೊದಲ ಬಾರಿಗೆ ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮಾತನಾಡಿದ್ದಾರೆ.
ಲೋಕಜನಶಕ್ತಿ ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ನವೆಂಬರ್.26ರಂದು ಅಧಿಸೂಚನೆ ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಸುಶೀಲ್ ಮೋದಿ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದೆ. ಆ ಮೂಲಕ ಅವರ ಪಾತ್ರ ಮತ್ತು ಅಗತ್ಯತೆ ಬಿಹಾರಕ್ಕೆ ಇಲ್ಲದಾಗಿದೆ. ಅವರಿನ್ನು ಬಿಜೆಪಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಬೇಕಿರುವುದು ಸ್ಪಷ್ಟವಾಗಿದೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಬಯಸಿದ ಮಾಜಿ ಡಿಸಿಎಂ ಮೋದಿ
2019ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಈ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ರವಿಶಂಕರ್ ಪ್ರಸಾದ್ 2019ರಲ್ಲಿ ಸಂಸದರಾಗಿ ಚುನಾಯಿತರಾಗಿದ್ದರು. ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಅವರ ಪತ್ನಿ ರೀನಾ ಪಾಸ್ವಾನ್ ರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಬಗ್ಗೆ ಬೇಡಿಕೆ ಸಲ್ಲಿಸಲಾಗಿತ್ತು.
"ಬಿಜೆಪಿ ನಿರ್ಧಾರ ಆಂತರಿಕ ವಿಚಾರ ಎಂದ ಚಿರಾಗ್"
ರಾಜ್ಯಸಭಾ ಸ್ಥಾನವು ಬಿಜೆಪಿಗೆ ಸೇರಿದ್ದಾಗಿದೆ. ಇದೀಗ ತೆರವು ಆಗಿರುವ ಸ್ಥಾನದಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂಬುದನ್ನು ಬಿಜೆಪಿ ನಿರ್ಧಸಿರುತ್ತದೆ. ಅದು ಆ ಪಕ್ಷದ ಆಂತರಿಕ ವಿಚಾರ ಎಂದು ಲೋಕಜನ ಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಮುಂದಿನ ಚುನಾವಣೆಗೆ ಸಿದ್ಧರಾಗಿರಲಿ ಕರೆ:
ಲೋಕಜನಶಕ್ತಿ ಪಕ್ಷದ 20ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಚಿರಾಗ್ ಪಾಸ್ವಾನ್ ಮಾಡಲಾಗಿದ್ದಾರೆ. ಬಿಹಾರದಲ್ಲಿ ಹೊಸ ಸರ್ಕಾರವೇನೋ ರಚನೆಯಾಗಿದೆ. ಆದರೆ ಯಾವ ಸಂದರ್ಭದಲ್ಲಿ ಸರ್ಕಾರ ಬೀಳುತ್ತದೆಯೋ ಹೇಳುವುದಕ್ಕೆ ಸಾಧ್ಯವಿಲ್ಲ. ನಾವು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸುವತ್ತ ಗಮನ ಹರಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಚಿರಾಗ್ ಪಾಸ್ವಾನ್ ಕರೆ ನೀಡಿದ್ದಾರೆ.