'ನಾನು ಸಿಂಹದ ಮಗ' : ಚಿರಾಗ್ ಪಾಸ್ವಾನ್ ಎಚ್ಚರಿಕೆ
ಪಾಟ್ನಾ, ಜೂ.16: ಚಿಕ್ಕಪ್ಪನ ನೇತೃತ್ವದ ಲೋಕ ಜನಶಕ್ತಿ ಪಕ್ಷದಲ್ಲಿ (ಎಲ್ಜೆಪಿ) ದಂಗೆಯ ನಂತರ ತಾನು ಉಳಿಯಲು ಹೋರಾಡುತ್ತಿರುವ ಚಿರಾಗ್ ಪಾಸ್ವಾನ್, ಬಂಡುಕೋರ ಗುಂಪಿನ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧ ಎಂದು ಹೇಳಿದ್ದಾರೆ. "ನಾನು ರಾಮ್ ವಿಲಾಸ್ ಮಗ, ಸಿಂಹದ ಮಗ" ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಕ್ಕಟ್ಟು ಸ್ಫೋಟಗೊಂಡ ನಂತರ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಲ್ಜೆಪಿ ನಾಯಕ ಚಿರಾಗ್, ಬಿಹಾರ ಚುನಾವಣೆಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ ಪ್ರತ್ಯೇಕವಾಗಿ ಸ್ಪರ್ಧಿಸುವಂತಹ ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಇದು ತನ್ನ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ಜೊತೆಗಿನ ದ್ವೇಷದ ಪರಿಣಾಮ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಬಿಕ್ಕಟ್ಟು: ಲೋಕ ಜನಶಕ್ತಿ ಪಕ್ಷದಲ್ಲಿ ಮಗನ ವಿರುದ್ಧವೇ ಚಿಕ್ಕಪ್ಪನ ದಂಗೆ
"ನನ್ನ ತಂದೆಯನ್ನು ಕಳೆದುಕೊಂಡಾಗ ಅಲ್ಲ, ನನ್ನ ಚಿಕ್ಕಪ್ಪ ನನ್ನನ್ನು ತೊರೆದ ನಂತರ ನಾನಿಂದು ಅನಾಥನಾಗಿದ್ದೇನೆ," ಎಂದು ಭಾವಾನಾತ್ಮಕ ಮಾತುಗಳನ್ನು ಮಾತನಾಡಿದ ಚಿರಾಗ್, "ನಾನು ಅನಾರೋಗ್ಯಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಈ ದಂಗೆಯನ್ನು ಬೇರೆಯವರು ರೂಪಿಸಿ, ಕಾರ್ಯಗತಗೊಳಿಸಿದರು," ಎಂದಿದ್ದಾರೆ.
ಬಿಹಾರ ರಾಜಕಾರಣದಲ್ಲಿ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಚಿರಾಗ್ ಪಾಸ್ವಾನ್ರನ್ನು ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ. ಸೂರಜ್ ಬಾನ್ ಸಿಂಗ್ರನ್ನು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಸುವ ಅಧಿಕಾರವನ್ನು ಸೂರಜ್ ಬಾನ್ ಸಿಂಗ್ಗೆ ನೀಡಲಾಗಿದೆ.
ಸೋಮವಾರ ಬಿಹಾರದ ಲೋಕ ಜನಶಕ್ತಿ ಪಕ್ಷದ ಆರು ಸಂಸದರ ಪೈಕಿ ಐದು ಸಂಸದರು ಚಿರಾಗ್ ಪಾಸ್ವಾನ್ ಚಿಕ್ಕಪ್ಪ( ರಾಮ್ ವಿಲಾಸ್ ಪಾಸ್ವಾನ್ ಸಹೋದರ) ಪಶುಪತಿ ಕುಮಾರ್ ಪಾರಸ್ ಅನ್ನು ಬೆಂಬಲಿಸಿದ್ದರು. ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದಿರುವ ಐದು ಸಂಸದರನ್ನು ದಿಢೀರ್ ಬೆಳವಣಿಗೆಯೊಂದರಲ್ಲಿ ಪಕ್ಷದಿಂದಲೇ ಉಚ್ಛಾಟಿಸಲಾಗಿದೆ.
ಚಿರಾಗ್ ವಿರುದ್ಧ ಕ್ರಮದ ಬಗ್ಗೆ ಬಿಜೆಪಿ ನಿರ್ಧರಿಸಲಿ: ನಿತೀಶ್ ಕುಮಾರ್
"ನಿನ್ನೆ ಮಧ್ಯಾಹ್ನದವರೆಗೆ ನನ್ನ ತಾಯಿ ಮತ್ತು ನಾನು ಚಿಕ್ಕಪ್ಪನನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದೇವೆ. ಚಿಕ್ಕಪ್ಪ ನನ್ನ ಬಳಿ ಕೇಳಿದ್ದರೆ, ನಾನೇ ಅವರನ್ನು ಪಕ್ಷದ ಸಂಸದೀಯ ಮಂಡಳಿಯ ಮುಖ್ಯಸ್ಥರನ್ನಾಗಿ ಮಾಡುತ್ತಿದ್ದೆ," ಎಂದಿದ್ದಾರೆ ಪಾಸ್ವಾನ್.
(ಒನ್ಇಂಡಿಯಾ ಸುದ್ದಿ)