ಎನ್ ಡಿಎ ಮೈತ್ರಿ ಕಡಿದುಕೊಳ್ಳಲು ಕಾರಣ ಬಿಚ್ಚಿಟ್ಟ ಚಿರಾಗ್ ಪಾಸ್ವಾನ್
ಪಾಟ್ನಾ, ಆಕ್ಟೋಬರ್.04: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಆದರೆ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ದೂಷಿಸಿದ್ದಾರೆ.
ಭಾನುವಾರವಷ್ಟೇ ನಡೆದ ಲೋಕ ಜನಶಕ್ತಿ ಪಕ್ಷದ ಶಾಸಕಾಂಗ ಮಂಡಳಿ ಸಭೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA) ಮೈತ್ರಿಕೂಟದ ಜೊತೆಗೂಡಿ ಬಿಹಾರ ವಿಧಾನಸಭಾ ಚುನಾವಣೆ ಎದುರಿಸದಿರಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆ ಎನ್ ಡಿಎ ಮೈತ್ರಿಕೂಟದಿಂದ ಹೊರತಾಗಿ ಎಲ್ ಜೆಪಿ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ ಎಂದು ಘೋಷಿಸಲಾಗಿತ್ತು.
ಬಿಹಾರ ಚುನಾವಣೆ ಹೊಸ್ತಿಲಿನಲ್ಲೇ ಎನ್ ಡಿಎ ತೊರೆದ ಎಲ್ ಜೆಪಿ
ಸೋಮವಾರ ತಮ್ಮ ತೀರ್ಮಾನದ ಬಗ್ಗೆ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ಮುನ್ನೆಡೆಸುವಲ್ಲಿ ನಿತೀಶ್ ಕುಮಾರ್ ವಿಫಲರಾಗಿದ್ದು, ಅವರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಲು ಬಯಸುವುದಿಲ್ಲ ಎಂದಿದ್ದಾರೆ.
'ಡಬಲ್ ಇಂಜಿನ್ ಸರ್ಕಾರ'ದ ಕುರಿತು ಚಿರಾಗ್ ಬೇಸರ
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮತ್ತು ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಬಿಹಾರದಲ್ಲಿ 'ಡಬಲ್ ಇಂಜಿನ್' ಸರ್ಕಾರವು ಉದ್ದೇಶಿತ ಮಾರ್ಗದಲ್ಲಿ ಆಡಳಿತವನ್ನು ನೀಡಿದ್ದರೆ ಅಂದುಕೊಂಡಂತೆ ಕೆಳಮಟ್ಟದಿಂದ ಜನರನ್ನು ತಲುಪುವ ಕೆಲಸವು ಆಗುತ್ತಿತ್ತು. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿನ ಸರ್ಕಾರವು ಉತ್ತಮ ಆಡಳಿತ ನೀಡುವಲ್ಲಿ ಸೋತಿದೆ ಎಂದು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
"ಬಿಹಾರದಲ್ಲಿ ಮಹಾಘಟಬಂಧನ್ ಜೊತೆಗೆ ಹೋಗುವುದಿಲ್ಲ"
ಲೋಕ ಜನಶಕ್ತಿ ಪಕ್ಷವು ಎನ್ ಡಿಎ ಮೈತ್ರಿಕೂಟವನ್ನು ತೊರೆದ ಮಾತ್ರಕ್ಕೆ ಸುಲಭ ದಾರಿಯನ್ನು ಕಂಡುಕೊಳ್ಳುತ್ತೇವೆ. ಪ್ರತಿಪಕ್ಷ ಮಹಾಘಟಬಂಧನ್ ಮೈತ್ರಿಕೂಟದ ಜೊತೆಗೆ ಕೈ ಜೋಡಿಸುತ್ತೇವೆ ಎಂದುಕೊಳ್ಳುವ ಅಗತ್ಯವಿಲ್ಲ. ನಾವು ಕ್ಲಿಷ್ಟಕರ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಯಾವ ಪಕ್ಷದ ಜೊತೆಗೂ ಚುನಾವಣೆ ನಂತರದಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಚಿರಾಗ್ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಚುನಾವಣೆ ನಂತರದಲ್ಲೂ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ನಿತೀಶ್ ಕುಮಾರ್ ರಿಂದ ನಮ್ಮ ನಿರೀಕ್ಷೆಗಳು ಹುಸಿ
"ಪ್ರಸ್ತುತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಮೇಲೆ ನಾವು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಆದರೆ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳು ಮತ್ತು ಅದರ ಪ್ರಯೋಜನಗಳು ಸಾಮಾನ್ಯ ಜನರನ್ನು ತಲುಪುತ್ತಿಲ್ಲ. ಹೀಗಾಗಿ ಜನರು ಈಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಮಗಾಗಿ ಏನು ಮಾಡಿದ್ದಾರೆ. ಯಾವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಪ್ರಶ್ನೆ ಮಾಡುವಂತಾ ಪರಿಸ್ಥಿತಿ ಎದುರಾಗಿದೆ" ಎಂದು ಚಿರಾಗ್ ಪಾಸ್ವಾನ್ ದೂರಿದ್ದಾರೆ.
ಬಿಹಾರದ ಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲ
"ಕಳೆದ 2005 ರಿಂದ 2020ರ ಅವಧಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಬಿಹಾರದ ಜನರು ಇಂದಿಗೂ ಉದ್ಯೋಗವನ್ನು ಅರಸಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ರಾಜ್ಯದಲ್ಲೇ ಉದ್ಯೋಗ ಸೃಷ್ಟಿಯಾಗಿದ್ದಲ್ಲಿ ಅವರು ವಲಸೆ ಹೋಗುವ ಅಗತ್ಯವೇ ಇರುತ್ತಿರಲಿಲ್ಲ. ಇಲ್ಲಿ ನಾನು ಯಾವುದೇ ವ್ಯಕ್ತಿಯನ್ನು ದೂಷಿಸುವುದಕ್ಕೆ ಬಯಸುವುದಿಲ್ಲ. ಬದಲಿಗೆ ಆಡಳಿತ ವೈಖರಿಯಲ್ಲಿನ ವೈಫಲ್ಯವನ್ನು ಹೇಳುತ್ತಿದ್ದೇನೆ. ನಮ್ಮ ಉದ್ದೇಶ ಬಿಹಾರದ ಜನರಿಗೆ ಉದ್ಯೋಗ ಸೃಷ್ಟಿ ಮತ್ತು ರಾಜ್ಯದ ಅಭಿವೃದ್ಧಿಯೇ ಹೊರತೂ ವ್ಯಕ್ತಿ ಮೇಲಿನ ದೂಷಣೆ ಖಂಡಿತವಾಗಿಯೂ ಅಲ್ಲ" ಎಂದು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.