ಮೇವು ಹಗರಣ; ಜಾರ್ಖಂಡ್ ಹೈಕೋರ್ಟ್ನಿಂದ ಲಾಲೂ ಪ್ರಸಾದ್ ಜಾಮೀನು ತಿರಸ್ಕಾರ
ಪಾಟ್ನಾ, ಫೆಬ್ರವರಿ 19: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿದ್ದು, ಎರಡು ತಿಂಗಳ ನಂತರ ಹೊಸ ಅರ್ಜಿ ಸಲ್ಲಿಸಲು ಸೂಚಿಸಿದೆ.
ಲಾಲು ಪ್ರಸಾದ್ ಅವರು ಮುಖ್ಯಮಂತ್ರಿಯಾಗಿದ್ದ 1992-93ರ ಅವಧಿಯಲ್ಲಿ ಚೈಬಾಸಾ ಖಜಾನೆಯಲ್ಲಿ 33.67 ಕೋಟಿ ಅವ್ಯವಹಾರ ಪ್ರಕರಣದಲ್ಲಿ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಸೇರಿ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಬಹುಕೋಟಿ ಮೇವು ಹಗರಣದಲ್ಲಿ ನಾಲ್ಕು ಪ್ರಕರಣಗಳನ್ನು ಎದುರಿಸುತ್ತಿರುವ ಲಾಲೂ ಪ್ರಸಾದ್ ಅವರಿಗೆ ಮೂರು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿದೆ. ಈ ಮುನ್ನ ಲಾಲೂ ಪ್ರಸಾದ್ ಆರೋಗ್ಯ ಕಾರಣದಿಂದ ಜಾರ್ಖಂಡ್ನ ರಾಂಚಿಯಲ್ಲಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಹದಗೆಟ್ಟ ಕಾರಣ ಈಚೆಗೆ ಅವರನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿತ್ತು.
ಡುಮ್ಕಾ ಖಜಾನೆ ಪ್ರಕರಣ: ಡಿ.11ಕ್ಕೆ ಲಾಲೂ ಜಾಮೀನು ಅರ್ಜಿ ವಿಚಾರಣೆ
ತಮ್ಮ ಶಿಕ್ಷೆಯ ಅವಧಿಯನ್ನು ಅರ್ಧ ಪೂರೈಸಿರುವುದಾಗಿ ಕೋರಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಜನವರಿ 29ಕ್ಕೆ ಅರ್ಜಿ ಕೈಗೆತ್ತಿಕೊಂಡಿದ್ದ ಜಾರ್ಖಂಡ್ ಹೈಕೋರ್ಟ್ ಫೆ.19ಕ್ಕೆ ವಿಚಾರಣೆ ಮುಂದೂಡಿದ್ದು, ಶುಕ್ರವಾರ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ತಮಗೆ ಪೂರಕ ಆದೇಶ ದೊರೆತು ಜೈಲಿನಿಂದ ಬಿಡುಗಡೆಯಾಗುವುದಾಗಿ ಲಾಲೂ ಪ್ರಸಾದ್ ನಿರೀಕ್ಷಿಸಿದ್ದರು. ಆದರೆ ಜಾಮೀನು ತಿರಸ್ಕೃತಗೊಂಡಿದೆ.