ಬಿಹಾರದಲ್ಲಿ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆ
ಪಾಟ್ನಾ, ಜೂನ್ 21: ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಮೃತರಾದ ಮಕ್ಕಳ ಸಂಖ್ಯೆ 165 ಕ್ಕೇರಿದ್ದು, ಮಕ್ಕಳ ಸಾವಿಗೆ ಮೆದುಳಿನ ಉರಿಯೂತವೇ ಕಾರಣ ಎನ್ನಲಾಗಿದೆ.
ಮೆದುಳಿನ ಉರಿಯೂತ ಅಂದರೆ Acute Encephalitis Syndrome ಸಮಸ್ಯೆಯಿಂದ ಮಕ್ಕಳು ಮೃತರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಈಗಾಗಲೇ ಇಲ್ಲಿನ ಕೃಷ್ಣ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ(ಎಸ್ ಕೆ ಎಂಸಿಎಚ್) ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಹೆಚ್ಚಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದಾರೆ.
ಲಿಚಿಯಿಂದಲೂ ಬರುತ್ತೆ ಮೆದುಳು ಜ್ವರ ಎಚ್ಚರ, ಹಣ್ಣೊಳಗೇನಿದೆ ಅಂಥದ್ದು?
ಈಗಾಗಲೇ ಈ ಕಾಯಿಲೆಗೆ ಲಿಚಿ ಹಣ್ಣೂ ಕಾರಣ ಎನ್ನಲಾಗುತ್ತಿದ್ದು, ಬಿಹಾರ ಸರ್ಕಾರವು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಲಿಚಿ ಹಣ್ಣಗಳನ್ನು ಪ್ರಯೋಗಾಲಯಕ್ಕೆ ಕಳಿಸಿ, ಪ್ರಯೋಗಕ್ಕೊಳಪಡಿಸುವಂತೆ ಆದೇಶಿಸಿದೆ. ಈ ಹಣ್ಣಿನ ಸೇವನೆಯಿಂದ ಆರಂಭವಾದ ಕಾಯಿಲೆ ನಂತರ ಒಬ್ಬರಿಂದ ಒಬ್ಬರಿಗೆ ಸೋಂಕಾಗಿ ಹರಡಿರಬಹುದು ಎನ್ನಲಾಗಿದೆ.
ಲಿಚಿ ಹಣ್ಣಿನಲ್ಲಿರುವ ಟಾಕ್ಸಿನ್ ಅಂಶ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತಿದ್ದು, ಆದ್ದರಿಂದಲೇ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂಬ ಅನುಮಾನ ಎದ್ದಿದೆ. ಲಿಚಿ ಹಣ್ಣುಗಳನ್ನು ಪೋಷ್ಠಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳು ತಿಂದರೆ ಅದರಲ್ಲಿರುವ ಟಾಕ್ಸಿನ್ ಅಂಶ ಅವರ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಇದರಿಂದ ಸಾವು ಸಂಭವಿಸುತ್ತದೆ ಎಂಬುದು ವೈದ್ಯರ ಅನುಮಾನ.
ಬಿಹಾರದಲ್ಲಿ 100 ಮಕ್ಕಳ ಸಾವಿಗೆ ಕಾರಣವಾದ ಎಇಎಸ್ ಸೋಂಕು ಎಂದರೇನು?
ಅತಿಯಾದ ಜ್ವರ, ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ, ಕೋಮಾ ಸ್ಥಿತಿಗೆ ತಲುಪುವ ಪರಿಸ್ಥಿತಿ ಉಂಟಾಗುವುದು ಈ ರೋಗದ ಲಕ್ಷಣ. ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಈ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈ ವರ್ಷ ಮತ್ತೆ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ.