ಗಾಯದ ಮೇಲೆ ಬರೆ, ಸಿಡಿಲಿನ ಆಘಾತದ ನಂತರ ಮಳೆ ಭೀತಿ
ಪಾಟ್ನಾ, ಜೂನ್ 25: ಸಿಡಿಲಿನ ಹೊಡೆತದಿಂದ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಗುರುವಾರದಂದು ಮೃತಪಟ್ಟವರ ಸಂಖ್ಯೆ 100ಕ್ಕೇರಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಶಂಕೆ ವ್ಯಕ್ತವಾಗಿದೆ. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಬಿಹಾರದಲ್ಲಿ ಭಾರಿ ಮಳೆ, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
ಬಿಹಾರದ ಕನಿಷ್ಠ 8 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಸಿವಾನ್, ದರ್ಭಾಂಗ, ಅರಾರಿಯಾ, ಕಿಶಾನ್ ಗಂಜ್, ಸೀತಾಮರ್ಹಿ, ಗೋಪಾಲ್ ಗಂಜ್, ಸುಪಾಲ್ ಪ್ರದೇಶಲ್ಲಿ ಗುಡುಗು, ಸಿಡಿಲು, ಭಾರಿ ಗಾಳಿ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಭಾರಿ ಮಳೆಯ ಎಚ್ಚರಿಕೆ
ಹವಾಮಾನ ಇಲಾಖೆಯ ದಾಮಿನಿ, ಇಂದರ್ ವಜ್ರ್ ಮುಂತಾದ ಮೊಬೈಲ್ ಆಪ್ ಬಳಸಿ ಸಿಡಿಲು, ಮಳೆ ಬಗ್ಗೆ ಮಾಹಿತಿ ಪಡೆಯಲು ಇಲಾಖೆ ಸೂಚಿಸಿದೆ. ಕಳೆದ ವರ್ಷ ಬಿಹಾರದಲಿ ಸಿಡಿಲಿನ ಆಘಾತಕ್ಕೆ 39 ಮಂದಿ ಬಲಿಯಾಗಿದ್ದರು. ಈ ಬಾರಿ ಹೆಚ್ಚಿನ ಮಂದಿ ಮನೆಯಿಂದ ಹೊರಗಡೆ ಇದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತರ ಪೈಕಿ ಅನೇಕರು ಬಲವಾದ ಮಳೆಯ ನಡುವೆ ಗದ್ದೆ, ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ರೈತಾಪಿ ಕುಟುಂಬದವರೇ ಹೆಚ್ಚು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಿಹಾರದ ಗೋಪಾಲ್ಗಂಜ್, ಸಿವಾನ್, ಮಧುಬನಿ, ಮೋತಿಹಾರಿ, ದರ್ಭಾಂಗದಲ್ಲಿ ಸಿಡಿಲಿಗೆ ಒಟ್ಟು 83 ಜನರು ಸಾವನ್ನಪ್ಪಿದ್ದಾರೆ. ಗೋಪಾಲ್ಗಂಜ್ನಲ್ಲಿ 13 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಸಿವಾನ್ನಲ್ಲಿ ಐದು ಜನರು ಸಾವನ್ನಪ್ಪಿದರು. ಮಧುಬನಿ ಮತ್ತು ಮೋತಿಹರಿಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ದರ್ಬಂಗದಲ್ಲೂ ವ್ಯಕ್ತಿಯೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ ಸಿಎಂ ನಿತೀಶ್ ಕುಮಾರ್ 4 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದಾರೆ.