ಕಾಂಡೋಮ್ ಕೂಡ ಬೇಕೆ ಎಂದು ವಿದ್ಯಾರ್ಥಿನಿಯರ ಅವಹೇಳನ; ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಕ್ರಮ
ಪಾಟ್ನಾ, ಸೆ.29: ಇತ್ತೀಚೆಗಷ್ಟೇ ಶಾಲಾ ವಿದ್ಯಾರ್ಥಿನಿಯರೊಂದಿಗಿನ ಸಂವಾದದ ವೇಳೆ ಸಂವೇದನಾರಹಿತರಾಗಿ ನಡೆದುಕೊಂಡ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯಾಗಿದ್ದು, ಅವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯೋಗದ ಮುಖ್ಯಸ್ಥರಾಗಿದ್ದಾರೆ.
ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಹಲವು ಪಕ್ಷಗಳು ಬಿಜೆಪಿ ತೊರೆದಿವೆ; ತೇಜಸ್ವಿ ಯಾದವ್
UNICEF ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ, ಉಚಿತ ಸೈಕಲ್ ಮತ್ತು ಶಾಲಾ ಸಮವಸ್ತ್ರಗಳನ್ನು ವಿತರಿಸುವ ಸರ್ಕಾರವು ಉಚಿತ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ನೀಡುವ ಬಗ್ಗೆಯೂ ಯೋಚಿಸಬೇಕು ಎಂದು ಶಾಲಾ ವಿದ್ಯಾರ್ಥಿನಿಯರು ವಿನಂತಿಸಿದ್ದರು. ಆದರೆ, ಇದಕ್ಕೆ ಮಹಿಳಾ ಅಧಿಕಾರಿ ಬಾಲಕಿಯರಿಗೆ ಛೀಮಾರಿ ಹಾಕಿದ್ದರು.
"ಇಂತಹ ಉಚಿತಗಳಿಗೆ ಮಿತಿಯಿಲ್ಲ. ಸರ್ಕಾರ ಈಗಾಗಲೇ ಸಾಕಷ್ಟು ನೀಡುತ್ತಿದೆ. ಇಂದು ನಿಮಗೆ ಉಚಿತವಾಗಿ ನ್ಯಾಪ್ಕಿನ್ ಪ್ಯಾಕೆಟ್ ಬೇಕು, ನಾಳೆ ನಿಮಗೆ ಜೀನ್ಸ್ ಮತ್ತು ಶೂಗಳು ಬೇಕಾಗಬಹುದು. ಆದಾದ ನಂತರ, ಕುಟುಂಬ ಯೋಜನೆಗೆ ವೇದಿಕೆ ಬಂದಾಗ, ನೀವು ಉಚಿತವಾಗಿ ಕಾಂಡೋಮ್ಗಳು ಬೇಕು ಎಂದು ಬೇಡಿಕೆ ಸಲ್ಲಿಸಬಹುದು" ಭಮ್ರಾ ಹೇಳಿದ್ದರು.
ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸೆಪ್ಟೆಂಬರ್ 27 ರಂದು ನಡೆದ ಕಾರ್ಯಕ್ರಮದ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಉಂಟಾದ ವಿವಾದದ ಬಗ್ಗೆ ವಿಷಾದ ವ್ಯಕ್ತಪಡಿಸಿ ಅಧಿಕಾರಿ ಸಹಿ ಮಾಡಿದ ಹೇಳಿಕೆಯನ್ನು ನೀಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು (ಎನ್ಸಿಡಬ್ಲ್ಯು) ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ವಿರುದ್ಧ ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ನಿತೀಶ್ ಕುಮಾರ್, "ಘಟನೆ ಬಗ್ಗೆ ವಿಚಾರಣೆ ನಡೆಸಲು ಆದೇಶ ನೀಡಲಾಗಿದೆ. ರಾಜ್ಯದ ಮಹಿಳೆಯರಿಗೆ ಎಲ್ಲ ನೆರವು ನೀಡುತ್ತಿದ್ದು, ಐಎಎಸ್ ಅಧಿಕಾರಿಯ ವರ್ತನೆ ಆ ಮನೋಭಾವಕ್ಕೆ ವಿರುದ್ಧವಾಗಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಐಎಎಸ್ ಅಧಿಕಾರಿಯ ಹೇಳಿಕೆಗಳಿಗೆ ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಭಮ್ರಾ ತನ್ನ ಹೇಳಿಕೆಯಲ್ಲಿ, ವಿಷಾದ ವ್ಯಕ್ತಪಡಿಸಿದ್ದು, "ಇದು ಯಾರನ್ನು ಬೈಯಲು ಉದ್ದೇಶಿಸಿಲ್ಲ, ಆದರೆ ಹುಡುಗಿಯರು ಸ್ವಾವಲಂಬಿಯಾಗಲು ಪ್ರೋತ್ಸಾಹಿಸಲು ಹೀಗೆ ಹೇಳಿದೆ" ಎಂದು ಹೇಳಿದ್ದಾರೆ.
"ಪಿತೃಪ್ರಧಾನ ಸಮಾಜದಲ್ಲಿ, ಹೆಣ್ಣುಮಕ್ಕಳು ತಮ್ಮ ಅಗತ್ಯಗಳನ್ನು ಪೂರೈಸಲು ಇತರರನ್ನು ಅವಲಂಬಿಸುವುದನ್ನು ಅವರ ಮನೆಗಳಲ್ಲಿ ಕಲಿಸುತ್ತಾರೆ. ಅವರು ಬೆಳೆಸುವ ಸಂದರ್ಭದಲ್ಲಿ ತಾರತಮ್ಯಕ್ಕೆ ಒಳಗಾಗುತ್ತಾರೆ. ಅವರು ಹೊರಗೆ ಸುರಕ್ಷಿತವಾಗಿಲ್ಲ ಎಂದು ಪದೇ ಪದೇ ಹೇಳಲಾಗುತ್ತದೆ" ಎಂದಿದ್ದಾರೆ.
2016 ರಿಂದ ಸ್ಯಾನಿಟರಿ ಪ್ಯಾಡ್ ನೀಡುವ ಯೋಜನೆ ಜಾರಿಯಲ್ಲಿದೆ, ಮುಟ್ಟಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪ್ರತಿ ವಿದ್ಯಾರ್ಥಿಗೆ ₹ 300 ನೀಡಲಾಗುತ್ತದೆ ಮತ್ತು ಪ್ರೌಢ ಮತ್ತು ಪ್ರೌಢಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರಗಳನ್ನು ಸಜ್ಜುಗೊಳಿಸುವ ಕ್ರಮವು ನಡೆಯುತ್ತಿದೆ ಎಂಬ ಅಂಶವನ್ನು ಅವರು ತಿಳಿಸಿದ್ದಾರೆ.