"ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರಾ ಸಿಎಂ ನಿತೀಶ್ ಕುಮಾರ್?"
ಪಾಟ್ನಾ, ಅಕ್ಟೋಬರ್.18: ಬಿಹಾರ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
"ಭಾರತೀಯ ಜನತಾ ಪಕ್ಷ ಮತ್ತು ನನ್ನ ನಡುವೆ ಅಂತರವನ್ನು ಸೃಷ್ಟಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನನ್ನ ನಡುವಿನ ಬಾಂಧವ್ಯವನ್ನು ನಾನಿಲ್ಲಿ ವಿವರಿಸುವುದಕ್ಕೆ ಸಾಧ್ಯವಿಲ್ಲ. ನಮ್ಮ ತಂದೆಯವರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಮತ್ತು ವಿಧಿವಶರಾದ ನಂತರ ನಡೆದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಸಹಾಯ ಮತ್ತು ನೀಡಿದ ಬೆಂಬಲವನ್ನು ನಾನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ" ಎಂದು ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.
ಬಿಹಾರದಲ್ಲಿ ಪತ್ನಿಯನ್ನು ಸಿಎಂ ಮಾಡಿದ್ದೇ ಲಾಲೂ ಸಾಧನೆ: ಸಿಎಂ ನಿತೀಶ್ ಕುಮಾರ್
ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತದ ವಿರುದ್ಧ ಚಿರಾಗ್ ಪಾಸ್ವಾನ್ ಅಪಸ್ವರ ಎತ್ತುತ್ತಿದ್ದರು. ಎನ್ ಡಿಎ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ ಮುನಿಸಿಕೊಂಡ ಚಿರಾಗ್ ಪಾಸ್ವಾನ್, ಎನ್ ಡಿಎ ಮೈತ್ರಿಕೂಟದಿಂದ ಹೊರ ಬಂದಿದ್ದರು.
"ಪ್ರಧಾನಿಗೆ ನನ್ನಿಂದ ಯಾವುದೇ ತೊಂದರೆಯಾಗದು":
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತೊಂದರೆ ಕೊಡುವುದು ನನಗೆ ಬೇಕಾಗಿಲ್ಲ. ನನ್ನಿಂದ ಆ ರೀತಿ ಕೆಲಸಗಳೂ ನಡೆಯುವುದಿಲ್ಲ. ಏಕೆಂದರೆ ಮಿತ್ರಪಕ್ಷಗಳ ಬೇಡಿಕೆಗಳನ್ನು ಅವರು ಈಡೇರಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ನಿತೀಶ್ ಕುಮಾರ್ ಅವರು, ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಬೇಕು. ನಿಮ್ಮ ವಿರುದ್ಧ ಮುನಿಸಿದ್ದರೂ ಸಹ ತಮ್ಮ ಕರ್ತವ್ಯವನ್ನು ವಸ್ತುನಿಷ್ಠವಾಗಿ ಮಾಡುತ್ತಿದ್ದಾರೆ. ತಮ್ಮನ್ನು ಬೆಂಬಲಿಸುವಂತೆ ಮತ ಪ್ರಚಾರ ನಡೆಸುತ್ತಿದ್ದಾರೆ ಎಂದು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.
ಬಿಹಾರವೇ ಮೊದಲು ಕಲ್ಪನೆಗೆ ಬದ್ಧ:
"ಬಿಹಾರವೇ ಮೊದಲು ಎಂಬ ಕಲ್ಪನೆಯು ಜೆಡಿಯು ಪಕ್ಷದ ಕೊರಳಿಗೆ ಹಗ್ಗದಂತೆ ಸುತ್ತಿಕೊಂಡಿದೆ. ಅದನ್ನು ಸಹಿಸಿಕೊಳ್ಳಲಾಗದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬ ವಿಚಾರವನ್ನು ಇಟ್ಟುಕೊಂಡು ಕಲ್ಯಾಣ ರಾಜ್ಯದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಬಿಹಾರವೇ ಮೊದಲು ಎಂಬ ಪರಿಕಲ್ಪನೆಗೆ ಬದ್ಧವಾಗಿದ್ದೇನೆ" ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
Recommended Video
ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.