ಸಿಧುನಂತೆಯೇ ಕನ್ಹಯ್ಯ ಕಾಂಗ್ರೆಸ್ನ ನಾಶ ಮಾಡುತ್ತಾರೆ:ಆರ್ಜೆಡಿ
ಪಾಟ್ನಾ, ಅಕ್ಟೋಬರ್ 1: ಕನ್ಹಯ್ಯ ಕುಮಾರ್ ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದನ್ನು ಬಿಹಾರದ ಪ್ರಮುಖ ವಿರೋಧ ಪಕ್ಷವಾಗಿರುವ ಆರ್ಜೆಡಿ ಟೀಕಿಸಿದೆ.
ಕನ್ಹಯ್ಯ ಕುಮಾರ್ ಕೂಡ ನವಜೋತ್ ಸಿಂಗ್ ಸಿಧುವಿನಂತೆಯೇ ಕಾಂಗ್ರೆಸ್ನ್ನು ನಾಶ ಮಾಡುತ್ತಾರೆ ಎಂದು ಹೇಳಿ ಗೇಲಿ ಮಾಡಿದೆ. ಕಾಂಗ್ರೆಸ್ ಮುಳುಗುವ ಹಡಗು ಎಂದು ವ್ಯಂಗ್ಯವಾಡಿದ ಆರ್ಜೆಡಿ ಹಿರಿಯ ನಾಯಕ ಶಿವಾನಂದ್ ತಿವಾರಿ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಬಹಳ ವ್ಯತ್ಯಾಸವೇನೂ ಆಗುವುದಿಲ್ಲ ಎಂದರು.
ಕಾಂಗ್ರೆಸ್ ಸೇರ್ಪಡೆಗೊಂಡ ಕನ್ಹಯ್ಯ, ಜಿಗ್ನೇಶ್ ಮುಂದೇನು?
ಕಾಂಗ್ರೆಸ್ ದೊಡ್ಡ ಹಡಗಿನಂತೆ ಅದನ್ನು ಉಳಿಸಬೇಕು ಆದರೆ ಈ ಕನ್ಹಯ್ಯ ಕುಮಾರ್ ಸಿಧುವಿನಂತೆಯೇ ಮುಳುಗಿಸುವ ಪ್ರಯತ್ನ ಮಾಡುತ್ತಾರೆ ಅವರು ಎಂದಿಗೂ ಪಕ್ಷವನ್ನು ಉಳಿಸುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ದೇಶದಲ್ಲಿ ಮತ್ತೆ ಮೈಕೊಡವಿ ನಿಲ್ಲಲು ಹಲವು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಇದೀಗ JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಕಮ್ಯೂನಿಸ್ಟ್ ಪಕ್ಷದ ಕನ್ಹಯ್ಯ ಕುಮಾರ್ ಇದೀಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಇನ್ನು ರಾಷ್ಟ್ರೀಯ ಅಧಿಕಾರ್ ಮಂಚ್ ಪಕ್ಷದ ಜಿಗ್ನೇಶ್ ಮೇವಾನಿ ಕೂಡ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಪಕ್ಷ ಸೇರಿದ ಬೆನ್ನಲ್ಲೇ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ಕಾಂಗ್ರೆಸ್ ಸೇರಿದ ಬಳಿಕ ಸುದ್ಧಿಗೋಷ್ಠಿ ನಡೆಸಿದ ಕನ್ಹಯ್ಯ ಕುಮಾರ್, ಚುನಾವಣೆಗೆ ಸ್ಪರ್ಧಿಸಲು ನಾನು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ. ಕಾಂಗ್ರೆಸ್ ಕೇವಲ ಪಕ್ಷವಲ್ಲ, ಒಂದು ಸಿದ್ಧಾಂತ, ದೇಶದ ಅತೀ ಹಳೆ ಪಕ್ಷ. ಇಷ್ಟೇ ಅಲ್ಲ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ಏಕೈಕ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಇಲ್ಲದೆ ಭಾರತ ಉಳಿಯುವುದಿಲ್ಲ ಎಂದು ಕನ್ಹಯ್ಯು ಕುಮಾರ್ ಹೇಳಿದ್ದಾರೆ.
ಗುಜರಾತ್ನ ವಡ್ಗಾಮ್ ಕ್ಷೇತ್ರದ ಶಾಸಕರಾಗಿರುವ ಜಿಗ್ನೇಶ್ ಮೇವಾನಿ , ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಸಂಚಾಲಕರಾಗಿದ್ದಾರೆ. ಮಾಜಿ ಪತ್ರಕರ್ತ, ವಕೀಲನಾಗಿರುವ ಮೇವಾನಿ ಕಾಂಗ್ರೆಸ್ ಸೇರಿಕೊಂಡಿರುವುದು ದಲಿತ ಸಮುದಾಯದ ಮತಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ ಅನ್ನೋದು ಕಾಂಗ್ರೆಸ್ ಅಭಿಪ್ರಾಯ.
ಪಂಜಾಬ್ನಲ್ಲಿ ದಲಿತ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ನಿರ್ಧಾರ ನನಗೆ ಹೆಚ್ಚು ಹಿತವೆನಿಸಿದೆ. ಹೀಗಾಗಿ ಕಾಂಗ್ರೆಸ್ ಸೇರಿಕೊಂಡಿದ್ದೇನೆ ಎಂದು ಮೇವಾನಿ ಹೇಳಿದ್ದಾರೆ.
ದೇಶವನ್ನು ಆಳುತ್ತಿರುವ ಫ್ಯಾಸಿಸ್ಟ್ ಆಡಳಿತ ಅಂತ್ಯಗೊಳಿಸಲು ಯುವ ನಾಯಕರಾಗಿ ಕನ್ಹಯ್ಯ ಕುಮಾರ್ ಹಾಗೂ ಜಿಗ್ನೇಶ್ ಮೇವಾನಿ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಯುವ ನಾಯಕರ ಆಗಮನದಿಂದ ಕೆಟ್ಟ ಆಡಳಿತಕ್ಕೆ ಅಂತ್ಯಹಾಡಲಿದ್ದೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯ ವಿಷಯ ಬಹುದಿನಗಳಿಂದ ಚರ್ಚೆಯಲ್ಲಿತ್ತು. ಕಳೆದ ವಾರ ದೆಹಲಿಯಲ್ಲಿ ಮಾತನಾಡಿದ್ದ ಸಿಪಿಐ ಮುಖಂಡ ಡಿ.ರಾಜಾ, ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಸುದ್ದಿಗಳನ್ನು ತಳ್ಳಿ ಹಾಕಿದ್ದರು. ಆದ್ರೆ ಸಿಪಿಐ ಮುಖಂಡರ ಸಭೆಗೆ ಕನ್ಹಯ್ಯ ಕುಮಾರ್ ಗೈರಾಗಿದ್ದರು. ಅಂದು ಕನ್ಹಯ್ಯ ಕುಮಾರ್ ಯಾರ ಸಂಪರ್ಕಕ್ಕೂ ಲಭ್ಯವಾಗಿರಲಿಲ್ಲ.
ಕನ್ಹಯ್ಯ ಕುಮಾರ್ 2016ರಲ್ಲಿ ಜೆಎನ್ಯು ದೇಶವಿರೋಧಿ ಹೇಳಿಕೆಯಿಂದಾಗಿ ಮುನ್ನಲೆಗೆ ಬಂದಿದ್ದರು. ಅಂದು ವೈರಲ್ ಆಗಿದ್ದ ವಿಡಿಯೋದಲ್ಲಿ ಆಜಾದಿ-ಆಜಾದಿ ಎಂದು ಕನ್ಹಯ್ಯಾ ಘೋಷಣೆ ಕೂಗಿದ್ದರು.
ಈ ವಿವಾದದ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 2019ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಸಿಪಿಐ ಸೇರ್ಪಡೆಯಾಗಿದ್ದರು. ಬೇಗೂಸರೈ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕನ್ಹಯ್ಯ ಕುಮಾರ್ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು.
ಬಿಹಾರದಲ್ಲಿ ಪ್ರಾದೇಶಿಕ ಪಕ್ಷಗಳಾದ ಜೆಡಿಯು ಮತ್ತು ಆರ್ ಜೆಡಿ ಮುನ್ನಲೆಯಲ್ಲಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡನೇ ಸಾಲಿನಲ್ಲಿವೆ. ಆರ್ಜೆಡಿ ತೇಜಸ್ವಿ ಮತ್ತು ಲೋಕ್ ಜನಶಕ್ತಿ ಪಾರ್ಟಿಯನ್ನು ಚಿರಾಗ್ ಪಾಸ್ವಾನ್ ಮುನ್ನಡೆಸುತ್ತಿದ್ದಾರೆ.
ಇಬ್ಬರು ಯುವ ನಾಯಕರು. ಹಾಗಾಗಿ ಇರ್ವರಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕನ್ಹಯ್ಯ ಕುಮಾರ್ ಅವರನ್ನ ಮುನ್ನಲೆಗೆ ತರಲು ಪ್ಲಾನ್ ಮಾಡಿಕೊಂಡಂತೆ ಕಾಣಿಸುತ್ತಿದೆ. ಸದ್ಯ ಬಿಹಾರದಲ್ಲಿ ಕನ್ಹಯ್ಯ ಕುಮಾರ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ.