ಬ್ಯಾಲಟ್ ಪೇಪರ್: ಇದ್ದದ್ದನ್ನು ಇದ್ದ ಹಾಗೇ ಒಪ್ಪಿಕೊಂಡ ಕಾಂಗ್ರೆಸ್ ಎಂಪಿ
ಪಾಟ್ನಾ, ಫೆ 21: ಇವಿಎಂ (ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಯಾಕೆ ಬೇಡ, ಬ್ಯಾಲಟ್ ಪೇಪರ್ ನಿಂದಲೇ ಯಾಕೆ ಚುನಾವಣೆ ನಡೆಯಬೇಕು ಎನ್ನುವುದಕ್ಕೆ ಉದಾಹರಣೆ ಕೊಡುವ ರೀತಿಯಲ್ಲಿ, ಕಾಂಗ್ರೆಸ್ ಸಂಸದರೊಬ್ಬರು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಬಿಹಾರದ ದರ್ಭಾಂಗ್ ಕ್ಷೇತ್ರದ ಸಂಸದ ಮತ್ತು ಕೆಲವೇ ದಿನಗಳ ಹಿಂದೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಕೀರ್ತಿ ಆಜಾದ್, ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ನಡೆಯುವಾಗ ಬೂತ್ ಗೆ ನುಗ್ಗುತ್ತಿದ್ದರು ಎಂದು ಹೇಳಿದ್ದಾರೆ.
'ವಿದ್ಯುನ್ಮಾನ ಮತಯಂತ್ರ ಬಳಕೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಲು ತೀರ್ಮಾನ'
ಇವಿಎಂ ಪದ್ದತಿಯನ್ನು ಪರಿಚಯಿಸುವ ಮೊದಲು ಕಾಂಗ್ರೆಸ್ ಕಾರ್ಯಕರ್ತರು, ನಾನು ಸ್ಪರ್ಧಿಸುವಾಗ ಮತ್ತು ನನ್ನ ತಂದೆ ಚುನಾವಣೆಯಲ್ಲಿ ನಿಂತಾಗಲೂ ಬೂತ್ ಗೆ ನುಗ್ಗುತ್ತಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಕೀರ್ತಿ ಆಜಾದ್ ಹೇಳಿದ್ದಾರೆ.
1999ರಲ್ಲಿ ಇವಿಎಂ ಮೂಲಕ ಚುನಾವಣೆ ನಡೆಯುವ ಪದ್ದತಿ ಆರಂಭವಾಗಿರಲಿಲ್ಲ. ನನ್ನ ತಂದೆ ನಾಗೇಂದ್ರ ಝಾ ಸ್ಪರ್ಧಿಸಿದ್ದರು, ಆಗಲೂ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿಯ ಕೆಲಸವನ್ನು ಮಾಡಿದ್ದರು ಎಂದು ಕೀರ್ತಿ ಆಜಾದ್ ಹೇಳಿದ್ದಾರೆ.
ತಮ್ಮ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಕೀರ್ತಿ ಆಜಾದ್, ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಸ್ವಾಗತಿಸಲು ಬಂದಿದ್ದರು. ನನ್ನ ರಾಜಕೀಯ ಅನುಭವದ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದಾಗ, ಈ ರೀತಿಯ ಹೇಳಿಕೆಯನ್ನು ನೀಡಿದೆ ಎಂದು ಆಜಾದ್ ಹೇಳಿದ್ದಾರೆ.
21 ವಿರೋಧ ಪಕ್ಷಗಳಿಂದ ಚುನಾವಣಾ ಆಯುಕ್ತರ ಭೇಟಿ, ಇವಿಎಂ ಬಗ್ಗೆ ಮಹತ್ವದ ಸಲಹೆ
ಕೀರ್ತಿ ಆಜಾದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಅವರು ಎಂದಿಗೂ ಬೂತ್ ನಲ್ಲಿ ದಾಂಧಲೆ ನಡೆಸಿ ಗೆದ್ದವರಲ್ಲ. ಅವರು ಚುನಾವಣೆ ಗೆದ್ದಿದ್ದು ಬಿಜೆಪಿ ಹೆಸರಿನಿಂದ, ಇಲ್ಲದಿದ್ದರೆ ಅವರಿಗೆ ಠೇವಣಿ ಎಲ್ಲಿ ಸಿಗುತ್ತಿತ್ತು ಎಂದು ಲೇವಡಿ ಮಾಡಿದೆ.