ಮೇವು ಹಗರಣ: ಲಾಲು ಪ್ರಸಾದ್ಗೆ ಜಾಮೀನು, ಆದರೂ ಬಿಡುಗಡೆ ಭಾಗ್ಯವಿಲ್ಲ
ಪಟ್ನಾ, ಅಕ್ಟೋಬರ್ 9: ಬಿಹಾರ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ವೇಳೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ನ್ಯಾಯಾಲಯ ಕೊಂಚ ನಿರಾಳ ನೀಡಿದೆ. ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದೆ.
ಆದರೆ ಲಾಲು ಪ್ರಸಾದ್ ಅವರಿಗೆ ಬಿಡುಗಡೆಯ ಭಾಗ್ಯವಿಲ್ಲ. ಏಕೆಂದರೆ ಅವರು ಡುಮ್ಕಾ ಖಜಾನೆ ಪ್ರಕರಣದಲ್ಲಿ ಕೂಡ ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಮೇವು ಹಗರಣದಲ್ಲಿ ಜಾಮೀನು ದೊರೆತರೂ, ಅವರು ಜೈಲು ಶಿಕ್ಷೆ ಅನುಭವಿಸುವುದು ಮುಂದುವರಿಯಲಿದೆ.
ಆಸ್ಪತ್ರೆಯಿಂದಲೇ ಲಾಲು ಪ್ರಸಾದ್ ದರ್ಬಾರ್: ಆರ್ಜೆಡಿ ಅಭ್ಯರ್ಥಿಗಳ ಸಂದರ್ಶನ
ಲಾಲು ಪ್ರಸಾದ್ ಅವರು ಮುಖ್ಯಮಂತ್ರಿಯಾಗಿದ್ದಾಗ 1992-93ರ ಅವಧಿಯಲ್ಲಿ ಚೈಬಾಸಾ ಖಜಾನೆಯಲ್ಲಿ 33.67 ಕೋಟಿ ಅವ್ಯವಹಾರ ನಡೆದ ಪ್ರಕರಣದಲ್ಲಿ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಬಹುಕೋಟಿ ಮೇವು ಹಗರಣದಲ್ಲಿ ನಾಲ್ಕು ಪ್ರಕರಣಗಳನ್ನು ಎದುರಿಸುತ್ತಿರುವ ಲಾಲು, ಆರೋಗ್ಯ ಕಾರಣದಿಂದ ಜಾರ್ಖಂಡ್ನ ರಾಂಚಿಯಲ್ಲಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೈಲಿನಲ್ಲಿರಬೇಕಾದ ಲಾಲು ಪ್ರಸಾದ್ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಯಲ್ಲಿದ್ದಾರೆ. ಅಲ್ಲಿಂದಲೇ ಅವರು ವಿಧಾನಸಭೆ ಚುನಾವಣೆಗೆ ಆರ್ಜೆಡಿ ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಹಾಗೂ ಜಾರ್ಖಂಡ್ ಸರ್ಕಾರದ ಬೆಂಬಲವಿದೆ ಎಂದು ಜಾರ್ಖಂಡ್ ಮಾಜಿ ಸಿಎಂ ರಘುಬರ್ ದಾಸ್ ಆರೋಪಿಸಿದ್ದರು.