ಲಾಲೂ ಕುಟುಂಬದಲ್ಲಿ ಕಿರಿಕ್! ಪಕ್ಷದಲ್ಲಿನ ಸ್ಥಾನ ತೊರೆದ ತೇಜ್ ಪ್ರತಾಪ್
ಪಾಟ್ನಾ (ಬಿಹಾರ), ಮಾರ್ಚ್ 28: ಲೋಕಸಭೆ ಚುನಾವಣೆ ಕಣ್ಣೆದುರು ಇರುವಾಗಲೇ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ. ರಾಷ್ಟ್ರೀಯ ಜನತಾ ದಳ ಪಕ್ಷದಲ್ಲಿ ತನ್ನ ಸೋದರನಿಗಿಂತ ಕಡಿಮೆ ಪ್ರಾಶಸ್ತ್ಯ ಪಡೆದವರು ಎಂದು ಗುರುತಿಸುವ ತೇಜ್ ಪ್ರತಾಪ್ ಯಾದವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆರ್ ಜೆಡಿ ಯುವ ಘಟಕದಲ್ಲಿನ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಜ್ಞಾನ ಕಡಿಮೆ ಎಂದು ಕೆಲವರು ಭಾವಿಸಿದ್ದಾರೆ. ನನಗೆ ಗೊತ್ತಿದೆ; ಯಾರು ಎಲ್ಲಿ ನಿಂತಿದ್ದಾರೆ? ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ ತೇಜ್ ಪ್ರತಾಪ್ ಯಾದವ್.
ಮೂವತ್ತು ವರ್ಷದ ತೇಜ್ ಪ್ರತಾಪ್ ಗೆ ಕಳೆದ ಕೆಲ ಸಮಯದಿಂದಲೇ ಅಸಮಾಧಾನ ಇತ್ತು. ತಮ್ಮ ಕಿರಿಯ ಸೋದರ ತೇಜಸ್ವಿ ಯಾದವ್ ಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ ಎಂಬ ಅಸಮಾಧಾನ ಇತ್ತು. ತೇಜಸ್ವಿ ಬಿಹಾರದಲ್ಲಿ ವಿಪಕ್ಷ ನಾಯಕ. ಲಾಲೂ ಪ್ರಸಾದ್ ಯಾದವ್ ಕೂಡ ತಮ್ಮ ಕಿರಿಯ ಮಗನನ್ನೇ ಉತ್ತರಾಧಿಕಾರಿ ಎಂದು ಬಿಂಬಿಸಿದ್ದಾರೆ.
ತನಗೆ ಆಪ್ತರಾದ ಕೆಲವರಿಗೆ ಲೋಕಸಭಾ ಚುನಾವಣೆಗೆ ಬಿಹಾರದಿಂದ ಪಕ್ಷದ ಟಿಕೆಟ್ ಕೊಡಿಸುವ ಸಲುವಾಗಿ ತೇಜ್ ಪ್ರತಾಪ್ ಹೀಗೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದು ಭಾವಿಸಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ, ತೇಜ್ ಪ್ರತಾಪ್ ಪ್ರಬಲವಾಗಿ ವಿರೋಧ ಮಾಡುವ ಚಂದ್ರಿಕಾ ರಾಯ್ ಗೆ ಲಾಲೂ ಹಾಗೂ ತೇಜಸ್ವಿ ಸೇರಿ ಛಪ್ರಾ ಸ್ಥಾನದ ಟಿಕೆಟ್ ನೀಡಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಲು ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಿಹಾರ ಮಹಾಮೈತ್ರಿಕೂಟದಲ್ಲಿ ಮನಸ್ತಾಪ: ಕಾಂಗ್ರೆಸ್ ಒಂಟಿಯಾಗಿ ಸ್ಪರ್ಧೆ?
ಈ ಹಿಂದೆ ಬಿಹಾರದಲ್ಲಿ ನಿತೀಶ್ ಕುಮಾರ್ ಜತೆ ಸೇರಿ ಆರ್ ಜೆಡಿ ಅಧಿಕಾರ ನಡೆಸುವಾಗ ತೇಜಸ್ವಿ ಉಪಮುಖ್ಯಮಂತ್ರಿ ಆದರು. ಅವರಿಗಿಂತ ಒಂದು ವರ್ಷಕ್ಕೆ ಹಿರಿಯರಾದ ತೇಜ್ ಪ್ರತಾಪ್ ಆರೋಗ್ಯ ಮಂತ್ರಿ ಆಗಿದ್ದರು. ತಮ್ಮ ವಿಪರೀತದ ಸಿಟ್ಟಿನ ಕಾರಣಕ್ಕೂ ತೇಜ್ ಪ್ರತಾಪ್ ಹೆಸರುವಾಸಿ. ಆ ಕಾರಣಕ್ಕೆ ತೇಜಸ್ವಿಯೇ ಪಕ್ಷದೊಳಗಿನವರ ಆಯ್ಕೆ.