2014ರಲ್ಲಿ ಮೋದಿ ಗೆಲ್ಲಿಸಿದ್ದ ವ್ಯಕ್ತಿಗೆ ಕಾಲೇಜು ವಿದ್ಯಾರ್ಥಿಗಳಿಂದ ಗೂಸಾ
ಪಾಟ್ನಾ, ಡಿಸೆಂಬರ್ 04: ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಚುನಾವಣಾ ರಣತಂತ್ರ ಮೆದುಳಾಗಿದ್ದ, 2014ರಲ್ಲಿ ಎನ್ಡಿಎ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಚಾಣಕ್ಷ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ.
ಬಿಹಾರದಲ್ಲಿ ಅಧಿಕಾರದಲ್ಲಿರುವ ಜನತಾ ದಳ(ಯುನೈಟೆಡ್) ದಲ್ಲಿ ನಂ.2 ಸ್ಥಾನದಲ್ಲಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಅವರ ಮೇಲೆ ಬಿಹಾರದ ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ(ಡಿಸೆಂಬರ್ 04) ಹಲ್ಲೆ ನಡೆಸಿದ ಘಟನೆ ನಡೆದಿದೆ.
ಜೆಡಿಯುವಿನಲ್ಲಿ ನಂ.2 ಸ್ಥಾನಕ್ಕೇರಿದ ರಾಜಕೀಯ ತಂತ್ರಜ್ಞ ಪ್ರಶಾಂತ್
ಬಿಹಾರದಲ್ಲಿ 2015ರಲ್ಲಿ ಎನ್ಡಿಎ ವಿರುದ್ಧ ಜೆಡಿಯು ಹಾಗೂ ಆರ್ ಜೆಡಿ ಮಹಾಮೈತ್ರಿಗೆ ಯಶಸ್ಸು ತಂದುಕೊಟ್ಟಿದ್ದ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್ ಕೈಬಿಟ್ಟರೂ, ಆಡಳಿತರೂಢ ಜೆಡಿಯು ಕೈಬಿಟ್ಟಿರಲಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಆಪ್ತರಾಗಿರುವ ಪ್ರಶಾಂತ್ ಅವರು ತಡವಾಗಿಯಾದರೂ ಉನ್ನತ ಸ್ಥಾನ ಸಿಕ್ಕಿತ್ತು. ಜೆಡಿಯು ಉಪಾಧ್ಯಕ್ಷರಾದರು.
ಆದರೆ, ತನ್ನ ಉನ್ನತ ಹುದ್ದೆಯ ಪ್ರಭಾವ ಬೀರಲು ಹೋಗಿದ್ದೆ ಅವರಿಗೆ ಮುಳುವಾಗಿದೆ ಎಂಬ ಸುದ್ದಿ ಬಂದಿದೆ.. ಪ್ರಶಾಂತ್ ಮೇಲೆ ವಿದ್ಯಾರ್ಥಿಗಳು ಮುನಿಸಿಕೊಂಡಿರುವುದೇಕೆ? ಮುಂದೆ ಓದಿ..
ಪಾಟ್ನಾ ವಿವಿ ಉಪ ಕುಲಪತಿ ಮನೆ ಮುಂದೆ ಘಟನೆ
ಬಿಹಾರದ ಪಾಟ್ನಾ ವಿಶ್ವವಿದ್ಯಾಲಯದ ಉಪ ಕುಲಪತಿ ರಾಸ್ ಬಿಹಾರಿ ಸಿಂಗ್ ಅವರ ಮನೆಗೆ ಸೋಮವಾರ ರಾತ್ರಿ ವೇಳೆ ಪ್ರಶಾಂತ್ ತೆರಳಿದ್ದರು.
ಉಪ ಕುಲಪತಿಗಳ ಮನೆಯಿಂದ ಹೊರ ಬಂದ ಪ್ರಶಾಂತ್ ಗೆ ಆಘಾತವಾಗಿದೆ. ಮನೆ ಮುಂದೆ ನೂರಾರು ಮಂದಿ ವಿದ್ಯಾರ್ಥಿಗಳು ಆಕ್ರೋಶಭರಿತರಾಗಿ ನಿಂತಿರುವುದು ಕಂಡು ಬಂದಿದೆ. ಪ್ರಶಾಂತ್ ರಂಥ ಧಾವಿಸಿ ಗುಂಪೊಂದು ಹಲ್ಲೆ ನಡೆಸಿದೆ.
ಪ್ರಶಾಂತ್ ಅವರ ಕಾರನ್ನು ಕೆಲವರು ನಜ್ಜುಗುಜ್ಜಾಗಿಸಿದ್ದಾರೆ. ವಿಧಿಇಲ್ಲದೆ ಪೊಲೀಸ್ ರಕ್ಷಣೆ ಬೇಡಿದ್ದಾರೆ. ಪ್ರಶಾಂತ್ ರನ್ನು ಗಾಯಗೊಳ್ಳದಂತೆ ಅಲ್ಲಿಂದ ಕರೆದೊಯ್ಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಡಿಸೆಂಬರ್ 05ರ ಚುನಾವಣೆ ಬಗ್ಗೆ ಮಹತ್ವದ ಸಭೆ
ಪಾಟ್ನಾ ಉಪ ಕುಲಪತಿಗಳ ಮನೆಯಲ್ಲಿ ಡಿಸೆಂಬರ್ 05ರ ವಿಶ್ವವಿದ್ಯಾಲಯ ಚುನಾವಣೆ ಬಗ್ಗೆ ಸಭೆ ನಡೆಸುವ ವಿಷಯ ಗುಟ್ಟಾಗೇನೂ ಇರಲಿಲ್ಲ. ಚುನಾವಣಾ ಆಯುಕ್ತರಿಗೆ ಸಲಹೆಗಾರರಾಗಿರುವ ಪ್ರೊಫೆಸರ್ ರಾಮ್ ಶಂಕರ್ ಆರ್ಯ ಅವರು ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದು ವಿದ್ಯಾರ್ಥಿ ಸಂಘಟನೆಯನ್ನು ಕೆರಳಿಸಿತ್ತು. ಚುನಾವಣೆ ಪಾರದರ್ಶಕವಾಗಿ ನಡೆಯ್ವ ಬಗ್ಗೆ ಅನುಮಾನ ಮೂಡಿ, ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಬಂದಿದ್ದಾರೆ ಎಂಬ ಆರೋಪದ ಮೇಲೆ ಪ್ರಶಾಂತ್ ಅವರ ಮೇಲೆ ಹಲ್ಲೆಗೆ ಮುಂದಾದರು.
ಬಿಜೆಪಿ ಬೆಂಬಲಿತ ಎಬಿವಿಪಿಗೆ ಮೊದಲ ಚುನಾವಣೆ
ಜೆಡಿಯು ಬೆಂಬಲಿತ ವಿದ್ಯಾರ್ಥಿ ಸಂಘಟನೆಗೆ ಸೆಡ್ಡು ಹೊಡೆಯಲು ಈ ಬಾರಿ ಬಿಜೆಪಿ ಬೆಂಬಲಿತ ಎಬಿವಿಪಿ ಕಣಕ್ಕಿಳಿದಿತ್ತು. ಕಳೆದ ಕೆಲವು ತಿಂಗಳುಗಳಿಂದ ಪ್ರಶಾಂತ್ ಕಿಶೋರ್ ಅವರು ಹೆಚ್ಚಾಗಿ ವಿದ್ಯಾರ್ಥಿ ಸಂಘಟನೆಗಳ ಜತೆ ಸಭೆ ನಡೆಸುತ್ತಾ ಬಂದಿದ್ದರು. ಇತ್ತೀಚೆಗೆ ಸರ್ಕ್ಯುಲರ್ ರಸ್ತೆಯ ನಿತೀಶ್ ಕುಮಾರ್ ನಿವಾಸದಲ್ಲಿ ಸಭೆ ನಡೆಸಿ, ವಿದ್ಯಾರ್ಥಿ ಮುಖಂಡರಿಗೆ ನಿರ್ದೇಶನ ನೀಡಿದ್ದರು. ಇದರಿಂದ ಕೆರಳಿದ್ದ ಎಬಿವಿಪಿ, ಚುನಾವಣೆಯಲ್ಲಿ ಅಕ್ರಮ ಜರಗುವ ಸಂಶಯ ವ್ಯಕ್ತಪಡಿಸಿ, ಪ್ರತಿಭಟಿಸಿತ್ತು.
ರಾಜಕೀಯ ತಿರುವು ಪಡೆದ ವಿವಿ ಚುನಾವಣೆ
ಶಾಸಕ ನಿತಿನ್ ನವೀನ್ ನೇತೃತ್ವದ ತಂಡವೊಂದು ರಾಜ್ಯಪಾಲ ಲಾಲ್ಜಿ ತಂಡನ್ ಅವರನ್ನು ಭೇಟಿಮಾಡಿ, ಉಪ ಕುಲಪತಿಗಳ ಮನೆಯಲ್ಲಿ ನಡೆದ ಘಟನಾವಳಿ ಬಗ್ಗೆ ದೂರು ನೀಡಿದ್ದಾರೆ. ಪಾಟ್ನಾ ವಿವಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಂತೆ ಕೋರಿದರು. ಡಿ 3ರಂದು ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜಕೀಯ ಮುಖಂಡರು ಉಪ ಕುಲಪತಿಗಳ ಮನೆಗೆ ಭೇಟಿ ನೀಡಿದ್ದಾರೆ. ಜೆಡಿಯು ತನ್ನ ಪ್ರಭಾವ ಬೀರಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಬಿಜೆಪಿ ದೂರಿದೆ.