''ಕಾಂಗ್ರೆಸ್ಸಿಗರು ಫೈವ್ ಸ್ಟಾರ್ ಸಂಸ್ಕೃತಿ ತೊರೆದರೆ ಉಳಿಗಾಲ''
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಚುನಾವಣಾಪೂರ್ವದಲ್ಲಿ ಮಾಡಿಕೊಂಡ ಒಪ್ಪಂದವೇ ಕಾರಣ ಎಂದು ಪಿ.ಚಿದಂಬರಂ ಆರೋಪಿಸಿದ್ದಾರೆ.
ದೇಶದಲ್ಲಿ ಇನ್ನು ಮುಂದೆ ಯಾವುದೇ ರಾಜ್ಯದ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದರೂ ಕೂಡಾ ಕಾಂಗ್ರೆಸ್ ನಲ್ಲಿ ಭಾರಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯ ಎಂದು ಹಿರಿಯ ನಾಯಕರೆಲ್ಲರೂ ಒಕ್ಕೊರಲಿನಿಂದ ಹೇಳುತ್ತಿದ್ದಾರೆ.
ಕಾಂಗ್ರೆಸ್ ಸೋಲಿನ ಕಥೆ: ಬಿಹಾರದಲ್ಲಿ ರಾಷ್ಟ್ರೀಯ ಪಕ್ಷ ಮಾಡಿದ ತಪ್ಪೇನು?
ಈ ಬಗ್ಗೆ ಮಾತನಾಡಿದ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಅವರು ಕಾಂಗ್ರೆಸ್ಸಿಗರು ಫೈವ್ ಸ್ಟಾರ್ ಸಂಸ್ಕೃತಿ ತೊರೆದರೆ ಮಾತ್ರ ಉಳಿಗಾಲ, ಸಂಪೂರ್ಣವಾಗಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದಿದ್ದಾರೆ. ಬಿಹಾರದಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 19 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.
ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಅಜಾದ್ ಅವರು ಕಾಂಗ್ರೆಸ್ ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಬಿಹಾರದಲ್ಲಿ ಸೋಲಿಗೆ ಫೈವ್ ಸ್ಟಾರ್ ಸಂಸ್ಕೃತಿ ಪ್ರಮುಖ ಕಾರಣ ಎಂದಿದ್ದಾರೆ
ಮಹಾಘಟಬಂಧನ್ ಪ್ರಮುಖ ಪಕ್ಷ ಕಾಂಗ್ರೆಸ್
ಆರ್ ಜೆ ಡಿಯ ತೇಜಸ್ವಿ ಯಾದವ್ ನೇತೃತ್ವ ಮಹಾಘಟಬಂಧನ್ 243 ಸ್ಥಾನಗಳ ಪೈಕಿ 110 ಸ್ಥಾನ ಗಳಿಸಿದರೆ, ಎದುರಾಳಿ ಎನ್ಡಿಎ 125 ಸ್ಥಾನ ಗಳಿಸಿ ಅಧಿಕಾರಕ್ಕೇರಿದೆ. ಕಾಂಗ್ರೆಸ್ ಹಲವೆಡೆ ಕಳಪೆ ಪ್ರದರ್ಶನ ನೀಡಿದ್ದು, ಬ್ಲಾಕ್ ಮಟ್ಟದಿಂದ ಜಿಲ್ಲಾ ಮಟ್ಟದ ತನಕ ಬೆಳೆದಿರುವ ಫೈವ್ ಸ್ಟಾರ್ ಸಂಸ್ಕೃತಿಯನ್ನು ಮೊದಲು ತೊರೆಯಬೇಕು. ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಜನರ ಕಷ್ಟ ಆಲಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ, ಆದರೆ, ಜನ ಸಂಪರ್ಕ ನಿರಂತರ ಕ್ರಿಯೆ ಎಂದು ಆಜಾದ್ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಬದಲಾವಣೆ ಬಯಸಿ 23 ಪತ್ರ
ಕಾಂಗ್ರೆಸ್ ನಲ್ಲಿ ಬದಲಾವಣೆ ಬಯಸಿ 23 ಪತ್ರ ಬರೆದಿದ್ದ ಮುಖಂಡರಲ್ಲಿ ಅಜಾದ್ ಕೂಡಾ ಒಬ್ಬರಾಗಿದ್ದರು. ಕಾಂಗ್ರೆಸ್ ನಲ್ಲಿ ಬದಲಾವಣೆಗಾಗಿ ಸಲಹೆಗಳನ್ನು ನೀಡಿದ್ದೇವೆ ಹೊರತೂ ಇದು ಬಂಡಾಯವಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಬದಲಾವಣೆ ಅಗತ್ಯ ಎಂದಿದ್ದರು. ಈಗ ಕಾಂಗ್ರೆಸ್ ಸೋಲಿನ ಬಗ್ಗೆ ಪರಾಮರ್ಶನೆ ನಡೆದಿದ್ದು, ಜಿಲ್ಲೆ, ಬ್ಲಾಕ್ ಹಾಗೂ ರಾಜ್ಯಮ ಟ್ಟದಲ್ಲಿ ಬದಲಾವಣೆಗೆ ಸೂಚಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಮುಂದೆ ಕಾಣಿಸಿಕೊಳ್ಳದೇ ನಿರಂತರವಾಗಿ ಜನ ಸಂಪರ್ಕ ಇಟ್ಟುಕೊಂಡು ವಿಶ್ವಾಸ ಗಳಿಸುವುದು ಮುಖ್ಯ ಎಂದಿದ್ದಾರೆ.
ರಾಜ್ಯದೆಲ್ಲೆಡೆ ಪ್ರವಾಸ ಅಗತ್ಯ
ಜನಪ್ರತಿನಿಧಿಗಳಾದವರು ಕಚೇರಿಗೆ ಅಂಟಿಕೊಂಡಿದ್ದರೆ ಯಾವ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ರಾಜ್ಯದ ಮೂಲೆ ಮೂಲೆಗೂ ಸಂಚರಿಸಬೇಕು, ಜನರ ಕಷ್ಟ ಸುಖ ಆಲಿಸಬೇಕು. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ತಂಗುವುದರಿಂದ ಏನು ಪ್ರಯೋಜನವಿಲ್ಲ. ನಿಮ್ಮ ವಿಧಾನಸಭಾ ಕ್ಷೇತ್ರದ ಉದ್ದಗಲದ ಅರಿವು ಇರಬೇಕು. ದೆಹಲಿಗೆ ಹೋಗುವುದನ್ನು ಬಿಟ್ಟು ಕ್ಷೇತ್ರದ ಜನತೆಯ ಮನೆಗಳತ್ತ ಸಾಗಿರಿ, ದುಡ್ಡು ಖರ್ಚು ಮಾಡಿ ಎಲ್ಲೆಲ್ಲೋ ಪ್ರವಾಸ ಮಾಡುವುದರ ಬದಲು ನಿಮ್ಮ ಕ್ಷೇತ್ರದಲ್ಲಿ ಹೆಚ್ಚು ಕಾಲ ಉಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
Recommended Video
ಕಪಿಲ್ ಸಿಬಾಲ್ ಸೇರಿದಂತೆ ಹಲವು ನಾಯಕರ ದನಿ
ಕಾಂಗ್ರೆಸ್ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಿದೆ ಎಂದು ಕಪಿಲ್ ಸಿಬಾಲ್ ಸೇರಿದಂತೆ ಹಿರಿಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಆರ್ಥಿಕ ವ್ಯವಹಾರ, ವಿದೇಶಾಂಗ ವ್ಯವಹಾರ ಹಾಗೂ ರಾಷ್ಟ್ರೀಯ ಭದ್ರತೆ ಕುರಿತಂತೆ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇತ್ತೀಚೆಗೆ ಆಂತರಿಕ ಸಮಿತಿ ನೇಮಿಸಿದ್ದರು ಇದರಲ್ಲಿ ಅಂದು ಪತ್ರ ಬರೆದು ಬದಲಾವಣೆ ಬಯಸಿದ್ದ ಪ್ರಮುಖರನ್ನು ಸೇರಿಸಲಾಗಿದೆ. ಸೋಲಿನಿಂದ ಹೊರಬರಲು ಕಾಂಗ್ರೆಸ್ ಯತ್ನಿಸುತ್ತಿದ್ದು, ಆಜಾದ್ ಅವರ ಸಲಹೆ, ಸೂಚನೆಯಂತೆ ಬದಲಾವಣೆಯಾಗುವುದೇ ಕಾದು ನೋಡಬೇಕಿದೆ. ಹೈದರಾಬಾದ್ ಮುನ್ಸಿಪಲ್ ಚುನಾವಣೆ, ತಮಿಳುನಾಡು, ಪಶ್ಚಿಮ ಬಂಗಾಳ ಚುನಾವಣೆಗಳು ಕಾಂಗ್ರೆಸ್ ಮುಂದಿವೆ.