"ಜಂಗಲ್ ರಾಜ್ ಕಾ ಯುವರಾಜ್": ಪ್ರಧಾನಿಗೆ ತೇಜಸ್ವಿ ಯಾದವ್ ತಿರುಗೇಟು
ಪಾಟ್ನಾ, ಅಕ್ಟೋಬರ್.29: ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಸ್ತವ ಅಂಶಗಳನ್ನೆಲ್ಲ ಬದಿಗಿಟ್ಟು ಮಾತನಾಡುತ್ತಿದ್ದಾರೆ ಎಂದು ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ದೂರಿದ್ದಾರೆ.
ತಮ್ಮನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಜಂಗಲ್ ರಾಜ್ ಕಾ ಯುವರಾಜ್' ಕರೆದಿದ್ದಾರೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಕ್ಕೆ ಬಯಸುವುದಿಲ್ಲ. ಅದನ್ನು ಬಿಟ್ಟು ರಾಜ್ಯದಲ್ಲಿ ಮಾತನಾಡುವುದಕ್ಕೆ ವಲಸೆ ಕಾರ್ಮಿಕರ ಕಷ್ಟ, ಉದ್ಯೋಗ ಸೃಷ್ಟಿ ಸೇರಿದಂತೆ ಸಾಕಷ್ಟು ವಿಷಯಗಳಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಗಮನ ಸೆಳೆದ ಟಾಪ್-5 ವಿಧಾನಸಭಾ ಕ್ಷೇತ್ರಗಳು!
ಅವರು ನಮ್ಮ ದೇಶದ ಪ್ರಧಾನಮಂತ್ರಿಯಾಗಿ ಏನು ಬೇಕಾದರೂ ಹೇಳಲಿ. ಅದರ ಬಗ್ಗೆ ನಾನು ಚಕಾರ ಎತ್ತುವುದಿಲ್ಲ. ಆದರೆ ಬಿಹಾರಕ್ಕೆ ಬಂದಾಗ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನ, ನಿರುದ್ಯೋಗ ಸಮಸ್ಯೆಯಂತ ವಾಸ್ತವ ಅಂಶಗಳ ಮಾತನಾಡುವುದು ಮುಖ್ಯವಾಗುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಜನ ಅರ್ಥಮಾಡಿಕೊಳ್ಳುತ್ತಾರೆ ಎಂದು ತೇಜಸ್ವಿ ಯಾದವ್
"ಅವರದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಕ್ಷ(ಬಿಜೆಪಿ), ಅವರು 30 ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡುತ್ತಾರೆ. ಅಂಥ ಪಕ್ಷದ ನಾಯಕರಾಗಿ ದೇಶದ ಪ್ರಧಾನಮಂತ್ರಿ ಆಗಿ ನರೇಂದ್ರ ಮೋದಿ ಹೀಗೆ ಮಾತನಾಡಿದರೆ, ಜನರೇ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅದೇನೇ ಇದ್ದರೂ ಬಡತನ, ಕೈಗಾರಿಕೆ, ರೈತರು ಮತ್ತು ನಿರುದ್ಯೋಗದ ಬಗ್ಗೆ ಸ್ವಲ್ಪವಾದರೂ ಮಾತನಾಡಬೇಕಿತ್ತು ಎಂದು ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ.
ಪ್ಪಧಾನಿ ತೇಜಸ್ವಿ ಯಾದವ್ ಬಗ್ಗೆ ಹೇಳಿದ್ದೇನು?
ಬಿಹಾರದ ದರ್ಭಾಂಗ್ ನ ರಾಜ್ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯವನ್ನು "ಜಂಗಲ್ ರಾಜ್" ಆಗಿ ಪರಿವರ್ತಿಸಿದ ಪಕ್ಷವನ್ನು ಮತ್ತೊಮ್ಮೆ ಸೋಲಿಸಲು ಮತದಾರರು ಸಂಕಲ್ಪ ಮಾಡಬೇಕಿದೆ ಎಂದಿದ್ದರು. "ಜಂಗತ್ ರಾಜ್" ಯುವರಾಜನಿಂದ ರಾಜ್ಯದ ಜನರು ಏನನ್ನು ತಾನೇ ನಿರೀಕ್ಷಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೇ ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಬಗ್ಗೆ ನೀಡಿದ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದರು. ಅವರಿಗೆ ಅಧಿಕಾರ ನೀಡಿದ್ದಲ್ಲಿ ಸಾರ್ವಜನಿಕ ವಲಯದಲ್ಲಿ 10 ಲಕ್ಷ ಉದ್ಯೋಗ ನೀಡುವುದು ಒಂದು ಕಡೆ ಇರಲಿ, ಸದ್ಯ ಉದ್ಯೋಗ ನೀಡುತ್ತಿರುವ ಖಾಸಗಿ ಕಂಪನಿಗಳೂ ಕೂಡಾ ಇಲ್ಲಿಂದ ಪಲಾಯನ ಮಾಡುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
15 ವರ್ಷಗಳ ಕಾಲ ಕತ್ತಲಿನಲ್ಲಿ ಬಿಹಾರದ ಜನತೆ
"ಈ ಹಿಂದೆ ಬಿಹಾರದ ಜನರನ್ನು 15 ವರ್ಷಗಳ ಆಡಳಿತ ಅವಧಿಯಲ್ಲಿ ಕತ್ತಲೆಗೆ ತಳ್ಳಲಾಗಿತ್ತು. ಕಂಪನಿಗಳು ಮುಚ್ಚಿಕೊಂಡು ಓಡಿ ಹೋಗಿದ್ದವು. ಅಪಹರಣ ಪ್ರಕರಣಗಳು ಹೆಚ್ಚಾಗಿದ್ದು, ಪೋಷಕರಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಆಡಳಿತದಲ್ಲಿ ರಾಜ್ಯವು ಅತಿಹೆಚ್ಚು ಅಪರಾಧ ಪ್ರಕರಣಗಳನ್ನು ಕಂಡಿತ್ತು. ಆದರೆ ನಾವು ಅಂಥ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಬಿಹಾರದಲ್ಲಿ ಶೇ.54.26ರಷ್ಟು ವೋಟಿಂಗ್
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಬುಧವಾರ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಸಲಾಯಿತು. ಆರ್ ಜೆಡಿಯ 42 ಅಭ್ಯರ್ಥಿಗಳು ಕಣದಲ್ಲಿದ್ದರೆ ಕಾಂಗ್ರೆಸ್ 20 ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅದೃಷ್ಟ ಪರೀಕ್ಷೆಗೆ ಇಳಿಸಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಿರುವ 35 ಕ್ಷೇತ್ರಗಳೂ ಸೇರಿದಂತೆ ಒಟ್ಟು 41 ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಬಾರಿ ಮೊದಲ ಹಂತದಲ್ಲಿ 54.26ರಷ್ಟು ಮತದಾನ ನಡೆದಿದೆ. ನವೆಂಬರ್.03ರಂದು ಎರಡನೇ ಹಂತ ಮತ್ತು ನವೆಂಬರ್.07ರಂದು ಮೂರನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.