ನಾನೇ ಲಾಲೂ ಉತ್ತರಾಧಿಕಾರಿ ಎಂದು ಘೋಷಿಸಿಕೊಂಡ ದೊಡ್ಡ ಮಗ ತೇಜ್ ಪ್ರತಾಪ್
ಪಾಟ್ನಾ (ಬಿಹಾರ), ಮೇ 3: ಲಾಲೂ ಪ್ರಸಾದ್ ಯಾದವ್ ಅವರ ರಾಜಕೀಯ ಜೀವನ ಬಾಕಿ ಏನೂ ಉಳಿದಿಲ್ಲ. ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿರುವ ಲಾಲೂ ಪ್ರಸಾದ್, ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಲೋಕಸಭಾ ಚುನಾವಣೆಯ ಮುಖ್ಯ ಘಟ್ಟದ ವೇಳೆಯಲ್ಲಿ ಲಾಲೂ ಕುಟುಂಬದ ಕಚ್ಚಾಟ ಬೀದಿಗೆ ಬಿದ್ದಿದೆ.
"ಬಿಹಾರದಲ್ಲಿ ನಾನೇ ಎರಡನೇ ಲಾಲೂ ಯಾದವ್" ಅನ್ನೋದು ದೊಡ್ಡ ಮಗ ತೇಜ್ ಪ್ರತಾಪ್ ಯಾದವ್ ನ ಮಾತು. ಆದರೆ ವಾಸ್ತವ ಏನೆಂದರೆ, ಎರಡನೇ ಮಗ ತೇಜಸ್ವಿ ಯಾದವ್ ಬಗ್ಗೆ ಪಕ್ಷದೊಳಗೆ, ಹೊರಗೆ ಅಪಾರ ನಿರೀಕ್ಷೆ, ಗೌರವ ಎಲ್ಲವೂ ಇದೆ. ಆದರೆ ಸಾರ್ವಜನಿಕ ಸಭೆಯಲ್ಲಿ ತೇಜ್ ಪ್ರತಾಪ್ ತಾವೇ ಲಾಲೂ ಉತ್ತರಾಧಿಕಾರಿ ಎಂದು ಗುರುವಾರ ಜಹಾನಾಬಾದ್ ನಲ್ಲಿ ನಡೆದ ಸಭೆಯಲ್ಲಿ ಘೋಷಿಸಿದ್ದಾರೆ.
ಮಹಾಮೈತ್ರಿಕೂಟದ ಲಾಲೂ ಕನಸಿಗೆ ದೊಡ್ಡ ಮಗನೇ ಅಡ್ಡಿ
ಅವರು (ಲಾಲೂ ಪ್ರಸಾದ್) ಬಹಳ ಚಟುವಟಿಕೆಯ ಮನುಷ್ಯ. ದಿನಕ್ಕೆ ಹತ್ತರಿಂದ ಹನ್ನೆರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಈಗಿನ ನಾಯಕರು ಎರಡು ಕಾರ್ಯಕ್ರಮಕ್ಕೆ ಹುಷಾರು ತಪ್ಪಿ ಬಿಡುತ್ತಾರೆ ಎಂದು ತೇಜ್ ಪ್ರತಾಪ್ ಯಾದವ್ ತಮ್ಮ ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ.
ಅಂದ ಹಾಗೆ ತೇಜ್ ಪ್ರತಾಪ್ ನ ತಮ್ಮ ತೇಜಸ್ವಿ ಅನಾರೋಗ್ಯದ ಕಾರಣಕ್ಕೆ ಹಲವು ಚುನಾವಣೆ ಸಭೆಗಳನ್ನು ರದ್ದು ಮಾಡಿದ್ದಾರೆ. ಆತನನ್ನು ಗುರಿ ಮಾಡಿಕೊಂಡು ಲೇವಡಿ ಮಾಡಿರುವ ಬಗ್ಗೆಯೂ ಚರ್ಚೆಗಳಾಗುತ್ತಿವೆ. "ನಾನು ಲಾಲೂ ಯಾದವ್ ರ ರಕ್ತ. ಅವರು ನಮ್ಮ ಆದರ್ಶ ಹಾಗೂ ಗುರು. ನಾನು ಬಿಹಾರದ ಎರಡನೇ ಲಾಲೂ ಯಾದವ್" ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.