just in: 20 ವರ್ಷದಿಂದ ಪರಾರಿಯಾದ್ದ ಆರೋಪಿ ಮಾಜಿ ಶಾಸಕನ ಬಂಧನ
ಪಾಟ್ನಾ, ಆಗಸ್ಟ್ 19: ಎರಡು ದಶಕಗಳಿಂದ ಪರಾರಿಯಾಗಿದ್ದ ಬಿಹಾರದ ಮಾಜಿ ಶಾಸಕ ರಂಜನ್ ತಿವಾರಿ ಅವರನ್ನು ಭಾರತ-ನೇಪಾಳ ಗಡಿ ಸಮೀಪದ ರಕ್ಸಾಲ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರಿಗೆ ಬೇಕಾಗಿರುವ ಆರೋಪಿಯನ್ನು ಹಿಡಿದು ಕೊಟ್ಟವರಿಗೆ 25,000 ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. ಯುಪಿ ಮತ್ತು ಬಿಹಾರ ಪೊಲೀಸ್ ಪಡೆಗಳ ಜಂಟಿ ತಂಡವು ಅವರನ್ನು ಬಂಧಿಸಿದೆ.
ಬಂಧನ ವಾರೆಂಟ್ ಉಲ್ಲಂಘಿಸಿ ಬಿಹಾರ ಸಚಿವನಾದ ಕಾರ್ತಿಕೇಯ ಸಿಂಗ್ಗೆ ಕಾನೂನು ಖಾತೆ
ಪಶ್ಚಿಮ ಚಂಪಾರಣ್ ಜಿಲ್ಲೆಯ ಗೋವಿಂದಗಂಜ್ ಕ್ಷೇತ್ರದ ಮಾಜಿ ಶಾಸಕ ರಂಜನ್ ತಿವಾರಿ ಮೇಲೆ ಗೋರಖ್ಪುರದಲ್ಲಿ ಜಾಮೀನು ರಹಿತ ವಾರಂಟ್ ಬಾಕಿ ಇದೆ ಎಂದು ಎಸ್ಪಿ ತಿಳಿಸಿದ್ದಾರೆ.
"ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಗೋವಿಂದಗಂಜ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ 1998 ರಲ್ಲಿ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅವರು ಎರಡು ದಶಕಗಳಿಂದ ಪರಾರಿಯಾಗಿದ್ದರು" ಎಂದು ಪೂರ್ವ ಚಂಪಾರಣ್ನ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಆಶಿಶ್ ತಿಳಿಸಿದ್ದಾರೆ.
"ಪ್ರಾಥಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಯುಪಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಿಹಾರದಲ್ಲಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಹ ನಾವು ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಆರೋಪಿ ರಂಜನ್ ತಿವಾರಿ ಅವರು ಪಶುಪತಿನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಲು ನೇಪಾಳದ ರಾಜಧಾನಿ ಕಠ್ಮಂಡುವಿಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹಂಚಿಕೊಂಡ ವಿವರಗಳ ಪ್ರಕಾರ, ತಿವಾರಿ ಗೋರಖ್ಪುರದ ಹಳ್ಳಿಯವರು, ಆದರೆ ಪಶ್ಚಿಮ ಚಂಪಾರಣ್ನ ಬಗಾಹಾದಲ್ಲಿ ನೆಲೆಸಿದ್ದರು. ಅವರು ಸೆಪ್ಟೆಂಬರ್ 22, 1998 ರಂದು ಪೊಲೀಸ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಯುಪಿಯ ಭಯಾನಕ ದರೋಡೆಕೋರ ಪ್ರಕಾಶ್ ಶುಕ್ಲಾ ಅವರ ನಿಕಟ ಸಹಚರರಾಗಿದ್ದರು.
ಅಲ್ಲಿನ ನ್ಯಾಯಾಲಯವು ಡಿಸೆಂಬರ್ 14, 2005 ರಂದು ತಿವಾರಿ ವಿರುದ್ಧ ಜಾಮೀನು ರಹಿತ ವಾರಂಟ್ (NBW) ಹೊರಡಿಸಿತು. ಇಲ್ಲಿಯವರೆಗೆ, ತಿವಾರಿ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ. 2000 ರಲ್ಲಿ, ತಿವಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೋವಿಂದಗಂಜ್ನಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಪಡೆದಿದ್ದರು.