ಮಹಾಘಟಬಂಧನ್ ಜೊತೆ ಎಡಪಕ್ಷಗಳ ಚುನಾವಣಾ ಮೈತ್ರಿ!
ಪಾಟ್ನಾ, ಆ. 27: ಕೊರೊನಾವೈರಸ್ ಸೋಂಕು ಹರಡುವ ಭೀತಿ ನಡುವೆ ಕೇಂದ್ರ ಚುನಾವಣಾ ಆಯೋಗವು ನಿಗದಿಯಂತೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದಾಗಿ ಹೇಳಿದೆ. ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 29ಕ್ಕೆ ಅಂತ್ಯಗೊಳ್ಳಲಿದೆ. ಈ ನಡುವೆ ಮಹಾಘಟಬಂಧನ್ ಸೀಟು ಹಂಚಿಕೆ ಬಗ್ಗೆ ಚರ್ಚೆ ಆರಂಭಿಸುತ್ತಿದ್ದಂತೆ ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
Recommended Video
ಸಿಪಿಐ, ಸಿಪಿಐ(ಮಾರ್ಕ್ಸ್ ವಾದಿ) ಪಕ್ಷಗಳು ಮಹಾಘಟಬಂಧನ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಒಪ್ಪಿಗೆ ಸೂಚಿಸಿವೆ. ಬಿಜೆಪಿ ನೇತೃತ್ವದ ಎನ್ಡಿಎ ಸೋಲು ಕಾಣುವುದು ನಮ್ಮ ಉದ್ದೇಶ ಎಂದು ಎಡಪಕ್ಷಗಳು ಹೇಳಿವೆ.
ಕೋವಿಡ್ ಕಾಲದಲ್ಲಿ ಎಲೆಕ್ಷನ್: ಪ್ರಚಾರ, ಮತದಾನಕ್ಕೆ ನಿಯಮ ರೂಪಿಸಿದ ಚುನಾವಣಾ ಆಯೋಗ
ಬಿಹಾರದ ಆರ್ ಜೆಡಿ ಮುಖ್ಯಸ್ಥ ಜಗದಾನಂದ್ ಸಿಂಗ್ ಅವರು ಸಿಪಿಐ ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಗಳಾದ ನರೇಶ್ ಪಾಂಡೆ ಹಾಗೂ ಅವಧೇಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಇವರಲ್ಲದೆ 3 ಶಾಸಕರನ್ನು ಹೊಂದಿರುವ ಸಿಪಿಐ ಎಂಎಲ್ (ಮಾರ್ಕ್ಸ್ ವಾದಿ ಲೆನಿನ್) ಪಕ್ಷ ಕೂಡಾ ಮಹಾಘಟಬಂಧನ್ ಪರ ನಿಂತಿದೆ.
ಮಹಾಘಟಬಂಧನ್ ವಿರುದ್ಧ ಎನ್ಡಿಎ
ಮುಂಬರುವ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಸತತ ನಾಲ್ಕನೆಯ ಅವಧಿಯಲ್ಲಿ ಗದ್ದುಗೆಗೆ ಏರಲು ನಿತೀಶ್ ಕುಮಾರ್ ಸಿದ್ಧತೆ ನಡೆಸಿದ್ದಾರೆ. ಜೆಡಿಯು, ಎಲ್ ಜೆಪಿ ಜೊತೆ ಬಿಜೆಪಿ ಮೈತ್ರಿ ಇದೆ. ನಿತೀಶ್ ನಾಗಾಲೋಟಕ್ಕೆ ಕಡಿವಾಣ ಹಾಕಲು ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಮಗ ತೇಜಸ್ವಿ ಯಾದವ್ ತುದಿಗಾಲಲ್ಲಿ ನಿಂತಿದ್ದಾರೆ. ಆರ್ ಜೆಡಿ ಜೊತೆಗೆ ಕಾಂಗ್ರೆಸ್, ಆರ್ ಎಲ್ ಎಸ್ಪಿ, ವಿಐಪಿ, ಸಿಪಿಐ, ಸಿಪಿಐ(ಎಂ), ಸಿಪಿಐ (ಎಂಎಲ್) ಸೇರಿವೆ.
ಬಿಹಾರ ವಿಧಾನಸಭೆಯಲ್ಲಿ ಬಲಾಬಲ
ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿದ್ದು, ಆರ್ ಜೆ ಡಿ 81 ಹಾಗೂ ಕಾಂಗ್ರೆಸ್ 27 ಸ್ಥಾನ ಹೊಂದಿವೆ. ಈಗ 163 + 80 ಸೂತ್ರದಡಿಯಲ್ಲಿ ಸೀಟು ಹಂಚಿಕೆ ಸರಿ ಹೊಂದಿಸಲು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ(ವಿಐಪಿ) ಜೊತೆಗೆ ಸಿಪಿಐ -ಎಂಎಲ್ ಜೊತೆಗೆ ಆರ್ ಜೆಡಿ ಮಾತುಕತೆ ನಡೆಸಿದೆ. ಜೊತೆಗೆ ಬಹುಜನ ಸಮಾಜವಾದಿ ಪಾರ್ಟಿ ಕೂಡಾ ಕೈಜೋಡಿಸಲಿದೆ. ಇನ್ನೊಂದೆಡೆ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ, ಹಿಂದೂಸ್ತಾನಿ ಆವಾಯಂ ಪಾರ್ಟಿ(ಸೆಕ್ಯುಲರ್) ಜೊತೆಗೆ ಸಿಪಿಐ ಜೊತೆ ಕಾಂಗ್ರೆಸ್ ಮಾತುಕತೆ ನಡೆಸಿ 80 ಸ್ಥಾನ ಸರಿ ಹೊಂದಿಸಲಿದೆ.
163 + 80 ಆರ್ ಜೆ ಡಿ-ಕಾಂಗ್ರೆಸ್ ಹೊಸ ಸೂತ್ರದಡಿಯಲ್ಲಿ ಕಣಕ್ಕೆ
ಮಹಾ ಘಟಬಂಧನ್ ಇನ್ನಷ್ಟು ವಿಸ್ತಾರ
ಎಡಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡು ಮಹಾ ಘಟಬಂಧನ್ ಇನ್ನಷ್ಟು ವಿಸ್ತಾರಗೊಂಡಿದೆ. ಸೀಟುಗಳ ಹಂಚಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ. 163 + 80 ಆರ್ ಜೆ ಡಿ-ಕಾಂಗ್ರೆಸ್ ಹೊಸ ಸೂತ್ರದಡಿಯಲ್ಲಿ ಚುನಾವಣೆ ಕಣಕ್ಕಿಳಿಯುವುದು ಇನ್ನೂ ಖಚಿತವಾಗಿಲ್ಲ ಎಂದು ಆರ್ ಜೆ ಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ. ಹೆಚ್ಚು ಸಣ್ಣ ಪುಟ್ಟ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವುದು ಎರಡು ದೊಡ್ಡ ಪಕ್ಷಗಳ ಜವಾಬ್ದಾರಿಯಾಗಿದೆ.
ಎನ್ಡಿಎ ಸೇರಲು ಮುಂದಾದ ಎಚ್ಎಎಂ-ಎಸ್
ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) (ಎಚ್ಎಎಂ-ಎಸ್) ತಾನು ಮಹಾಮೈತ್ರಿಕೂಟದಿಂದ ಹೊರನಡೆಯುತ್ತಿರುವುದಾಗಿ ಘೋಷಣೆ ಮಾಡಿದೆ. ಬಿಹಾರದಲ್ಲಿನ ಆಡಳಿತಾರೂಢ ಎನ್ಡಿಎ ಮೈತ್ರಿಕೂಟವನ್ನು ಸೇರಲು ಸಿದ್ಧತೆ ನಡೆಸಿದ್ದು, ಕೆಲವು ದಿನಗಳಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ಚುನಾವಣಾ ಸಿದ್ಧತೆ ಹೇಗಿದೆ?
ಮತದಾನದ ಹಿಂದಿನ ದಿನ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಬೇಕು. ಮತಗಟ್ಟೆ ಪ್ರವೇಶ ಭಾಗದಲ್ಲಿ ಚುನಾವಣಾ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತರು ಪ್ರತಿ ಮತದಾರರ ಥರ್ಮಲ್ ಪರೀಕ್ಷೆ ನಡೆಸಬೇಕು. ಮತದಾರರ ಗುರುತು ಪತ್ತೆ ಮಾಡುವ ಪ್ರಕ್ರಿಯೆ ಸಂದರ್ಭದಲ್ಲಿ ಮತದಾರರು ತಮ್ಮ ಮುಖದ ಮೇಲಿನ ಮಾಸ್ಕ್ ಸರಿಸಬೇಕಾಗುತ್ತದೆ. ಕ್ವಾರೆಂಟೈನ್ನಲ್ಲಿರುವ ಎಲ್ಲ ಕೋವಿಡ್-19 ರೋಗಿಗಳು ತಮಗೆ ಸಂಬಂಧಿತ ಮತಗಟ್ಟೆಗಳಲ್ಲಿ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಠಿಣ ಕ್ರಮಗಳೊಂದಿಗೆ ಉಸ್ತುವಾರಿ ನೋಡಿಕೊಳ್ಳಬೇಕು ಮುಂತಾದ ನಿಯಮಗಳನ್ನು ಆಯೋಗ ರೂಪಿಸಿದೆ.