"9ನೇ ಕ್ಲಾಸ್ ಫೇಲಾದ ಈ ನಾಯಕನಿಗೆ ಇಷ್ಟೊಂದು ಜ್ಞಾನ ಎಲ್ಲಿಂದ ಬಂತು?"
ಪಾಟ್ನಾ, ಫೆಬ್ರುವರಿ 04: "9ನೇ ಕ್ಲಾಸ್ ಫೇಲಾದ ವಿರೋಧ ಪಕ್ಷದ ಈ ನಾಯಕನಿಗೆ ಇಷ್ಟೊಂದು ವಿಷಯಗಳ ಬಗ್ಗೆ ಮಾತನಾಡುವ ಜ್ಞಾನ ಎಲ್ಲಿಂದ ಬಂತು?" ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಗುರಿಯಾಗಿಸಿಕೊಂಡು ಬಿಹಾರ ಮಾಜಿ ಮುಖ್ಯಮಂತ್ರಿ ಜಿತಾನ್ ರಾಮ್ ಮಂಜಿ ವ್ಯಂಗ್ಯದ ಧಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇಂಡಿಗೋ ಸ್ಟೇಷನ್ ಮ್ಯಾನೇಜರ್ ರೂಪೇಶ್ ಕುಮಾರ್ ಸಿಂಗ್ ಕೊಲೆ ಪ್ರಕರಣದ ಕುರಿತು ಪಾಟ್ನಾ ಪೊಲೀಸರು ನೀಡಿದ ಮಾಹಿತಿ ಕುರಿತು ತೇಜಸ್ವಿ ಯಾದವ್ ಪ್ರಶ್ನೆ ಮಾಡಿದ್ದು, ಇದಕ್ಕೆ ಜಿತಾನ್ ಟ್ವೀಟ್ ಮೂಲಕ ಈ ಪ್ರತಿಕ್ರಿಯೆ ನೀಡಿದ್ದಾರೆ.
ತೇಜಸ್ವಿ ಯಾದವ್ ಹೆಸರು ಕೇಳಿ ನಡುಗಿದ ಅಧಿಕಾರಿ: ವೈರಲ್ ವಿಡಿಯೋ
ರೂಪೇಶ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಪಾಟ್ನಾ ಪೊಲೀಸರು ಬಂಧಿಸಿದ್ದು, ನವೆಂಬರ್ ನಲ್ಲಿ ನಡೆದ ರಸ್ತೆ ಜಗಳದ ಪ್ರತೀಕಾರವಾಗಿ ರೂಪೇಶ್ ಹತ್ಯೆ ನಡೆಸಲಾಗಿದೆ ಎಂದು ತಿಳಿಸಿದ್ದರು. ಈ ಮಾಹಿತಿಗೆ ಪ್ರತಿಕ್ರಿಯಿಸಿದ್ದ ತೇಜಸ್ವಿ ಯಾದವ್, "ಈ ಘಟನೆ ಹಿಂದೆ ಇದ್ದ ಪ್ರಭಾವಿಗಳನ್ನು ರಕ್ಷಿಸುವ ಸಲುವಾಗಿ ನಿತೀಶ್ ಕುಮಾರ್ ಬಲಿಪಶು ಹುಡುಕುತ್ತಿದ್ದಾರೆ ಎಂದು ಹದಿನೈದು ದಿನಗಳ ಹಿಂದೆಯೇ ಗ್ರಹಿಸಿದ್ದೆ. ಬಿಹಾರ ಪೊಲೀಸರು ಈಗ ಆ ಬಲಿಪಶುವನ್ನು ಕಂಡುಕೊಂಡಿದ್ದಾರೆ. ಪಾಟ್ನಾ ಪೊಲೀಸರು ನಿರೂಪಿಸಿರುವ ಈ ಕಥೆ ಸಿ-ಗ್ರೇಡ್ ಸಿನಿಮಾಗಿಂತ ಕೆಟ್ಟದಾಗಿದೆ. ಜನರು ಪೊಲೀಸರ ಕಥೆಯನ್ನು ಕೇಳಬೇಕು" ಎಂದಿದ್ದರು.
ತೇಜಸ್ವಿ ಯಾದವ್ ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಜಿತಾನ್ ರಾಮ್ ಮಂಜಿ, "ಬಜೆಟ್ ದಿನ ಇವರು ಆರ್ಥಿಕ ತಜ್ಞರಾಗುತ್ತಾರೆ. ಟ್ರಾಕ್ಟರ್ ಜಾಥಾ ದಿನ ರೈತರಾಗುತ್ತಾರೆ. ಗಡಿಯಲ್ಲಿ ಗುಂಡಿನ ದಾಳಿ ನಡೆದರೆ ಭದ್ರತಾ ಸಿಬ್ಬಂದಿಯಾಗುತ್ತಾರೆ. ರೂಪೇಶ್ ಕುಮಾರ್ ಸಿಂಗ್ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದಾರೆ. ಒಂಬತ್ತನೇ ತರಗತಿ ಫೇಲ್ ಆಗಿರುವ ಇವರಿಗೆ ಇಷ್ಟೊಂದು ಜ್ಞಾನ ಎಲ್ಲಿಂದ ಬಂತು?" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.