ಲಾಲೂ ಆಮಿಷದ ಕರೆ ಬಗ್ಗೆ ಸುಶೀಲ್ ನಂತರ ಮಾಂಝಿ ಬಾಂಬ್
ಬಿಹಾರ ರಾಷ್ಟ್ರೀಯ ಜನತಾ ದಳದ ಮಾಜಿ ಮುಖ್ಯಸ್ಥ, ಬಹುಕೋಟಿ ಮೇವು ಹಗರಣದಲ್ಲಿ ಜೈಲುವಾಸಿಯಾಗಿರುವ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರ ಆಡಿಯೋ ಸದ್ದು ಬಿಹಾರದಲ್ಲಿ ಜೋರಗಿ ಗದ್ದಲ ಎಬ್ಬಿಸಿದೆ. ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಜೊತೆಗೆ ಪಕ್ಷಾಂತರಕ್ಕಾಗಿ ಹಣದ ಆಮಿಷವೊಡ್ಡಿದ ಆರೋಪ ಲಾಲೂ ಮೇಲೆ ಬಂದಿದೆ. ಈ ಕುರಿತಂತೆ ಬಿಹಾರ ಅಧಿವೇಶನದ ಮೊದಲ ದಿನದಂದು ಸದನದ ಕಲಾಪದಲ್ಲಿ ಭಾರಿ ಗದ್ದಲ ಉಂಟಾಗಿತ್ತು.
ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಲಾಲೂ ಪ್ರಸಾದ್ ಯಾದವ್ ವಿರುದ್ಧ ಆಮಿಷವೊಡ್ಡಿದ ಆರೋಪ ಮಾಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಹಿಂದೂಸ್ತಾನ್ ಅವಾಮ್ ಮೋರ್ಚಾದ ಅಧ್ಯಕ್ಷ ಜಿತಿನ್ ರಾಂ ಮಾಂಝಿ ಅವರು ಕೂಡಾ ತಮಗೂ ಲಾಲೂ ಇದೇ ರೀತಿ ಆಮಿಷ ನೀಡಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.
ಬಿಹಾರ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿದ ಲಾಲೂ ಆಡಿಯೋ "ರೀಲು"!
ವಿಧಾನಸಭೆ ಸ್ಪೀಕರ್ ಚುನಾವಣೆ ಸಂದರ್ಭದಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಗಿದೆ ಎಂದು ಆರೋಪಿಸಿ ಆರ್ ಜೆಡಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಹಾಜರಿರುವ ಶಾಸಕರ ಹಾಜರಾತಿ ಪುಸ್ತಕವನ್ನು ತೋರುವಂತೆ ಪಟ್ಟು ಹಿಡಿದರು. ಸದನದ ಬಾವಿಗಿಳಿದು ಹಂಗಾಮಿ ಸ್ಪೀಕರ್ ಜಿತನ್ ರಾಮ್ ಮಾಂಝಿ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದು, ಗಲಾಟೆಗೆ ಕಾರಣವಾಯಿತು. ಇದರ ಜೊತೆಗೆ ಲಾಲೂ ಆಡಿಯೋ ಸೋರಿಕೆ ಸದನದ ಒಳಗೂ ಹೊರಗೂ ವಾಗ್ದಾಳಿಗೆ ನಾಂದಿ ಹಾಡಿದೆ.
ಸುಶೀಲ್ ಕುಮಾರ್ ಮೋದಿಯಿಂದ ಆರೋಪ
ಎನ್ ಡಿಎ ಶಾಸಕರಿಗೆ ಲಾಲೂ ಪ್ರಸಾದ್ ಯಾದವ್ ಅವರು ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆರೋಪಿಸಿದ ಮರುದಿನವೇ ಆಡಿಯೋ ಕ್ಲಿಪ್ ಬಿಡುಗಡೆಯಾಗಿತ್ತು. "ಒಂದು ಖಾಸಗಿ ದೂರವಾಣಿ ಸಂಖ್ಯೆ((805#$%#02)ಯಿಂದ ಬಿಜೆಪಿ ಶಾಸಕರಿಗೆ ಕರೆ ಮಾಡಿದ ಲಾಲೂ ಪ್ರಸಾದ್ ಯಾದವ್ ಹಣ ಮತ್ತು ಸಚಿವಗಿರಿ ಆಮಿಷವೊಡ್ಡಿದ್ದರು. ಈ ಸಂಖ್ಯೆಗೆ ನಾನು ಕರೆ ಮಾಡಿದ ಸಂದರ್ಭದಲ್ಲಿ ಸ್ವತಃ ಲಾಲೂ ಪ್ರಸಾದ್ ಅವರೇ ಕರೆಯನ್ನು ಸ್ವೀಕರಿಸಿದ್ದರು. ಜೈಲಿನಲ್ಲಿದ್ದುಕೊಂಡು ಇಂಥ ಕೆಳಮಟ್ಟದ ರಾಜಕಾರಣ ಮಾಡಬೇಡಿ. ಇದು ಸಾಧ್ಯವಾಗುವ ಕೆಲಸವಲ್ಲ ಅಂತಾ ಹೇಳಿದ್ದೆನು" ಎಂದು ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿದ್ದರು.
ಲಾಲೂ ಮಾತು ಕೇಳಿ ಆಘಾತವಾಯಿತು: ಲಲನ್ ಪಾಸ್ವಾನ್
ಲಾಲೂ ಪ್ರಸಾದ್ ಯಾದವ್ ಅವರು ತಮಗೆ ಕರೆ ಮಾಡಿರುವ ಬಗ್ಗೆ ಬಿಜೆಪಿ ಶಾಸಕ ಲಲನ್ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ. "ನಾನು ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಜೊತೆಗೆ ಕುಳಿತಿದ್ದೆ. ಈ ವೇಳೆ ನನಗೆ ಫೋನ್ ಕರೆಯೊಂದು ಬಂದಿದ್ದು ಲಾಲೂ ಪ್ರಸಾದ್ ಯಾದವ್ ಎಂದು ಹೇಳುತ್ತಿರುವ ವ್ಯಕ್ತಿಯೊಬ್ಬರು ನಿಮ್ಮ ಜೊತೆಗೆ ಮಾತನಾಡಬೇಕಂತೆ ಎಂದು ನನ್ನ ಆಪ್ತ ಸಹಾಯಕರು ತಿಳಿಸಿದರು. ಆ ಮಾತನ್ನು ಕೇಳಿ ನಾನು ಮತ್ತು ಸುಶೀಲ್ ಕುಮಾರ್ ಮೋದಿ ಸಹ ಶಾಕ್ ಆದೆವು. ಕೊನೆಗೆ ಫೋನ್ ತೆಗೆದುಕೊಂಡು ಮಾತನಾಡಿದಾಗ ಲಾಲೂ ಪ್ರಸಾದ್ ಯಾದವ್ ಅವರು ನನ್ನ ಚುನಾವಣೆಯ ಗೆಲುವಿಗೆ ಶುಭಾಷಯ ಕೋರಿದರು. ಹಿರಿಯ ರಾಜಕಾರಣಿಯಾದ ಹಿನ್ನೆಲೆ ನಾನೂ ಕೂಡಾ ಅವರ ಆಶೀರ್ವಾದವನ್ನು ಕೋರಿದೆ. ನಂತರ ಮಾತನಾಡಿದ ಅವರು ಸ್ಪೀಕರ್ ಚುನಾವಣೆ ಸಂದರ್ಭದಲ್ಲಿ ಕಲಾಪಕ್ಕೆ ಗೈರು ಹಾಜರಾಗುವಂತೆ ಸೂಚಿಸಿದರು. ಇದಕ್ಕೆ ಒಪ್ಪಿಕೊಂಡರೆ ಅವರು ರಚಿಸುವ ಸರ್ಕಾರದಲ್ಲಿ ತಮಗೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದರು ಎಂದು ಲಲನ್ ಪಾಸ್ವಾನ್ ತಿಳಿಸಿದ್ದಾರೆ.
ಲಲನ್ ಪಾಸ್ವಾನ್ ಹೇಳಿದ್ದು 200% ನಿಜ: ಮಾಂಝಿ
''ಮಂಗಳವಾರ ರಾತ್ರಿ ನನ್ನ ಕಚೇರಿಗೆ ಕರೆ ಬಂದಾಗ 11 ಗಂಟೆ ದಾಟಿತ್ತು, ಲಾಲೂ ಪ್ರಸಾದ್ ಯಾದವ್ ಆ ಕಡೆಯಿಂದ ಮಾತನಾಡುತ್ತಿದ್ದರು. ನನ್ನನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ, ನಾನು ಮಾತನಾಡಲಿಲ್ಲ. ನನ್ನ ಸಹಾಯಕರು ಮಾತನಾಡಿದ್ದರು. ಲಾಲೂ ಅವರು ಆಮಿಷವೊಡ್ಡಿದ್ದರ ಬಗ್ಗೆ ಸುಶೀಲ್ ಕುಮಾರ್ ಮೋದಿ ಹಾಗೂ ಬಿಜೆಪಿ ಶಾಸಕ ಲಲನ್ ಪಾಸ್ವಾನ್ ಹೇಳಿದ್ದು 200% ನಿಜ'' ಎಂದು ಜಿತಿನ ರಾಂ ಮಾಂಝಿ ಹೇಳಿದ್ದಾರೆ.
ಮಹಾಘಟಬಂಧನ್ ಸೇರುವಂತೆ ಆಮಿಷ
ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಲಾಲೂ ಪ್ರಸಾದ್ ಅವರು ಬಿಜೆಪಿ ಶಾಸಕರಿಗೆ ಕರೆ ಮಾಡಿ ಮಹಾಘಟಬಂಧನ್ ಸೇರುವಂತೆ ಆಮಿಷ ನೀಡಿದ್ದಾರೆ. ಮಹಾಘಟಬಂಧನ್ ಸೇರಿದರೆ ಸಚಿವ ಸ್ಥಾನ ನೀಡುವ ಆಶ್ವಾಸನೆ ಕೊಟ್ಟಿದ್ದಾರೆ. ರಾಂಚಿಯಲ್ಲಿ ಜೈಲಿನಲ್ಲಿ ಕುಳಿತುಕೊಂಡೇ ರಾಜಕೀಯ ಆಟವನ್ನು ಲಾಲೂ ಆಡಿದ್ದಾರೆ. ಆದರೆ, ಇದು ವ್ಯಾಪಾರದ ರಾಜಕೀಯವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ನನ್ನ ಪಕ್ಷದ ಶಾಸಕರಿಗೂ ಆಮಿಷವೊಡ್ಡಿದ್ದು ಕಂಡು ಬಂದಿದೆ ಎಂದು ಮಾಂಝಿ ಅರೋಪಿಸಿದರು.
ಜಾರ್ಖಂಡ್ ರಾಜ್ಯದಿಂದ ತನಿಖೆ
ಈ ಎಲ್ಲಾ ಆರೋಪಗಳನ್ನು ಆರ್ ಜೆಡಿ ತಳ್ಳಿ ಹಾಕಿದೆ. ಈ ನಡುವೆ ಲಾಲೂ ಅವರನ್ನು ರಾಂಚಿ ಜೈಲಿನಿಂದ ಕೂಡಲೇ ತಿಹಾರ್ ಜೈಲಿಗೆ ರವಾನಿಸುವುದು ಒಳ್ಳೆಯದು. ಬಿಜೆಪಿ ಶಾಸಕರಿಗೆ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಸೂಕ್ತ ಎಂದು ಬಿಜೆಪಿ ಆಗ್ರಹಿಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ಜಾರ್ಖಂಡ್ ರಾಜ್ಯವು ಬುಧವಾರದಂದು ಆರ್ ಜೆಡಿ ಅಧ್ಯಕ್ಷ ಲಾಲೂ ಅವರು ಜೈಲಿನಿಂದ ಆಮಿಷವೊಡ್ಡಿದ ಆಡಿಯೋ ಸೋರಿಕೆ ಪ್ರಕರಣದ ತನಿಖೆಗೆ ಆಗ್ರಹಿಸಿದೆ. ಬಂದಿಖಾನೆ ಐಜಿ ವಿರೇಂದ್ರ ಭೂಷಣ್ ಅವರು ಬಿರ್ಸಾಮುಂಡಾ ಜೈಲಿನ ಎಸ್ಪಿ ಹಾಗೂ ರಾಂಚಿ ಉಪ ಆಯುಕ್ತರೊಂದಿಗೆ ಮಾತನಾಡಿ, ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಕೇಳಿದ್ದಾರೆ.