ನ.9ಕ್ಕೆ ಲಾಲೂ ಪ್ರಸಾದ್ ಯಾದವ್ ಬಿಡುಗಡೆ, ಅಂದೇ, ನಿತೀಶ್ ಕುಮಾರ್ ಗೆ ಬೀಳ್ಕೊಡುಗೆ
ಪಾಟ್ನಾ, ಅ 24: ಬಿಹಾರ ಅಸೆಂಬ್ಲಿ ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ವೇಗವನ್ನು ಪಡೆಯುತ್ತಿದೆ. ಬಿಜೆಪಿ ಮೈತ್ರಿಕೂಟದಿಂದ ರಾಂ ವಿಲಾಸ್ ಪಾಸ್ವಾನ್ ಅವರ ಪಕ್ಷ ಹೊರಹೋಗಿದೆ. ಇದು, ಎನ್ಡಿಎ ಮೈತ್ರಿಕೂಟದ ವೋಟ್ ಬ್ಯಾಂಕ್ ಮೇಲೆ ಪರಿಣಾಮ ಬೀರಲಿದೆಯೇ ಎನ್ನುವುದು ಗೊತ್ತಾಗಬೇಕಿದೆ.
ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಪ್ರಚಾರವನ್ನು ಕಾಲಿಗೆ ಚಕ್ರಕಟ್ಟಿಕೊಂಡಂತೆ ರಾಜ್ಯವೆಲ್ಲಾ ಸುತ್ತುತ್ತುತ್ತಿರುವ ತೇಜಸ್ವಿ ಯಾದವ್, ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ದ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಅಕ್ಟೋಬರ್ 28ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ.
ತೇಜಸ್ವಿ ಯಾದವ್ ಪ್ರಚಾರದಲ್ಲಿ ಭಾರಿ ಜನಸಮೂಹದ ಗುಟ್ಟು?
ಛಬಿಸಾ ಟ್ರೆಸರಿ ಕೇಸ್ ನಲ್ಲಿ ಜಾರ್ಖಂಡ್ ನ್ಯಾಯಾಲಯ, ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಗೆ ಬೇಲ್ ನೀಡಿದ್ದರೂ, ಮೇವು ಹಗರಣದಿಂದ ಮುಕ್ತರಾಗದ ಲಾಲೂ, ಇನ್ನೂ ಬಿರ್ಸಾ ಮುಂಡಾ ಜೈಲಿನಲ್ಲೇ ಸಮಯ ದೂಡಬೇಕಿದೆ.
ರೋಗ, ಸಾವಿನ ಭೀತಿಯನ್ನು ಮಾರುತ್ತಿರುವ ಬಿಜೆಪಿ: ಉಚಿತ ಲಸಿಕೆ ಭರವಸೆಗೆ ತೇಜಸ್ವಿ ಕಿಡಿ
ಈ ನಡುವೆ, ಮುಖ್ಯಮಂತ್ರಿ ನಿತೀಶ್ ವಿರುದ್ದ ತೀವ್ರ ವಾಕ್ ಪ್ರಹಾರ ಮಾಡಿರುವ ತೇಜಸ್ವಿ ಯಾದವ್, ಇನ್ನೇನು ಕೆಲವೇ ದಿನದಲ್ಲಿ ಲಾಲೂ ಜೈಲಿನಿಂದ ಹೊರಬರಲಿದ್ದಾರೆ, ಬಿಹಾರದ ಜನತೆ ನಿತೀಶ್ ಕುಮಾರ್ ಗೆ ಬೀಳ್ಕೊಡುಗೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರದ ಹಿಸುವಾದಲ್ಲಿ ಚುನಾವಣಾ ಪ್ರಚಾರ ಸಭೆ
ಬಿಹಾರದ ಹಿಸುವಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ತೇಜಸ್ವಿ ಯಾದವ್, "ಲಾಲೂ ಪ್ರಸಾದ್ ಯಾದವ್ ಅವರಿಗೆ ನವೆಂಬರ್ ಒಂಬತ್ತರಂದು ಇನ್ನೊಂದು ಬೇಲ್ ಸಿಗಲಿದೆ. ಅಂದು ನನ್ನ ಹುಟ್ಟಿದ ದಿನ ಕೂಡಾ. ಲಾಲೂ ಜೈಲಿನಿಂದ ಹೊರಬಂದ ಮರುದಿನವೇ, ನಿತೀಶ್ ಕುಮಾರ್ ಗೆ ಬೀಳ್ಕೊಡುಗೆ ನಡೆಯಲಿದೆ"ಎನ್ನುವ ವಿಶ್ವಾಸದ ಮಾತನ್ನು ಯಾದವ್ ಆಡಿದ್ದಾರೆ. (ಚಿತ್ರ:ಪಿಟಿಐ)
ಬಿಹಾರವನ್ನು ಮುನ್ನಡೆಸಲು ನಿತೀಶ್ ಅವರಿಗೆ ಇನ್ನು ಮುಂದೆ ಸಾಧ್ಯವಿಲ್ಲ
"ನಿತೀಶ್ ಕುಮಾರ್ ಅವರು ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ವಲಸೆ ಹೋಗುವವರನ್ನು ತಡೆಯಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸರಕಾರದ ಆಡಳಿತ ಯಂತ್ರ ಸಂಪೂರ್ಣ ಹದೆಗೆಟ್ಟಿದೆ. ಬಿಹಾರವನ್ನು ಮುನ್ನಡೆಸಲು ನಿತೀಶ್ ಅವರಿಗೆ ಇನ್ನು ಮುಂದೆ ಸಾಧ್ಯವಿಲ್ಲ"ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. (ಚಿತ್ರ:ಪಿಟಿಐ)
ಎಐಸಿಸಿ ಮುಖಂಡ ರಾಹುಲ್ ಗಾಂಧಿ ಜೊತೆ, ಚುನಾವಣಾ ಸಭೆ
ಎಐಸಿಸಿ ಮುಖಂಡ ರಾಹುಲ್ ಗಾಂಧಿ ಜೊತೆ, ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ತೇಜಸ್ವಿ ಯಾದವ್, "ವಿಧಾನಸಭಾ ಚುನಾವಣೆ ಬಳಿಕ ರಾಷ್ಟ್ರೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಈಗಿನ ಸರ್ಕಾರವು ನಡೆಸಿರುವ ಅಕ್ರಮ ಮತ್ತು ಹಗರಣಗಳನ್ನೆಲ್ಲ ಬಯಲಿಗೆ ಎಳೆಯುತ್ತೇವೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಲಾಗುತ್ತದೆ" ಎಂದು ಪುನರುಚ್ಚಿಸಿದ್ದಾರೆ. (ಚಿತ್ರ:ಪಿಟಿಐ)
ಮೋದಿ ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಜೊತೆಗೆ ಚುನಾವಣಾ ಸಭೆ
ಪ್ರಧಾನಿ ಮೋದಿ ಕೂಡಾ ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಜೊತೆಗೆ ಚುನಾವಣಾ ಸಭೆಯಲ್ಲಿ ಭಾಗವಹಿಸಿದ್ದರು. ಮೂರು ಕಡೆ ಸಭೆಯಲ್ಲಿ ಮಾತನಾಡಿದ ಮೋದಿ, "ವಿಪಕ್ಷಗಳಿಗೆ ರಾಷ್ಟ್ರೀಯ ಹಿತ ಬೇಕಾಗಿಲ್ಲ. ಕಾಂಗ್ರೆಸ್ ಮತ್ತು ಆರ್ಜೆಡಿ ನೀಡುವ ಸುಳ್ಳು ಭರವಸೆ ಮತ್ತು ಮಾತುಗಳಿಗೆ ಮರುಳಾಗಬೇಡಿ"ಎಂದು ಮೋದಿ ಹೇಳಿದ್ದಾರೆ. (ಚಿತ್ರ:ಪಿಟಿಐ)