ಬಿಹಾರ ಪ್ರಚಾರಕರ ಪಟ್ಟಿಯಿಂದ 'ಸ್ಟಾರ್' ನಾಯಕರನ್ನು ಹೊರಗಿಟ್ಟ ಬಿಜೆಪಿ!
ಪಾಟ್ನಾ, ಅಕ್ಟೋಬರ್.13: ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ರಾಜ್ಯದ ಇಬ್ಬರು ಚಿರ ಪರಿಚಿತ ನಾಯಕರು ಎಂದೇ ಹೆಸರಾದ ಶಹನ್ವಾಜ್ ಹುಸೇನ್ ಮತ್ತು ರಾಜೀವ್ ಪ್ರತಾಪ್ ರೂಢಿ ಹೆಸರನ್ನೇ ಕೈಬಿಡಲಾಗಿದೆ.
ಬಿಹಾರದ ಈ ಇಬ್ಬರು ಬಿಜೆಪಿ ನಾಯಕರು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1999ರಲ್ಲಿ ಈ ಇಬ್ಬರು ನಾಯಕರು ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಭಾನುವಾರ ಬಿಜೆಪಿ ಬಿಡುಗಡೆಗೊಳಿಸಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ 30 ನಾಯಕರು ಹೆಸರನ್ನು ಸೇರಿಸಲಾಗಿದೆ. ಅಲ್ಲದೇ, 2014ರಿಂದ ಈಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಸಂಸದ ರಾಮ್ ಕೃಪಾಲ್ ಯಾದವ್, ಸುಶೀಲ್ ಸಿಂಗ್, ಚೆಡಿ ಪಾಸ್ವಾನ್ ಅವರ ಹೆಸರನ್ನು ಸೇರಿಸಲಾಗಿದೆ. ಆದರೆ ಪಕ್ಷದಲ್ಲಿ ಹಿರಿಯ ನಾಯಕರು ಎಂದು ಗುರುತಿಸಿಕೊಂಡಿರುವ ಹುಸೇನ್ ಮತ್ತು ರೂಢಿ ಅವರ ಹೆಸರನ್ನೇ ಕೈ ಬಿಡಲಾಗಿದೆ.
ಬಿಹಾರದಲ್ಲಿ ಶಿವಸೇನಾ ಪ್ರಚಾರಕ್ಕೆ 20 ಸ್ಟಾರ್ ಪ್ರಚಾರಕರು
ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.
ಸ್ಟಾರ್ ಪ್ರಚಾರಕರ ಪಟ್ಟಿ ಮುಂದೆ ಬದಲಾಗಬಹುದು
ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಬಿಡುಗಡೆಗೊಳಿಸಿದ 30 ಸ್ಟಾರ್ ಪ್ರಚಾರಕರ ಪಟ್ಟಿಯು ಕೇವಲ ಒಂದು ಹಂತದ ಚುನಾವಣೆಗೆ ಮಾತ್ರ ಸೀಮಿತವಾಗಿದೆ ಎಂದು ರಾಜೀವ್ ಪ್ರತಾಪ್ ರೂಢಿ ಪ್ರತಿಪಾದಿಸಿದ್ದಾರೆ. ನಾನು ಇಂದಿಗೂ ಪಕ್ಷದ ರಾಷ್ಟ್ರೀಯ ವಕ್ತಾರನೇ ಆಗಿದ್ದೇನೆ. ಮುಂದಿನ ಹಂತಗಳಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿನ ಹೆಸರು ಬದಲಾಗಬಹುದು. ಅಂದು ನಾನೂ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದು ಎಂದು ತಿಳಿಸಿದ್ದಾರೆ.
ಸ್ಟಾರ್ ಪ್ರಚಾಕರ ಪಟ್ಟಿಯ ಬಗ್ಗೆ ಬಿಜೆಪಿಯ ಸ್ಪಷ್ಟನೆ
ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಶಹನವಾಜ್ ಹುಸೇನ್ ಮತ್ತು ರಾಜೀವ್ ಪ್ರತಾಪ್ ರೂಢಿ ಕೂಡಾ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇಬ್ಬರು ನಾಯಕರು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನೇತೃತ್ವದ ಪ್ರಚಾರ ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದಾರೆ" ಎಂದು ಬಿಜೆಪಿ ವಕ್ತಾರ ಪ್ರೇಮ್ ರಂಜನ್ ಪಟೇಲ್ ತಿಳಿಸಿದ್ದಾರೆ. "ಇದಲ್ಲದೆ, ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಲ್ಲದಿರುವುದು ಅವರು ಪ್ರಚಾರ ಮಾಡುವುದಿಲ್ಲ ಎಂದು ಅರ್ಥವಲ್ಲ. ಅಗತ್ಯವಿದ್ದರೆ ಪ್ರಚಾರ ಮಾಡಲು ಪಕ್ಷವು ಅವರನ್ನು ಕೇಳಬಹುದು" ಎಂದು ಪಟೇಲ್ ಹೇಳಿದ್ದಾರೆ.
ಜಾತಿ ಲೆಕ್ಕಾಚಾರ ಹಾಕುತ್ತಿದೆಯಾ ಬಿಜೆಪಿ?
ಬಿಹಾರದ ರಜಪೂತ್ ಸಮುದಾಯದಲ್ಲಿ ರೂಢಿಗೆ ಸೇರಿದ ಹಲವು ನಾಯಕರು ಬಿಜೆಪಿಯಲ್ಲಿದ್ದಾರೆ. ಈ ಸಮುದಾಯದ ಜನರನ್ನು ಸೆಳೆಯಲು ರಾಹುಲ್ ಪ್ರತಾಪ್ ರೂಢಿ ಹೊರತಾಗಿ ರಾಧಾ ಮೋಹನ್ ಸಿಂಗ್, ಸುಶೀಲ್ ಸಿಂಗ್, ಕೇಂದ್ರ ಸಚಿವ ಆರ್ ಕೆ ಸಿಂಗ್ ಸೇರಿದಂತೆ ಹಲವು ನಾಯಕರಿದ್ದಾರೆ. ಇದಕ್ಕೂ ಮೊದಲು ಮುಸ್ಲಿಂ ಸಮುದಾಯವನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಕ್ಷದಲ್ಲಿ ಒಬ್ಬ ನಾಯಕರ ಅಗತ್ಯವಿದ್ದ ಹಿನ್ನೆಲೆ ಎಲ್ಲ ಕಡೆಗಳಲ್ಲೂ ಶಹನವಾಜ್ ಹುಸೇನ್ ಹೆಸರನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಇದೀಗ ಸಿಎಂ ನಿತೀಶ್ ಕುಮಾರ್ ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಟ್ಟುಕೊಂಡು ಚುನಾವಣೆ ಎದುರಿಸಲಾಗುತ್ತಿದೆ.
ಮಾಜಿ ಸಂಸದ ಶಹನವಾಜ್ ಹುಸೇನ್ ರಾಜಕೀಯದ ಹಾದಿ
ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತಮ್ಮ ಹೆಸರನ್ನು ಕೈ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಶಹನವಾಜ್ ಹುಸೇನ್ ನಿರಾಕರಿಸಿದ್ದಾರೆ. 1999ರಲ್ಲಿ ಮೊದಲ ಬಾರಿ ಮುಸ್ಲಿಮರ ಪ್ರಾಬಲ್ಯ ಹೊಂದಿರುವ ಕಿಶನಗಂಜ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 2004ರಲ್ಲಿ ಸೋಲನುಭವಿಸಿದ ಶಹನವಾಜ್, ಭಾಗಲ್ಪುರ್ ಲೋಕಸಭಾ ಕ್ಷೇತ್ರದ 2006ರ ಉಪ ಚುನಾವಣೆಯಲ್ಲಿ ಮತ್ತೆ ಸಂಸತ್ ಗೆ ಆಯ್ಕೆಯಾದರು. 2009ರಲ್ಲಿ ಅದೇ ಲೋಕಸಭ ಕ್ಷೇತ್ರದಲ್ಲಿ ಪುನರ್ ಆಯ್ಕೆಯಾದರು. ಅಂದಿನ ಎನ್ಡಿಎಯ ಕನ್ವೀನರ್ ಆಗಿದ್ದ ಶರದ್ ಯಾದವ್ ಶತ್ರುಘ್ನ ಸಿನ್ಹಾ ಅವರು ಶಹನವಾಜ್ ಗೆ ಆದ್ಯತೆ ನೀಡಿದ್ದರು.