ಲಾಲು ಪ್ರಸಾದ್ ಮನೆಯಲ್ಲಿ ಹೈಡ್ರಾಮ: ಸೊಸೆಯನ್ನು ಮನೆಯಿಂದ ಹೊರಹಾಕಿದ ರಾಬ್ರಿ ದೇವಿ
ಪಟ್ನಾ, ಡಿಸೆಂಬರ್ 16: ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ಅವರ ಸೊಸೆ ಐಶ್ವರ್ಯಾ ರಾಯ್, ಅತ್ತೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅತ್ತೆ ರಾಬ್ರಿ ದೇವಿ ತಮ್ಮನ್ನು ಥಳಿಸಿ, ತಲೆಗೂದಲು ಹಿಡಿದು ಎಳೆದು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಲಾಲು ಅವರ ಮೊದಲ ಮಗ ತೇಜ್ ಪ್ರತಾಪ್ ಯಾದವ್ ಅವರನ್ನು ಮದುವೆಯಾಗಿದ್ದ ಐಶ್ವರ್ಯಾ ರಾಯ್, ಪತಿಯಿಂದ ದೂರವಾಗಿದ್ದರೂ, ಅತ್ತೆ ಮನೆಯಲ್ಲಿಯೇ ವಾಸವಾಗಿದ್ದರು. ಭಾನುವಾರ ರಾಬ್ರಿ ದೇವಿ ತಮಗೆ ಹೊಡೆದು ಹೊರದಬ್ಬಿದ್ದು, ಈ ವೇಳೆ ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿದ್ದಾರೆ.
ವಿಚ್ಛೇದನದ ದೂರಲ್ಲಿ ಲಾಲೂ ಮಗನನ್ನು ಮಾದಕ ವ್ಯಸನಿ ಎಂದ ಐಶ್ವರ್ಯಾ
ಭಾನುವಾರ ಸಂಜೆ ಲಾಲು ನಿವಾಸದ ಎದುರು ನಾಟಕೀಯ ಬೆಳವಣಿಗೆ ನಡೆದಿದ್ದು, ಪಟ್ನಾದ ಸರ್ಕ್ಯುಲರ್ ರಸ್ತೆಯಲ್ಲಿರುವ ಕುಟುಂಬದ ನಿವಾಸ ಎದುರು ಐಶ್ವರ್ಯಾ ರಾಯ್ ಕಣ್ಣೀರಿಡುತ್ತಾ ಕುಳಿತಿದ್ದರು.
ಲಾಲು ನಿವಾಸದಿಂದ ಕೆಲವೇ ದೂರದಲ್ಲಿ ವಾಸಿಸುತ್ತಿರುವ ಐಶ್ವರ್ಯಾ ಅವರ ತಂದೆ, ಆರ್ಜೆಡಿ ಶಾಸಕ ಚಂದ್ರಿಕ ರಾಯ್, ತಾಯಿ ಪೂರ್ಣಿಮಾ ರಾಯ್, ಸಹೋದರರು ಘಟನೆ ಬಗ್ಗೆ ತಿಳಿದ ಕೂಡಲೇ ಅಲ್ಲಿಗೆ ಧಾವಿಸಿದರು.
ಅತ್ತೆಗೆ ವಿರೋಧ ತಿಳಿಸಿದ್ದೆ
'ನಾನು ಮಹಡಿ ಮೇಲಿನ ನನ್ನ ಕೊಠಡಿಯಲ್ಲಿ ಟಿ.ವಿ ನೋಡುತ್ತಿದ್ದೆ. ತೇಜ್ ಪ್ರತಾಪ್ ಯಾದವ್ನ ಬೆಂಬಲಿಗರು ನನ್ನ ಮತ್ತು ನನ್ನ ಪೋಷಕರ ಕುರಿತು ಆಕ್ಷೇಪಾರ್ಹ ಬರಹಗಳನ್ನು ಬರೆದ ಪೋಸ್ಟರ್ಗಳನ್ನು ಪಟ್ನಾ ವಿಶ್ವವಿದ್ಯಾಲಯದ ಆವರಣದ ತುಂಬಾ ಅಂಟಿಸುತ್ತಿದ್ದಾರೆ ಎಂಬ ಮಾಹಿತಿ ನನ್ನ ಮೊಬೈಲ್ ಫೋನ್ಗೆ ಬಂದಿತು.
ನಾನು ಕೆಳಗೆ ಬಂದು ನನ್ನ ಅತ್ತೆಯ ಎದುರು ಅದರ ಕುರಿತು ಪ್ರತಿಭಟಿಸಿದೆ. ನನ್ನ ಪ್ರತಿಷ್ಠೆಗೆ ಸಾರ್ವಜನಿಕವಾಗಿ ಹಾಳುಮಾಡುತ್ತಿರುವುದು ಸಹಿಸಲಾಗುವುದಿಲ್ಲ ಮತ್ತು ಇದರಲ್ಲಿ ವಿನಾಕಾರಣ ನನ್ನ ತಂದೆ ತಾಯಿಯನ್ನು ಎಳೆದು ತರುವುದನ್ನು ಒಪ್ಪುವುದಿಲ್ಲ' ಎಂದಿದ್ದಾಗಿ ಐಶ್ವರ್ಯಾ ರಾಯ್ ತಿಳಿಸಿದ್ದಾರೆ.
ಹೊಡೆದು, ಹೊರಹಾಕಿದರು
'ನನ್ನ ಮಾತು ಕೇಳಿದ ಕೂಡಲೇ ಸಿಟ್ಟಿಗೆದ್ದ ರಾಬ್ರಿ ದೇವಿ, ನನ್ನನ್ನು ನಿಂದಿಸಲು ಶುರುಮಾಡಿದರು. ಮಹಿಳಾ ಭದ್ರತಾ ಸಿಬ್ಬಂದಿ ಜತೆಗೂಡಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದರು. ನನ್ನ ತಲೆ, ಮೊಣಕಾಲು ಮತ್ತು ಪಾದಗಳಿಗೆ ಹೊಡೆದರು. ನನ್ನ ಕೂದಲು ಎಳೆದಾಡಿದರು. ಚಪ್ಪಲಿ, ಶಾಲು ಕೂಡ ಹಾಕಿಕೊಳ್ಳಲು ಬಿಡದೆ ಬಂಗಲೆಯಿಂದ ನನ್ನನ್ನು ಹೊರಗೆ ತಳ್ಳಿದರು' ಎಂದು ಆರೋಪಿಸಿದ್ದಾರೆ.
ಐಶ್ವರ್ಯ ರೈರಿಂದ ವಿವಾಹ ವಿಚ್ಛೇದನ ಕೋರಿದ್ದ ಅರ್ಜಿ ವಾಪಸ್!
'ಅವರ ದುರ್ವರ್ತನೆಯನ್ನು ವಿಡಿಯೋದಲ್ಲಿ ಚಿತ್ರೀಕರಿಸಿದ್ದರಿಂದ ನನ್ನ ಮೊಬೈಲ್ ಫೋನ್ಅನ್ನು ಕೂಡ ಕಿತ್ತುಕೊಂಡಿದ್ದಾರೆ. ಅವರ ತಪ್ಪುಗಳಿಗೆ ಇದ್ದ ಪುರಾವೆಯನ್ನು ಅಳಿಸಿ ಹಾಕುವ ಸಲುವಾಗಿ ಅವರು ಅದನ್ನು ತಮ್ಮಲ್ಲಿ ಇರಿಸಿಕೊಂಡಿದ್ದಾರೆ' ಎಂದಿದ್ದಾರೆ.
ಇಡೀ ಕುಟುಂಬ ಜೈಲಲ್ಲಿ ಇರಬೇಕು
2018ರ ಮೇ ತಿಂಗಳಿನಲ್ಲಿ ತೇಜ್ ಪ್ರತಾಪ್ ಯಾದವ್ ಮತ್ತು ಐಶ್ವರ್ಯಾ ರಾಯ್ ನಡುವೆ ಮದುವೆ ನಡೆದಿತ್ತು. ಆರೇ ತಿಂಗಳಿನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಮಗಳನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ ಐಶ್ವರ್ಯಾ ಅವರ ಪೋಷಕರು, ಲಾಲು ಅವರ ಇಡೀ ಕುಟುಂಬ ಜೈಲಿನಲ್ಲಿರಲು ಅರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಳಿಯ ವಕ್ರ ಅಂತ ಗೊತ್ತಿತ್ತು!
'ನಮ್ಮ ಅಳಿಯ ಮಾತ್ರ ವಕ್ರನಾಗಿದ್ದು, ಕುಟುಂಬದ ಉಳಿದ ಸದಸ್ಯರು ಆತನನ್ನು ಸರಿದಾರಿಗೆ ತರುತ್ತಾರೆ ಎಂದೇ ನಾವು ಮೊದಲು ಭಾವಿಸಿದ್ದೆವು. ಆದರೆ ಈಗ ಅವರೆಲ್ಲರೂ ಒಟ್ಟಾಗಿ ನಮ್ಮ ಮಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಕಳೆದ ಸಲ ವಿಪರೀತ ಮಳೆ ಸುರಿಯುತ್ತಿದ್ದಾಗ ನಮ್ಮ ಮಗಳನ್ನು ಮನೆಯಿಂದ ಕಾರ್ನಲ್ಲಿ ಕರೆದುಕೊಂಡು ಬಂದು ನಗರದ ಮಧ್ಯೆ ಬಿಟ್ಟುಹೋಗಿದ್ದರು. ನಮ್ಮ ಮಗುವಿನೊಂದಿಗೆ ಈ ರೀತಿ ಅಮಾನವೀಯವಾಗಿ ವರ್ತಿಸುವುದರಿಂದ ಅವರು ಖುಷಿ ಪಡುತ್ತಿದ್ದಾರೆ ಎನಿಸುತ್ತಿದೆ' ಎಂದು ಪೋಷಕರು ಅಲವತ್ತುಕೊಂಡರು.
ಶಿವನ ವೇಷಧಾರಿ, ವಿವಾದಿತ ರಾಜಕಾರಣಿ ಪುತ್ರನಾರು?
ಸೆಪ್ಟೆಂಬರ್ನಲ್ಲಿ ಸಹ ಲಾಲು ಮನೆ ಎದುರು ಇದೇ ರೀತಿಯ ಪ್ರಹಸನ ನಡೆದಿತ್ತು. ಮಾವನ ಕುಟುಂಬದವರು ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಐಶ್ವರ್ಯಾ ಆರೋಪಿಸಿದ್ದರು. ಹಲವು ಗಂಟೆಗಳ ನಾಟಕದ ಬಳಿಕ ರಾತ್ರಿ ವೇಳೆ ಅವರು ಮನೆಯೊಳಗೆ ಮತ್ತೆ ಪ್ರವೇಶಿಸಿದ್ದರು.
ರಾಬ್ರಿ ದೇವಿ ವಿರುದ್ಧ ದೂರು
ಆದರೆ ಈ ಬಾರಿ ಪರಿಸ್ಥಿತಿ ಎಲ್ಲ ಸಂಯಮದ ಹಂತಗಳನ್ನೂ ಮೀರಿ ಸಾಗಿದೆ. ಮಗಳು ಮತ್ತೆ ಅತ್ತೆ ಮನೆಗೆ ಹೋಗುವುದಿಲ್ಲ. ರಾಬ್ರಿ ದೇವಿ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಶಾಸಕ ಚಂದ್ರಿಕ ರಾಯ್ ತಿಳಿಸಿದರು.
ನಾವು ಅವರನ್ನು ಇನ್ನು ಸಂಪರ್ಕಿಸಲು ಹೋಗುವುದಿಲ್ಲ ಮತ್ತು ಅವರ ಕಡೆಯಿಂದ ಮನವೊಲಿಸುವ ಯಾವ ಪ್ರಯತ್ನ ನಡೆದರೂ ಒಪ್ಪಿಕೊಳ್ಳುವುದೂ ಇಲ್ಲ. ನಮ್ಮ ಮಗಳ ಮದುವೆಯ ಸಮಸ್ಯೆಯನ್ನು ಪರಿಹರಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದ್ದಾಯ್ತು. ಇನ್ನು ಯಾವುದೇ ಮಾರ್ಗವಿಲ್ಲ ಎಂದು ಹೇಳಿದರು.
ತೇಜ್ ಪ್ರತಾಪ್ ಬೆಂಬಲಿಗರ ಪ್ರತಿಭಟನೆ
ಈ ಘಟನೆ ನಡೆದ ಕೆಲವು ಗಂಟೆಗಳ ಬಳಿಕ ತೇಜ್ ಪ್ರತಾಪ್ ಯಾದವ್ ಬೆಂಬಲಿಗರು ಎಂದು ಹೇಳಿಕೊಂಡ ಗುಂಪೊಂದು ಚಂದ್ರಿಕ ರಾಯ್ ನಿವಾಸದ ಎದುರು ಪ್ರತಿಭಟನೆ ನಡೆಸಿತು. ತಮ್ಮ ರಾಜಕೀಯ ಲಾಭಕ್ಕಾಗಿ ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ರಾಯ್ ಅವರೇ ಲಾಲು ಅವರನ್ನು ಭೇಟಿಯಾಗಿ ಮದುವೆಯ ಪ್ರಸ್ತಾಪ ಮಾಡಿದ್ದರು. ಆದರೆ ಆ ಲಾಭ ಸಿಗದ ಕಾರಣ ಈ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.