ಬಿಹಾರ ಶಿಕ್ಷಣ ಸಚಿವ ಸ್ಥಾನಕ್ಕೆ ಮೇವಾಲಾಲ್ ರಾಜೀನಾಮೆ
ಪಾಟ್ನಾ, ನ. 19: ಬಿಹಾರದಲ್ಲಿ ನಿತೀಶ್ ಸರ್ಕಾರ್ 7.0 ರಚನೆಯಾಗಿ ಒಂದು ವಾರ ಕಳೆಯುವುದರೊಳಗಾಗಿ ಮೊದಲ ವಿಕೆಟ್ ಪತನಗೊಂಡಿದೆ. ಶಿಕ್ಷಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮೇವಾಲಾಲ್ ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಚೌಧರಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ತಮ್ಮದೇ ಸಂಪುಟ ಸಚಿವರ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂದು ರಾಷ್ಟ್ರೀಯ ಜನತಾ ದಳವು ಪ್ರಶ್ನೆ ಮಾಡಿತ್ತು.
ಬಿಹಾರದಲ್ಲಿ ಸಚಿವರಾದ 3 ದಿನದಲ್ಲೇ ಮೇವಾಲಾಲ್ ಕುರ್ಚಿಗೆ ಕುತ್ತು!
ಬಿಹಾರದ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೇವಾಲಾಲ್ ಚೌಧರಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪವಿದೆ. 2017ರಲ್ಲಿ ಭಗಲ್ ಪುರ್ ಸಬುರ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಗಿ ಕಾರ್ಯ ನಿರ್ವಹಿಸುತತ್ತಿದ್ದ ಸಂದರ್ಭದಲ್ಲಿ ಭಾರಿ ಹಗರಣಗಳನ್ನು ಮಾಡಿರುವ ಆರೋಪವಿದೆ. ವಿಶ್ವವಿದ್ಯಾಲಯದ 161 ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕ ಮತ್ತು ಕಿರಿಯ ವಿಜ್ಞಾನಿಗಳಿಂದ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಮೇವಾಲಾಲ್ ಚೌಧರಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು. ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕಾತಿಯಷ್ಟೇ ಅಲ್ಲದೇ ಸಬೌರ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲೂ ಅಕ್ರಮ ಎಸಗಿರುವ ಬಗ್ಗೆ ಮೇವಾಲಾಲ್ ಚೌಧರಿ ವಿರುದ್ಧ ಆರೋಪಿಸಲಾಗಿದೆ.
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು 7ನೇ ಬಾರಿಗೆ ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸತತ ನಾಲ್ಕನೇ ಅವಧಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ನಿತೀಶ್ ಅವರ ನಂತರ ತಾರ್ ಕಿಶೋರ್ ಪ್ರಸಾದ್, ರೇಣು ದೇವಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಇಬ್ಬರು ಕೂಡಾ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸದ್ಯಕ್ಕೆ ಮಾಜಿ ಸಿಎಂ ಜಿತಿನ್ ರಾಂ ಮಾಂಝಿ ಅವರು ಹಂಗಾಮಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನಿತೀಶ್ ಕುಮಾರ್ ಅವರು ಗೃಹ ಖಾತೆ ತಮ್ಮ ಬಳಿ ಇಟ್ಟುಕೊಂಡಿದ್ದರೆ, ಉಪ ಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್ ಅವರಿಗೆ ವಿತ್ತ ಖಾತೆ ಲಭಿಸಿದೆ.
ಸಚಿವ ಸಂಪುಟ: ಗೃಹ ಖಾತೆ ನಿತೀಶ್ಗೆ, ತಾರ್ ಕಿಶೋರರಿಗೆ ವಿತ್ತ
ಬಿಹಾರದ 243 ವಿಧಾನಸಭಾ ಸದಸ್ಯ ಬಲವಿದ್ದು, ಯಾವದೇ ಪಕ್ಷಕ್ಕೆ ಸರ್ಕಾರ ರಚಿಸಲು ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳು ಬೇಕು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) 125 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.