ಲಾಲು ಪ್ರಸಾದ್ಗೆ ಸಂಬಂಧಿಸಿದ ಪಾಟ್ನಾದ 17 ಸ್ಥಳಗಳಲ್ಲಿ ಸಿಬಿಐ ದಾಳಿ
ಪಾಟ್ನಾ, ಮೇ 20: ಮೇವು ಹಗರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿದ್ದ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಮೇಲೆ ಹೊಸ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ. ಜೊತೆಗೆ ಲಾಲು ಪ್ರಸಾದ್ ಯಾದವ್ಗೆ ಸಂಬಂಧಿಸಿದ 17 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ಮಾಡಿದೆ. ಸಿಬಿಐ ಅಧಿಕಾರಿಗಳು ಬೆಳಗ್ಗೆ 7 ಗಂಟೆಗೆ ಪಾಟ್ನಾದ ಅವರ ನಿವಾಸಕ್ಕೆ ಆಗಮಿಸಿ ಶೋಧ ನಡೆಸಿದ್ದಾರೆ.
ಕೇಂದ್ರೀಯ ಸಂಸ್ಥೆ ಲಾಲು ವಿರುದ್ಧ ಹೊಸ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿದ್ದು, ದೆಹಲಿ ಮತ್ತು ಪಾಟ್ನಾದಲ್ಲಿ ದಾಳಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಲಾಲು ಸಂಬಂಧಿಕರ ಮೇಲೂ ಸಿಬಿಐ ದಾಳಿ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. 1990 ರಿಂದ 1995 ಮತ್ತು 1995 ರಿಂದ 1997 ರವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಲಾಲು, ಪಾಟ್ನಾದಲ್ಲಿರುವ ತಮ್ಮ ಪತ್ನಿ ಮತ್ತು ಇತರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.
ಲಾಲು ಅವರ ಕಿರಿಯ ಪುತ್ರ ಮತ್ತು ಪಕ್ಷದ ನಾಯಕ ತೇಜಸ್ವಿ ಯಾದವ್ ಪ್ರಸ್ತುತ ಲಂಡನ್ನಲ್ಲಿದ್ದಾರೆ. ಲಾಲು ಪತ್ನಿ ಹಾಗೂ ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ ಪಾಟ್ನಾ ನಿವಾಸದಲ್ಲಿ ಒಂಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇ 5 ರಂದು ದೆಹಲಿಯ ಏಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದ ಲಾಲು ಸದ್ಯ ದೆಹಲಿಯಲ್ಲಿದ್ದಾರೆ. ಅವರು ರಾಜ್ಯಸಭಾ ಸಂಸದರಾಗಿರುವ ತಮ್ಮ ಪುತ್ರಿ ಮಿಸಾ ಭಾರತಿ ಅವರ ನಿವಾಸದಲ್ಲಿ ತಂಗಿದ್ದಾರೆ. ಯುಪಿಎ-1 ಸರಕಾರದಲ್ಲಿ ಲಾಲು ಅವರು ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ನಡೆದಿರುವ ಹೊಸ ಪ್ರಕರಣ ಸಂಬಂಧವಿದೆ ಎಂದು ಮೂಲಗಳು ತಿಳಿಸಿವೆ.
ಮೇವು ಹಗರಣ
ಬಹುಕೋಟಿ ಮೇವು ಹಗರಣದ ತಪ್ಪಿತಸ್ಥ ಎಂದು ಸಾಬೀತಾಗಿರುವ ಲಾಲೂ ಪ್ರಸಾದ್ ಯಾದವ್ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ಈಗಾಗಲೇ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲ, 60 ಲಕ್ಷ ರೂ. ದಂಡ ಕೂಡಾ ವಿಧಿಸಿದೆ. ಫೆಬ್ರುವರಿ 21ರಂದು ತೀರ್ಪು ಹೊರಬಿದ್ದ ಬಳಿಕ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಕಳೆದ ಎರಡು ತಿಂಗಳ ಹಿಂದೆ ಗಂಭೀರವಾಗಿತ್ತು.
Recommended Video
ಮೇವು ಖರೀದಿಗಾಗಿ ಇರಿಸಿದ್ದ 139 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡ ಒಂದು ಪ್ರಕರಣದಲ್ಲಿ ಫೆಬ್ರುವರಿ 21ರಂದು ತೀರ್ಪು ಪ್ರಕಟವಾಗಿತ್ತು. ದೊರಾಂಡಾ ಖಜಾನೆಯಿಂದ ಅನಧಿಕೃತವಾಗಿ 139 ಕೋಟಿ ರೂ. ಹಣವನ್ನು ತೆಗೆದ ಪ್ರಕರಣ ಇದಾಗಿದೆ.