ಆರ್ಜೆಡಿ ಶಾಸಕನಿಗೆ ಬೈದು ಸದನದ ನೀತಿ ಪಾಠ ಮಾಡಿದ ಬಿಹಾರ ಸಿಎಂ
ಪಾಟ್ನಾ, ಮಾರ್ಚ್ 09: ಬಿಹಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದ ಸಂದರ್ಭದಲ್ಲಿ ಆರ್ಜೆಡಿ ಶಾಸಕ ಸುಬೋಧ್ ಕುಮಾರ್ ಅವರ ವರ್ತನೆ ಖಂಡಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಏರು ಧ್ವನಿಯಲ್ಲೇ ಬುದ್ಧಿಹೇಳಿದ್ದಲ್ಲದೆ, ಸದನವನ್ನೊಮ್ಮೆ ದಿಗ್ಭ್ರಾಂತಗೊಳಿಸಿದರು.
ಪ್ರಶ್ನೋತ್ತರ ಸಮಯದಲ್ಲಿ ಫಾರೂಕ್ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಜಯಂತ್ ರಾಜ್ ಉತ್ತರಿಸುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರದಿಂದ ತೃಪ್ತರಾಗದ ಆರ್ಜೆಡಿ ಶಾಸಕ ಮಧ್ಯಪ್ರವೇಶಿಸಿ, ಪೂರಕ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು.
ಬಿಹಾರ ಸಂಪುಟ ವಿಸ್ತರಣೆ, 17 ಸಚಿವರ ಸೇರ್ಪಡೆ: ಬಿಜೆಪಿಗೆ ಸಂದೇಶ ರವಾನಿಸಿದ ನಿತೀಶ್
ಇದೇ ಸಂದರ್ಭದಲ್ಲಿ ಇನ್ನೋರ್ವ ಶಾಸಕ ಸುಭೋದ್ ಕುಮಾರ್ ಕೂಡ ಪೂರಕ ಪ್ರಶ್ನೆಗಳನ್ನು ಕೇಳಲು ಮುಂದಾದರು. ಇದರಿಂದ ಕೋಪಗೊಂಡ ನಿತೀಶ್ ಕುಮಾರ್ ಇನ್ನೋರ್ವ ಶಾಸಕರು ಪ್ರಶ್ನೆಗಳನ್ನು ಕೇಳಿರುವಾಗ ಉತ್ತರ ಪೂರ್ಣಗೊಳ್ಳುವವರೆಗೂ ಹಾಗೂ ಅವರ ಸರದಿ ಮುಗಿಯುವವರೆಗೆ ಕಾಯಬೇಕು ಎಂದು ಬುದ್ಧಿವಾದ ಹೇಳಿದರು. ಆದರೆ ಇದಕ್ಕೆ ಸ್ಪಂದಿಸಿದ ಸುಬೋಧ್ ತಮ್ಮ ವಾದವನ್ನು ಮುಂದುವರೆಸುತ್ತಿದ್ದರು.
ಕೋಪಗೊಂಡ ನಿತೀಶ್ ಕುಮಾರ್
ಆಗ ಇನ್ನಷ್ಟು ಕೋಪಗೊಂಡ ನಿತೀಶ್ ಕುಮಾರ್ ದಯವಿಟ್ಟು ಕುಳಿತುಕೊಳ್ಳಿ, ಮೊದಲು ಸದನದ ನಿಯಮಗಳನ್ನು ಕಲಿತುಕೊಳ್ಳಿ ಎಂದು ಏರುಧ್ವನಿಯಲ್ಲಿ ನಿತೀಶ್ ಕುಮಾರ್ ಗುಡುಗಿದರು.
ನಿಮ್ಮ ಅನುಭವಗಳನ್ನು ಕಿರಿಯ ಸದಸ್ಯರಿಗೂ ಹೇಳಿ
ಇದಲ್ಲದೆ ಹಿರಿಯ ಸದಸ್ಯರತ್ತ ಮುಖ ಮಾಡಿ, ನಿಮ್ಮ ಅನುಭವಗಳನ್ನು ಈ ಕಿರಿಯ ಸದಸ್ಯರಿಗೇಕೆ ತಿಳಿಸುವುದಿಲ್ಲ, ಅವರಿಗೇಕೆ ಮಾಹಿತಿ ನೀಡುವುದಿಲ್ಲ ಎಂದು ಪ್ರಶ್ನಿಸಿದರು.
ನಾನು ಮಾತನಾಡುವಾಗಲೂ ಮಧ್ಯೆ ಬಾಯಿ ಹಾಕುತ್ತೀರಾ?
ಆಗಲೂ ತನ್ನ ಮಾತು ಮುಂದುವರೆಸಿದ ಸುಬೋಧ್ ತಾನು ಕೇವಲ ಪೂರಕ ಪ್ರಶ್ನೆ ಕೇಳುತ್ತಿದ್ದೇನೆ ಎಂದು ಹೇಳಲು ಮುಂದಾದರು, ಆಗ ತಾಳ್ಮೆ ಕಳೆದುಕೊಂಡ ನಿತೀಶ್ ಕುಮಾರ್, ನಾನು ಮಾತನಾಡುವಾಗಲೂ ಮಧ್ಯಪ್ರವೇಶಿಸುತ್ತೀರಾ, ನಾನು ಹೇಳುವುದನ್ನೂ ಕೇಳುವುದಿಲ್ಲವೇ, ನೀವು ಸದನದಲ್ಲಿ ನಡೆದುಕೊಳ್ಳುವ ರೀತಿಯಾ ಇದು ಎಂದು ಕಟುವಾಗಿ ಪ್ರಶ್ನಿಸಿದರು.
ಸದನಕ್ಕೆ ಅದರದ್ದೇ ಆದ ನಿಯಮಗಳಿವೆ
ಇದರಿಂದ ಒಮ್ಮೆ ಇಡೀ ಸದನವೇ ದಿಗ್ಭ್ರಾಂತವಾಗಿ ನಿಶ್ಯಬ್ದ ನಿರ್ಮಾಣವಾಗಿತ್ತು. ಬಳಿಕ ಶಾಂತಚಿತ್ತರಾಗಿ ಸದನ ಹಾಗೂ ಸದಸ್ಯರಿಗೆ ಮಾಹಿತಿ ನೀಡಿದ ನಿತೀಶ್ ಕುಮಾರ್, ಸದನ ಕಲಾಪಕ್ಕೆ ಅದರದ್ದೇ ಆದ ನಿಯಮಗಳಿವೆ.
ಯಾರೂ ಯಾವುದೇ ಪ್ರಶ್ನೆಗಳನ್ನು ಕೇಳಲು ಪ್ರತಿರೋಧವಿಲ್ಲ, ಆದರೆ ಅದು ನಿಯಮಾವಳಿಗಳಿಗೆ ತಕ್ಕವಾಗಿರಬೇಕು, ಒಬ್ಬರು ಪ್ರಶ್ನೆ ಕೇಳುವಾಗ ಮತ್ತೊಬ್ಬರು ಮಧ್ಯೆ ಪ್ರವೇಶಿಸುವುದು ಸೂಕ್ತವಲ್ಲ, ಒಂದೊಮ್ಮೆ ಪ್ರಶ್ನೆಗಳಿದ್ದರೆ, ಅಧ್ಯಕ್ಷರ ಅನುಮತಿ ಪಡೆದು ಕೇಳಬಹುದು, ಇಂತಹ ಸೌಜನ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಬುದ್ಧಿವಾದ ಹೇಳಿದರು.