ಬಿಹಾರದಲ್ಲಿ ಉದ್ಘಾಟನೆಗೂ ಮೊದಲೇ ಕೊಚ್ಚಿ ಹೋದ ಹೊಸ ಸೇತುವೆ
ಪಾಟ್ನಾ, ಸಪ್ಟೆಂಬರ್.18: ಬಿಹಾರದ ಇದೊಂದು ಸೇತುವೆಯು ಹಲವು ಗ್ರಾಮಗಳ ನಡುವಿನ ಸಂಪರ್ಕ ಕೊಂಡಿಯಾಗಬೇಕಿತ್ತು. ಸಾವಿರಾರು ಗ್ರಾಮಸ್ಥರ ಕನಸಿನ ಯೋಜನೆ ನನಸಾಗುವ ಮೊದಲೇ ಸುರಿದ ವರುಣನ ಅಬ್ಬರಕ್ಕೆ ಕೊಚ್ಚಿ ಹೋಗಿದೆ.
ಬಿಹಾರದ ಕೃಷ್ಣಾಗಂಜ್ ಜಿಲ್ಲೆ ಪತ್ತರಘಟ್ಟಿ ಪಂಚಾಯಿತಿ ವ್ಯಾಪ್ತಿಯ ದಿಗಲ್ ಬಂಕ್ ಬ್ಲಾಕ್ ಪ್ರದೇಶದಲ್ಲಿ ಕಂಕೈ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಸೇತುವೆಯು ಮಳೆಗೆ ಕೊಚ್ಚಿ ಹೋಗಿದೆ.
ಮಧ್ಯಪ್ರದೇಶದಲ್ಲಿ ಉದ್ಘಾಟನೆಗೂ ಮೊದಲೇ ಹೊಸ ಸೇತುವೆ ಕುಸಿತ!
2019ರ ಜೂನ್ ತಿಂಗಳಿನಲ್ಲಿ 1.42 ಕೋಟಿ ರೂಪಾಯಿ ಮೌಲ್ಯದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಹೊಸ ಸೇತುವೆ ನಿರ್ಮಾಣ ಕಾಮಗಾರಿಯು ತೀವ್ರ ಕಳಪೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಾಗಿ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಸೇತುವೆ ಕಾಮಗಾರಿ ಪೂರ್ಣಗೊಳಿಸಲು 1 ವರ್ಷ ಅವಧಿ
"ಕಳೆದ ಒಂದು ವರ್ಷದ ಹಿಂದೆ 2019ರ ಜೂನ್ ತಿಂಗಳಿನಲ್ಲಿ ಕಂಕೈ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಅದಾಗಿ ಸರಿಯಾಗಿ ಒಂದು ವರ್ಷಕ್ಕೆ ಯೋಜನೆ ಪೂರ್ಣಗೊಂಡು ಸೇತುವೆಯು ಉದ್ಘಾಟನೆಯಾಗಬೇಕಿತ್ತು. ಬಿಹಾರದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೂ ಮೊದಲು ಸೇತುವೆ ಉದ್ಘಾಟನೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಉದ್ಘಾಟನೆಗೂ ಮೊದಲೇ ಸೇತುವೆಯ ರಸ್ತೆಯೆಲ್ಲ ಹಾಳಾಗಿದ್ದು, ಕುಸಿದು ಬಿದ್ದಿದೆ" ಎಂದು ಗ್ರಾಮಸ್ಥರು ಕಿಡಿ ಕಾರುತ್ತಿದ್ದಾರೆ.
"ನೀರಿನಲ್ಲಿ ಹೋಮ ಮಾಡಿದಂತಾಯ್ತು ನಮ್ಮ ಹೋರಾಟ"
"ಹೊಸ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿನ ಗುಣಮಟ್ಟವನ್ನು ಜಮಿಲ್ ಅಖ್ತರ್ ಎನ್ನುವವರು ಪ್ರಶ್ನೆ ಮಾಡಿದ್ದಾರೆ. ಸೇತುವೆ ನಿರ್ಮಾಣಕ್ಕೆ ಕಳಪೆ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಇದರಿಂದಾಗಿಯೇ ನಮ್ಮ ಸುದೀರ್ಘ ಹೋರಾಟ ಮತ್ತು ಕನಸುಗಳೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ" ಎಂದು ಜಮಿಲ್ ಅಖ್ತರ್ ದೂರಿದ್ದಾರೆ.
ಸೇತುವೆ ನಿರ್ಮಾಣ ಸುದೀರ್ಘ ಹೋರಾಟದ ಫಲ
ಬಿಹಾರದಲ್ಲಿ ಕಂಕೈ ನದಿಯಿಂದ ಪ್ರವಾಹ ಪರಿಸ್ಥಿತಿಯ ಆತಂಕ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಹಲವು ವರ್ಷಗಳ ಸುದೀರ್ಘ ಹೋರಾಟದ ಪರಿಣಾಮವಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ ಈ ಯೋಜನೆ ಪೂರ್ಣಗೊಳ್ಳುವ ಮೊದಲು ಸೇತುವೆಯು ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸಾವಿರಾರು ಗ್ರಾಮಸ್ಥರ ಕನಸನ್ನು ನುಚ್ಚಿ ನೂರು ಮಾಡಿದೆ.
ನಮ್ಮದು ಶಾಪಗ್ರಸ್ತ ಬದುಕು ಎಂದ ಗ್ರಾಮಸ್ಥರು
"ಒಂದು ವೇಳೆ ಸೇತುವೆ ನಿರ್ಮಾಣ ಕಾಮಗಾರಿಯು ಅಂದುಕೊಂಡಂತೆ ಆಗಿದ್ದರೆ 12 ಗ್ರಾಮಗಳ ನಡುವೆ ಸಂಪರ್ಕ ಕೊಂಡಿಯಾಗಿರುತ್ತಿತ್ತು. ದಿಗಲ್ ಬಂಕ್ ಬ್ಲಾಕ್ ನ ಕುರ್ಹೈಲಿ ಹಾತ್ ಮತ್ತು ಬಹದ್ದೂರ್ ಗಂಜ್ ಮತಿಯಾರಿ ಮುಖ್ಯರಸ್ತೆಗೆ ಸೇತುವೆ ಸಂಪರ್ಕ ಬೆಸೆಯುತ್ತಿತ್ತು. ಆದರೆ ನಾವು ಪ್ರವಾಹದಲ್ಲೇ ಬದುಕಬೇಕಾಗಿರುವ ಶಾಪಗ್ರಸ್ತ ಸ್ಥಿತಿಯಲ್ಲಿದ್ದೀವಿ" ಎಂದು ಸ್ಥಳೀಯ ಮುಖಂಡ ಎಂಡಿ ಇಮ್ರಾನ್ ಬೇಸರ ವ್ಯಕ್ತಪಡಿಸಿದ್ದಾರೆ.