ತೇಜಸ್ವಿ ಯಾದವ್ ಪ್ರಚಾರದಲ್ಲಿ ಭಾರಿ ಜನಸಮೂಹದ ಗುಟ್ಟು?
ಪಾಟ್ನಾ, ಅಕ್ಟೋಬರ್.21: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಹಾಗೂ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಪ್ರಚಾರದ ಸಭೆಯಲ್ಲಿ ಸಾಗರೋಪಾದಿಯಲ್ಲಿ ಜನರ ದಂಡೇ ಹರಿದು ಬರುತ್ತಿದೆ.
ಈ ಮೊದಲು ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪ್ರಚಾರದ ವೇಳೆ ನೆರೆಯುತ್ತಿದ್ದಂತೆ ಜನರು ಸೇರುತ್ತಿದ್ದಾರೆ. ಇದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರಣವು ಸಂಪೂರ್ಣ ಬದಲಾಗಲಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಿಹಾರ ಕಾರ್ಮಿಕರಿಗೆ ಬಂಪರ್!
ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡಕ್ಕೆ ಮುಂದಿನ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರವೇಶಿಸಲಿದ್ದಾರೆ. ಅಲ್ಲಿಂದ ರಾಜ್ಯ ರಾಜಕಾರಣದ ಚಹರೆಯು ಬದಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸುತ್ತಿವೆ.
ಮಹಾಘಟಬಂಧನ್ ವೋಟ್ ಬ್ಯಾಂಕ್ ರಾಜಕಾರಣ
ಬಿಹಾರದಲ್ಲಿ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪ್ರಚಾರಕ್ಕೆ ಹೊರಟ ಸಂದರ್ಭಗಳಲ್ಲಿ ಇಡೀ ರೀತಿಯಲ್ಲಿ ಜನಸಾಗರವೇ ನೆರೆಯುತ್ತಿತ್ತು. ಅಲ್ಪಸಂಖ್ಯಾತ ಮತ್ತು ಯಾದವ್ ಸಮುದಾಯದ ಮತದಾರರು ರಾಷ್ಟ್ರೀಯ ಜನತಾ ದಳ ಪಕ್ಷದ ಜೊತೆಗಿದ್ದಾರೆ. ಆರ್ ಜೆಡಿ ಪ್ರಾಬಲ್ಯವುಳ್ಳ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭಗಳಲ್ಲಿ ಅತಿಹೆಚ್ಚಿನ ಜನಸಮೂಹವು ಸೇರಿಕೊಳ್ಳುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟ ಬಳಿಕ ಎಲ್ಲ ಚಿತ್ರಣವು ಬದಲಾಗಲಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ.
ಎನ್ ಡಿಎ ಮೈತ್ರಿಕೂಟದ ವೋಟ್ ಬ್ಯಾಂಕ್
ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿಗೆ ಮೈತ್ರಿಕೂಟದ ಒಗ್ಗಟ್ಟು ಮೂಲಮಂತ್ರವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ನಡೆಸಿದ ಚುನಾವಣಾ ಪ್ರಚಾರ ಪೂರ್ವ ಸಭೆಯಲ್ಲಿ ಒಗ್ಗಟ್ಟಿನ ಮಂತ್ರಿ ಜಪಿಸುವಂತೆ ತೀರ್ಮಾನಿಸಲಾಗಿದೆ. ರಾಜ್ಯದಲ್ಲಿರುವ ಹಿಂದುಳಿದ ವರ್ಗ, ಹಿಂದುಳಿದ ಜಾತಿ ಮತ್ತು ದಲಿತರ ಮತಗಳ ಮೇಲೆ ಲಕ್ಷ್ಯ ವಹಿಸುವಂತೆ ಸೂಚಿಸಲಾಗಿದೆ. ಎನ್ ಡಿಎ ಮೈತ್ರಿಕೂಟಕ್ಕೆ ಈ ಸಮುದಾಯವೇ ವೋಟ್ ಬ್ಯಾಂಕ್ ಆಗಿರಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯ 12 ರ್ಯಾಲಿ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ)ದ ಅಭ್ಯರ್ಥಿಗಳ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 12 ರ್ಯಾಲಿಗಳನ್ನು ನಡೆಸಲಿದ್ದಾರೆ. ಅಕ್ಟೋಬರ್.23ರಂದು ಸಸಾರಮ್, ಗಯಾ, ಭಗಲ್ಪುರ್ ನಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ. ಅಕ್ಟೋಬರ್.28ರಂದು ದರ್ಭಂಗಾ, ಮುಜಾಫರ್ ಪುರ್ ಮತ್ತು ಪಾಟ್ನಾದಲ್ಲಿ ರ್ಯಾಲಿ ನಡೆಸಲಿದ್ದಾರೆ. ನವೆಂಬರ್.03ರಂದು ಛಪ್ರಾ, ಪೂರ್ವ ಚಂಪಾರಣ್, ಸಮಸ್ತಿಪುರ್ ನಲ್ಲಿ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಮತದಾರರನ್ನು ಸೆಳೆಯುತ್ತಾ ಮಹಾಘಟಬಂಧನ್ ಪ್ರಣಾಳಿಕೆ
ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮಹಾಘಟಬಂಧನ್ ಮೈತ್ರಿಕೂಟ ಮತದಾರರನ್ನು ಸೆಳೆಯಲು ಬುಧವಾರವಷ್ಟೇ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಬಿಹಾರದ ಕಾರ್ಮಿಕರಿಗೆ ಬಿಹಾರದಲ್ಲೇ ಉದ್ಯೋಗವನ್ನು ಸೃಷ್ಟಿಸುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ. ರಾಜ್ಯದ ಕಾರ್ಮಿಕರಿಗೆ ಬಿಹಾರದಲ್ಲೇ ಉದ್ಯೋಗ ಸೃಷ್ಟಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 1500 ರೂಪಾಯಿ ಸಹಾಯ ಧನವನ್ನು ನೀಡಲಾಗುತ್ತದೆ. ಪಂಜಾಬ್ ಸರ್ಕಾರದ ಮಾದರಿಯಲ್ಲೇ ಬಿಹಾರದಲ್ಲೂ ಪ್ರತ್ಯೇಕವಾಗಿ ರೈತ ಕಾನೂನು ತಿದ್ದುಪಡಿ ಮಾಡಲಾಗುತ್ತದೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
ಬಿಹಾರದಲ್ಲಿ ಪ್ರತಿ ತಿಂಗಳು 800 ರೂಪಾಯಿ ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನವನ್ನು ನೀಡಲಾಗುತ್ತದೆ. ಇದರ ಜೊತೆಗೆ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 1000 ರೂಪಾಯಿ ಸಹಾಯ ಧನವನ್ನು ನೀಡಲಾಗುತ್ತದೆ. ರೈತರ ಕೃಷಿಗೆ ನೆರವಾಗುವಂತೆ ಉಚಿತವಾಗಿ ವಿದ್ಯುತ್ ಒದಗಿಸಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.