ನಿತೀಶ್ ಜೊತೆ ಕೈಜೋಡಿಸದಂತೆ ಇತರೆ ಪಕ್ಷಗಳ ಮೇಲೆ ಬಿಜೆಪಿ ಒತ್ತಡ ಹಾಕಲು ಯತ್ನಿಸಿತ್ತು: ಜೆಡಿಯು ಆರೋಪ
ಪಟ್ನಾ, ಆಗಸ್ಟ್ 11: ತರಾತುರಿಯಲ್ಲಿ ಬಿಜೆಪಿ ಜೊತೆ ಸಂಬಂಧ ಕಡಿದುಕೊಂಡು ನಿತೀಶ್ ಕುಮಾರ್ ರಾಷ್ಟ್ರೀಯ ಜನತಾದಳ, ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡತ್ತಿದ್ದಾರೆ. 8ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಯವರೆಗು ಮಿತ್ರರಾಗಿದ್ದ ಬಿಜೆಪಿ-ಜೆಡಿಯು ಈಗ ಪರಮ ವೈರಿಗಳಂತೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಬಿಜೆಪಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಬಿಜೆಪಿ ಜನರನ್ನು ಹೇಗೆ ನಡೆಸಿಕೊಳ್ಳತ್ತದೆ ಎಂಬುದು ನಿಮ್ಮ ಮುಂದಿದೆ ಎಂದು ನಿತೀಶ್ ಕುಮಾರ್ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯ ಕೇಂದ್ರ ಸಚಿವ ಗಿರಿರಾಜ್ ಸಿಂಗ್, "ನಾವು ಎಲ್ಲಾ ಸಮ್ಮಿಶ್ರ ಧರ್ಮವನ್ನು ಅನುಸರಿಸಿದ್ದೇವೆ, ಅದಕ್ಕೆ ದ್ರೋಹ ಬಗೆದವರು ನಿತೀಶ್ ಕುಮಾರ್" ಎಂದು ಕಿಡಿ ಕಾರಿದ್ದಾರೆ.
ನಿತೀಶ್ ಕುಮಾರ್ ಹೊಸ ಮೈತ್ರಿಯನ್ನು ರಚಿಸುವುದನ್ನು ತಡೆಯಲು ಹತಾಶರಾಗಿರುವ ಬಿಜೆಪಿ, ಇತರ ಪಕ್ಷಗಳು ನಿತೀಶ್ ಕುಮಾರ್ ಅವರ ಜೊತೆ ಒಪ್ಪಂದಕ್ಕೆ ಸಹಿಹಾಕದಂತೆ ಮಾಡಲು ಪ್ರಯತ್ನಿಸಿದೆ ಎಂದು ಸಂಯುಕ್ತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಆರೋಪಿಸಿದ್ದಾರೆ.
"ಬಿಜೆಪಿ ಮುಖಂಡರು ಆರ್ಜೆಡಿ ನಾಯಕರಿಗೆ ಕರೆ ಮಾಡಿ, ಮೂರು-ನಾಲ್ಕು ದಿನಗಳು ಕಾಯಿರಿ ಆಮೇಲೆ ನೀವು ನಿತೀಶ್ ಕುಮಾರ್ ಅವರ ಜೊತೆ ಹೋಗಬಹುದು ಎಂದು ಹೇಳಿದ್ದಾರೆ. ಆದರೆ ಬಿಜೆಪಿಯವರಿಗೆ ಇನ್ನು ಮುಂದೆ ಏಜೆಂಟ್ ಇಲ್ಲ. ಅವರಿಗೆ ಒಬ್ಬ ಏಜೆಂಟ್ ಮಾತ್ರ ಇದ್ದರು ಮತ್ತು ನಿತೀಶ್ ಕುಮಾರ್ ಅವರನ್ನು ತೆಗೆದುಹಾಕಿದ್ದಾರೆ" ಎಂದು ಆರ್ ಸಿಪಿ ಸಿಂಗ್ ರಾಜೀನಾಮೆ ನೀಡಿರುವುದನ್ನು ಉಲ್ಲೇಖಿಸಿ ಲಾಲನ್ ಸಿಂಗ್ ಹೇಳಿದರು.
ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿದ್ದ ಅಮಿತ್ ಶಾ
ಜುಲೈ 7ರವರೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಯುನ ಏಕೈಕ ಪ್ರತಿನಿಧಿಯಾಗಿದ್ದ ಆರ್ಸಿಪಿ ಸಿಂಗ್ ಬಗ್ಗೆ ನಿತೀಶ್ ಕುಮಾರ್ ತೀವ್ರ ಅಸಮಾಧಾನ ಹೊಂದಿದ್ದರು. ಅಮಿತ್ ಶಾ ನಿಷ್ಠರಾಗಿದ್ದಕ್ಕೆ, ಅವರು ಜೆಡಿಯುಗೆ ರಾಜೀನಾಮೆ ನೀಡಬೇಕಾಯಿತು. ಆರ್ಸಿಪಿ ಸಿಂಗ್ ವಿರುದ್ಧ ಜೆಡಿಯು ರಾಷ್ಟ್ರಾಧ್ಯಕ್ಷ ಲಲನ್ ಸಿಂಗ್ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಅವರು ಜೆಡಿಯು ಶಾಸಕರನ್ನು ಬಿಜೆಪಿಗೆ ಪಕ್ಷಾಂತರಗೊಳ್ಳಲು ಪ್ರೇರೇಪಿಸುತ್ತಿದ್ದರು ಎಂದು ಆರೋಪ ಕೇಳಿಬಂದಿದೆ.
ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆ ಎಂಬುದು ಸ್ಪಷ್ಟವಾದ ನಂತರ ಬಿಜೆಪಿಯು ಅವರನ್ನು ಸಮಾಧಾನಗೊಳಿಸಲು, ಅವರು ಅಂದುಕೊಂಡಂತೆ ಯಾವುದೇ ಪಕ್ಷಾಂತರ ಚಟುವಟಿಕೆ ನಡೆಯುತ್ತಿಲ್ಲ ಎಂದು ಸಾಬೀತುಪಡಿಸಲು ಪ್ರಯತ್ನಿಸಿದೆ.
"ಎರಡು ದಿನಗಳ ಹಿಂದಷ್ಟೇ ಅಮಿತ್ ಶಾ ಅವರು ನಿತೀಶ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಚಿಂತೆ ಮಾಡುವಂತದ್ದು ಏನೂ ಇಲ್ಲ ಎಂದು ಹೇಳಿದ್ದರು" ಎಂದು ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.
"ಇತರ ಪಕ್ಷಗಳು ನಾಶವಾಗುತ್ತವೆ, ಬಿಜೆಪಿ ಮಾತ್ರ ಉಳಿಯುತ್ತದೆ" ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಒಂದು ವಾರದ ಹಿಂದೆ ಹೇಳಿಕೆ ನೀಡಿದ್ದು, ನಿತೀಶ್ ಕುಮಾರ್ ಅವರನ್ನು ಕೆರಳಿಸಿತ್ತು. ಸದ್ಯ ಬಿಜೆಪಿಗೆ ಮೈತ್ರಿಗೆ ಗೌರವ ಕೊಡದ ನಿತೀಶ್ ಕುಮಾರ್ ತಂತ್ರಕ್ಕೆ ಪ್ರತಿತಂತ್ರ ಹೂಡುವುದು ಮುಖ್ಯವಾಗಿದೆ.
Recommended Video