ನಮ್ಮನ್ನು ಪಾಕ್ ಏಜೆಂಟ್ ರಂತೆ ಕಾಣುತ್ತಿದ್ದಾರೆಂದು ಕಾಂಗ್ರೆಸ್ ತೊರೆದ ಹಿರಿಯ ನಾಯಕ
ಪಾಟ್ನಾ (ಬಿಹಾರ), ಮಾರ್ಚ್ 10: ಪಾಕಿಸ್ತಾನದ ಬಾಲಕೋಟ್ ನಲ್ಲಿ ಜೈಶ್-ಇ-ಮೊಹ್ಮದ್ ಉಗ್ರಗಾಮಿ ಸಂಘಟನೆ ನೆಲೆ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ವಾಯು ದಾಳಿಗೆ ಸಾಕ್ಷ್ಯ ಕೇಳುತ್ತಿರುವ ತಮ್ಮ ಪಕ್ಷದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಬಿಹಾರದಲ್ಲಿನ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಕ್ತಾರ ವಿನೋದ್ ಶರ್ಮಾ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದು, ಬಾಲಕೋಟ್ ನಲ್ಲಿ ನಡೆದ ವಾಯು ದಾಳಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಪ್ರಶ್ನೆಗಳನ್ನು ಕೇಳುವ ಮೂಲಕ ಪಕ್ಷದ ತಳ ಮಟ್ಟದ ಕಾರ್ಯಕರ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದಿದ್ದಾರೆ.
ಏರ್ ಸ್ಟ್ರೈಕ್ ನಲ್ಲಿ ನೀವು ಬೀಳಿಸಿದ್ದು ಮರವನ್ನೋ, ಉಗ್ರರನ್ನೋ? ಸಿಧು ಪ್ರಶ್ನೆ
ಕಳೆದ ಒಂದು ತಿಂಗಳಲ್ಲಿ ಸಾಕಷ್ಟು ಬಾರಿ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ. ಬಿಹಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಇರುವ ಸೂಕ್ಷ್ಮ ಅಭಿಪ್ರಾಯ ತಿಳಿಸಲು ಯತ್ನಿಸಿದ್ದು, ನನ್ನ ಮನವಿಗೆ ಸ್ಪಂದನೆ ದೊರೆತಿಲ್ಲ ಎಂದು ಶರ್ಮಾ ಹೇಳಿದ್ದಾರೆ.
ಪದೇ ಪದೇ ಬಾಲಕೋಟ್ ವಾಯು ದಾಳಿ ಬಗ್ಗೆ ಸಾಕ್ಷಿ ಕೇಳುವುದು ಅವಮಾನಕರ ಹಾಗೂ ಬಾಲಿಶ ಎಂದಿರುವ ಅವರು, ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ಗಾಗಿ ಸೇವೆ ಸಲ್ಲಿಸಿ, ಭಾರವಾದ ಹೃದಯದೊಂದಿಗೆ ಪಕ್ಷ ತೊರೆಯುತ್ತಿದ್ದೇನೆ. ಸೇನೆಯ ನೈತಿಕತೆಯನ್ನು ಮುರಿಯುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಭಾವನೆಗಳಿಗೆ ಧಕ್ಕೆ ಮಾಡಿದೆ. ಭಯೋತ್ಪಾದಕರಿಗೆ ಸ್ಫೂರ್ತಿ ತುಂಬಿದೆ ಎಂದು ಹೇಳಿದ್ದಾರೆ.
ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹಾಕಿಕೊಟ್ಟಿದ್ದ ದಾರಿಯಿಂದ ಪಕ್ಷ ದೂರ ಸರಿದಿದೆ. ನಮ್ಮನ್ನು (ಕಾಂಗ್ರೆಸ್ ಕಾರ್ಯಕರ್ತರು) ಪಾಕಿಸ್ತಾನಿ ಏಜೆಂಟರಂತೆ ನೋಡಲಾಗುತ್ತಿದೆ. ಕಾಂಗ್ರೆಸ್ಸಿಗ ಅಂತ ಕರೆಸಿಕೊಳ್ಳಲು ನಾಚಿಕೆ ಎನಿಸುತ್ತಿದೆ. ಪಕ್ಷಕ್ಕಿಂತ ದೇಶ ದೊಡ್ಡದು. ಆದ್ದರಿಂದ ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.
ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ?
ವಾಯು ದಾಳಿ ವಿಚಾರದಲ್ಲಿ ಕಾಂಗ್ರೆಸ್ ಹೈ ಕಮಾಂಡ್ ನಿಲುವಿಗೆ ಹಲವರು ನಿರಾಶೆಗೊಂಡಿದ್ದಾರೆ. ನನ್ನ ರೀತಿಯಲ್ಲೇ ಇನ್ನೂ ಹಲವರು ಪಕ್ಷ ತೊರೆಯಲಿದ್ದಾರೆ ಎಂದಿರುವ ಶರ್ಮಾ, ಚಿಲ್ಲರೆ ರಾಜಕಾರಣವನ್ನು ಮಾಡುವುದು ಬಿಟ್ಟು, ದೇಶವನ್ನು ಮುನ್ನಡೆಸುವ ಪಕ್ಷಕ್ಕೆ ಸೇರ್ಪಡೆ ಆಗುವುದಾಗಿ ಹೇಳಿದ್ದಾರೆ.