ಕೊವಿಡ್-19 ಉಚಿತ ಲಸಿಕೆ ಬಿಹಾರಕ್ಕಷ್ಟೇ ಸೀಮಿತವೇ: ರಾಹುಲ್ ಗಾಂಧಿ
ಪಾಟ್ನಾ, ಅಕ್ಟೋಬರ್.22: ಬಿಹಾರದಲ್ಲಿ ಉಚಿತವಾಗಿ ಕೊರೊನಾವೈರಸ್ ಸೋಂಕಿಗೆ ಲಸಿಕೆಯನ್ನು ವಿತರಿಸಲಾಗುತ್ತದೆ ಎಂದು ಎನ್ ಡಿಎ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದು ವಿರೋಧ ಪಕ್ಷಗಳಿಗೆ ಆಹಾರವಾಗಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಜನರ ಪ್ರಾಣ ಉಳಿಸುವ ಕೊರೊನಾವೈರಸ್ ಲಸಿಕೆ ವಿಚಾರದಲ್ಲೂ ರಾಜಕಾರಣ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ರೋಗ, ಸಾವಿನ ಭೀತಿಯನ್ನು ಮಾರುತ್ತಿರುವ ಬಿಜೆಪಿ: ಉಚಿತ ಲಸಿಕೆ ಭರವಸೆಗೆ ತೇಜಸ್ವಿ ಕಿಡಿ
"ಕೊರೊನಾವೈರಸ್ ಲಸಿಕೆ ಲಭ್ಯತೆ ಬಗ್ಗೆ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ. ರಾಜ್ಯವಾರು ಚುನಾವಣಾ ವೇಳಾಪಟ್ಟಿಯನ್ನೊಮ್ಮೆ ನೋಡಿ ಹೇಳಿ. ಕೊರೊನಾವೈರಸ್ ಲಸಿಕೆ ಸಿಗುವುದಕ್ಕೆ ಇನ್ನೆಷ್ಟು ಸುಳ್ಳು ಭರವಸೆಗಳನ್ನು ನೀಡುತ್ತೀರಿ" ಎಂದು ರಾಹುಲ್ ಗಾಂಧಿಯವರು ಪ್ರಶ್ನೆ ಮಾಡಿದ್ದಾರೆ.
"ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಪಾಡು?"
"ಬಿಹಾರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಉಚಿತವಾಗಿ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಹಾಗಿದ್ದಲ್ಲಿ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳ ಪರಿಸ್ಥಿತಿ ಏನು ಎಂದು ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಬಿಜೆಪಿಗೆ ಮತ ನೀಡಿದವರಿಗೆ ಮಾತ್ರ ಉಚಿತವಾಗಿ ಕೊವಿಡ್-19 ಲಸಿಕೆ ನೀಡುತ್ತೀರಿ. ಬಿಜೆಪಿಗೆ ಮತ ನೀಡದಿದ್ದರೆ ಅಂಥವರಿಗೆ ಲಸಿಕೆಯನ್ನು ನೀಡುವುದಿಲ್ಲವೇ" ಎಂದು ದೆಹಲಿ ಸಿಎಂ ಪ್ರಶ್ನೆ ಮಾಡಿದ್ದಾರೆ.
ಪಾಟ್ನಾದಲ್ಲಿ ಗುರುವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಎನ್ ಡಿಎ ಮೈತ್ರಿಕೂಟದ ಮುಂದಿನ ಐದು ವರ್ಷಗಳಿಗೆ ಸಂಬಂಧಿಸಿದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. "ಐದು ಸೂತ್ರ, ಒಂದು ಗುರಿ ಮತ್ತು 19 ಸಂಕಲ್ಪ" ಎಂಬ ಧ್ಯೇಯವಾಕ್ಯವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು.
ಬಿಹಾರ ಚುನಾವಣೆಗೆ ಎನ್ ಡಿಎ ಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ ಬಳಿಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೊವಿಡ್-19 ಲಸಿಕೆ ವಿತರಣೆ ಬಗ್ಗೆ ಮಾತನಾಡಿದರು. ದೇಶದಲ್ಲಿ ಒಂದು ಬಾರಿ ಕೊವಿಡ್-19 ಲಸಿಕೆ ಉತ್ಪಾದನೆ ಆರಂಭವಾದರೆ ಸಾಕು. ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗುತ್ತದೆ. ಇದು ನಮ್ಮ ಮೈತ್ರಿಕೂಟದ ಮೊದಲ ಆಶ್ವಾಸನೆ ಮತ್ತು ಆದ್ಯತೆ ಆಗಿರಲಿದೆ ಎಂದು ಹೇಳಿದ್ದರು.