ಸಂಪುಟ ವಿಸ್ತರಣೆ: ಬಿಜೆಪಿಯಲ್ಲಿ ಹೊಸಬರಿಗೆ ಮಣೆ, ಹಿರಿಯರಿಗೆ ಕೊಕ್?
ಪಟ್ನಾ, ಡಿಸೆಂಬರ್ 17: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆ. ಆದರೆ ಇದುವರೆಗೂ ಪರಿಪೂರ್ಣ ಸಂಪುಟ ವಿಸ್ತರಣೆಯಾಗಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬಿಜೆಪಿಯ ಅನೇಕ ಹಿರಿ ತಲೆಗಳು ನಿಕಟವಾಗಿದ್ದು, ಈ ನಡುವೆ ಹೊಸ ಪೀಳಿಗೆಯ ಮುಖಗಳಿಗೆ ಸಂಪುಟದಲ್ಲಿ ಜಾಗ ನೀಡುವ ಮೂಲಕ ಬದಲಾವಣೆ ತರುವ ಪ್ರಯತ್ನಕ್ಕೆ ಹಿನ್ನಡೆಯಾಗುತ್ತಿದೆ.
ಸಂಪುಟ ವಿಸ್ತರಣೆಯ ಪ್ರಯತ್ನಗಳು ನನೆಗುದಿಗೆ ಬಿದ್ದಿದ್ದು, ಆಡಳಿತ ಪಕ್ಷಗಳ ಸಚಿವಾಕಾಂಕ್ಷಿ ಶಾಸಕರಲ್ಲಿ ತಳಮಳ ಹೆಚ್ಚಾಗಿದೆ. ಎನ್ಡಿಎ ಬಳಗದಲ್ಲಿ ತನ್ನ 74 ಶಾಸಕರನ್ನು ಹೊಂದಿದ್ದರೂ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ, ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 14 ಸಚಿವ ಸ್ಥಾನಗಳನ್ನು ಜೆಡಿಯುಗೆ ಬಿಟ್ಟುಕೊಡುವ ಚುನಾವಣಾ ಪೂರ್ವ ಭರವಸೆಯನ್ನು ಬಿಜೆಪಿ ಉಳಿಸಿಕೊಂಡಿದೆ. ಹಾಲಿ ಇರುವ ನಿಯಮದ ಪ್ರಕಾರ 243 ಸದಸ್ಯರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಪುಟದಲ್ಲಿ 36 ಸಚಿವರನ್ನು ಹೊಂದಲು ಅವಕಾಶವಿದೆ.
ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಸುಶೀಲ್ ಮೋದಿ
ಸಂಪುಟ ವಿಸ್ತರಣೆಯು ತಡವಾಗಲು ಬಿಜೆಪಿಯ ವಿಳಂಬ ನೀತಿ ಕಾರಣ ಎಂದು ನಿತೀಶ್ ಕುಮಾರ್ ಕೂಡ ಹೇಳಿದ್ದಾರೆ. ಇದುವರೆಗೂ ಬಿಜೆಪಿಯಿಂದ ಯಾವುದೇ ಪ್ರಸ್ತಾವ ಬಂದಿಲ್ಲ. ಬಿಜೆಪಿಯು ರಾಜ್ಯ ಸಂಪುಟ ವಿಸ್ತರಣೆಗೆ ಪ್ರಸ್ತಾವ ಮುಂದಿರಿಸಿದ ಬಳಿಕ ನಾವು ಅದರ ಬಗ್ಗೆ ಆಲೋಚಿಸುತ್ತೇವೆ ಎಂದು ನಿತೀಶ್ ತಿಳಿಸಿದ್ದಾರೆ. ಮುಂದೆ ಓದಿ.
ಹೊಸ ಮುಖಗಳಿಗೆ ಮಣೆ
ಆದರೆ ಬಿಹಾರದ ಆಡಳಿತದಲ್ಲಿ ದೊಡ್ಡಣ್ಣನಂತೆ ಕೆಲಸ ಮಾಡಲು ಬಿಜೆಪಿ ಸದನದಲ್ಲಿ ಪ್ರಾಬಲ್ಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಆಡಳಿತದ ಚುಕ್ಕಾಣಿ ನಿತೀಶ್ ಬಳಿ ಇದ್ದರೂ ಅದರ ಜುಟ್ಟು ತನ್ನ ಕೈಯಲ್ಲಿರಿಸಿಕೊಳ್ಳುವುದು ಅದರ ಉದ್ದೇಶ. ನಿತೀಶ್ ಸಂಪುಟದಲ್ಲಿ ತನ್ನ ಹೊಸ ಮುಖಗಳನ್ನು ಇರಿಸಲು ಬಿಜೆಪಿ ಬಯಸಿದೆ.
ಹಿರಿಯ ನಾಯಕರಿಗೆ ಬೇರೆ ಹೊಣೆ
ಅದಕ್ಕೂ ಮುನ್ನ ಪ್ರೇಮ್ ಕುಮಾರ್, ನಂದ ಕಿಶೋರ್ ಯಾದವ್, ವಿನೋದ್ ನಾರಾಯಣ್ ಝಾ, ರಾಮ್ ನಾರಾಯಣ್ ಮಂಡಲ್ ಮುಂತಾದ ಹಿರಿಯ ಮುಖಂಡರನ್ನು ವಿವಿಧ ಸಮಿತಿಗಳಿಗೆ ಮುಖ್ಯಸ್ಥರನ್ನಾಗಿ ನೇಮಿಸಿದೆ. ಇವರೆಲ್ಲರೂ ನಿತೀಶ್ ಕುಮಾರ್ ಅವರ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರು. ಈ ಬಾರಿಯೂ ಇವರೆಲ್ಲ ಖಂಡಿತವಾಗಿಗೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಕೇಂದ್ರ ಕ್ಯಾಬಿನೆಟ್ ಗೆ ಮೋದಿ: ಕಣ್ಣಿಟ್ಟಿರುವ ಖಾತೆ ಒಂದು, ಸಿಗುವುದು ಇನ್ನೊಂದು
ಬದಲಾವಣೆ ಪ್ರಕ್ರಿಯೆ ಆರಂಭ
ಆದರೆ, ಅವರನ್ನು ವಿವಿಧ ಸಮಿತಿಗಳಿಗೆ ಮುಖ್ಯಸ್ಥರನ್ನಾಗಿ ನೇಮಿಸಿರುವುದು, ಅವರಿಗೆ ಸಚಿವ ಸ್ಥಾನ ಸಿಗಲಾರದು ಎಂಬುದನ್ನು ಸಂಕೇತಿಸಿದೆ. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಜವಾಬ್ದಾರಿಯ ಚೆಂಡನ್ನು ಬಿಜೆಪಿ ಅಂಕಣಕ್ಕೆ ಹಾಕಿದ್ದರೂ, ನಿತೀಶ್ ಅವರಿಗೆ ತಮ್ಮ ಸುತ್ತಲೂ ಅಂಟಿಕೊಂಡಂತಿರುವ ಬಿಜೆಪಿಯ ಹಿರಿಯ ಮುಖಂಡರಿಂದ ಮುಕ್ತಿ ಬೇಕಿದೆ. ಹಿರಿಯರನ್ನು ಬೇರೆ ಜವಾಬ್ದಾರಿ ಕೊಟ್ಟು, ಹೊಸ ಮುಖಗಳಿಗೆ ಖಾತೆಗಳನ್ನು ನೀಡುವ ಬಿಜೆಪಿಯ ಉದ್ದೇಶದ ಮೊದಲ ಬಲಿಪಶು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ. ಅವರನ್ನು ರಾಜ್ಯಸಭೆಗೆ ಕಳುಹಿಸಿ ಅಲ್ಲಿಂದ ಕೇಂದ್ರ ಸಂಪುಟಕ್ಕೆ ಬಡ್ತಿ ನೀಡಲಾಗುತ್ತಿದೆ.
ಬಿಜೆಪಿ ಗುರಿಯೇ ಬೇರೆ
ಸಾಮ್ರಾಟ್ ಚೌಧರಿ, ನಿತೀಶ್ ಮಿಶ್ರಾ, ನಿತಿನ್ ನವೀನ್, ಸಂಜೀವ್ ಚೌರಾಸಿಯಾ ಮತ್ತು ಇತರೆ ಯುವ ಮುಖಗಳನ್ನು ಸಂಪುಟಕ್ಕೆ ತರಲಿದೆ ಎಂದು ನಿರೀಕ್ಷಿಸಲಾಗಿದೆ. ಯುವ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಿಜೆಪಿಯ ಉದ್ದೇಶದಿಂದ ಹಿಂದೆ ಅನೇಕ ತಂತ್ರಗಳಿವೆ. ಬಿಹಾರದಲ್ಲಿ ಪಕ್ಷವನ್ನು ಬಲಪಡಿಸಲು ಹೊಸ ಪೀಳಿಗೆ ನೆರವಾಗುತ್ತದೆ. ಜತೆಗೆ ತನ್ನ ಸುದೀರ್ಘ ಕಾಲದ ಕಾರ್ಯಸೂಚಿಗಳನ್ನು ಜಾರಿಗೆ ತರಲು ನಿತೀಶ್ ಮೇಲೆ ಒತ್ತಡ ಹೇರಲು ಕೂಡ ಯುವ ಶಾಸಕರಿಗೆ ಅಧಿಕಾರ ಹಸ್ತಾಂತರಿಸುವುದು ಸಹಾಯ ಮಾಡುತ್ತದೆ. ಅತ್ಯಧಿಕ ದೊಡ್ಡ ಪಕ್ಷವಾಗಿದ್ದರೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಯುವ ಮುಖಗಳ ಆಕ್ರಮಣಕಾರಿ ಪ್ರವೃತ್ತಿ ತನ್ನ ಗುರಿಯನ್ನು ಈಡೇರಿಸಲಿದೆ ಎನ್ನುವುದು ಅದರ ಕಲ್ಪನೆ.
ಸಚಿವ ಸಂಪುಟ: ಗೃಹ ಖಾತೆ ನಿತೀಶ್ಗೆ, ತಾರ್ ಕಿಶೋರರಿಗೆ ವಿತ್ತ
ಪ್ರಮುಖ ಖಾತೆಗಳ ಮೇಲೆ ಕಣ್ಣು
ಜೆಡಿಯು ಕೆಲವು ಪ್ರಮುಖ ಸಚಿವ ಸ್ಥಾನಗಳನ್ನು ಕೂಡ ಹಂಚಿಕೊಳ್ಳುವ ಬಗ್ಗೆ ಪಟ್ಟು ಹಿಡಿಯುತ್ತಿದೆ. ಮೊದಲ ಹಂತದ ಸಂಪುಟ ರಚನೆಯಲ್ಲಿ ವಿಪತ್ತು ನಿರ್ವಹಣೆ, ಪಂಚಾಯತ್ ರಾಜ್ನಂತಹ ಇಲಾಖೆಗಳು ಬಿಜೆಪಿಗೆ ಸಿಕ್ಕಿವೆ. ಆದರೆ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲದಂತಹ ಪ್ರಮುಖ ಖಾತೆಗಳನ್ನು ಕೂಡ ಬಿಜೆಪಿ ಬಯಸಿದೆ. ಹೀಗಾಗಿ ಇಲ್ಲಿ ಸಚಿವ ಸ್ಥಾನಗಳ ಸಂಖ್ಯೆಯಷ್ಟೇ ಅಲ್ಲ, ಕೆಲವು ಪ್ರಮುಖ ಇಲಾಖೆಗಳ ಮೇಲೆಯೂ ಬಿಜೆಪಿ ಕಣ್ಣಿಟ್ಟಿದೆ. ಇದು ಎನ್ಡಿಎ ಮಿತ್ರಪಕ್ಷಗಳ ನಡುವೆ ಗೊಂದಲಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.
ಉಭಯ ಪಕ್ಷಗಳ ನಡುವೆ ಬಿಕ್ಕಟ್ಟು ಸಂಭವ
ತನ್ನ ಪ್ರಭಾವಶಾಲಿ ಶಾಸಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದನ್ನು ಜೆಡಿಯು ಪರಿಗಣಿಸುತ್ತಿದೆ. ಆದರೆ ಕುಶ್ವಾಹ ಬಗ್ಗೆ ಅಷ್ಟೇನೂ ಉತ್ತಮ ಅಭಿಪ್ರಾಯ ಹೊಂದಿಲ್ಲದ ಪಕ್ಷದ ಹಿರಿಯ ನಾಯಕರು ಇದರ ಬಗ್ಗೆ ಅಸಮಾಧಾನ ಸ್ಫೋಟಿಸುವ ಅಪಾಯವೂ ಇದೆ.
ಬಿಹಾರದಲ್ಲಿ ಸಂಪುಟ ವಿಸ್ತರಣೆ ಬಿಕ್ಕಟ್ಟು ಮುಂದಿನ ಜನವರಿ ಮಧ್ಯಭಾಗದ ವೇಳೆಗೆ ಅಂತ್ಯಗೊಳ್ಳುವ ನಿರೀಕ್ಷೆಯಿದೆ. ಆದರೆ ಸಂಪುಟ ವಿಸ್ತರಣೆಯು ಉಭಯ ಪಕ್ಷಗಳ ನಡುವೆ ಅಧಿಕಾರ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಹೆಚ್ಚಿದೆ.