700 ಕಿ.ಮೀ ಪ್ರಯಾಣಿಸಿದರೂ ನೀಟ್ ಪರೀಕ್ಷೆಗೆ ಸಿಗದ ಅವಕಾಶ!
ಪಾಟ್ನಾ, ಸಪ್ಟೆಂಬರ್.14: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ 24 ಗಂಟೆಗಳಲ್ಲೇ 700 ಕಿಲೋ ಮೀಟರ್ ಸಂಚರಿಸಿದ ವಿದ್ಯಾರ್ಥಿಯೊಬ್ಬರು ನೀಟ್ ಪರೀಕ್ಷೆಯನ್ನು ಕೇವಲ 10 ನಿಮಿಷದಲ್ಲೇ ತಪ್ಪಿಸಿಕೊಂಡ ಘಟನೆ ಬಿಹಾರದ ಸಾಲ್ಟ್ ಲೇಕ್ ನಲ್ಲಿ ವರದಿಯಾಗಿದೆ.
ದೇಶಾದ್ಯಂತ ಸಪ್ಟೆಂಬರ್.13ರ ಭಾನುವಾರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ನಡೆಸಲಾಯಿತು. ಅದಕ್ಕಾಗಿ 700 ಕಿ.ಮೀ ಪ್ರಯಾಣ ಮಾಡಿದ ಬಿಹಾರ ದರ್ಭಂಗಾ ಜಿಲ್ಲೆಯ 19 ವರ್ಷ ವಿದ್ಯಾರ್ಥಿ ಸಂತೋಷ್ ಕುಮಾರ್ ಯಾದವ್ ಪ್ರಯತ್ನ ವ್ಯರ್ಥವಾಗಿದೆ.
ನೀಟ್ ಪರೀಕ್ಷೆ ಬರೆಯಲಿದ್ದಾರೆ 15.97 ಲಕ್ಷ ವಿದ್ಯಾರ್ಥಿಗಳು
"ಶನಿವಾರ ಬೆಳಗ್ಗೆ 8 ಗಂಟೆಗೆ ಬಿಹಾರದಿಂದ ಪ್ರಯಾಣ ಆರಂಭಿಸಿದ್ದೆ, ಆದರೆ ಮುಜಾಫರ್ ಪುರ್ ಮತ್ತು ಪಾಟ್ನಾ ರಸ್ತೆಯ ವಾಹನದಟ್ಟಣೆಯಿಂದ ಅಲ್ಲಿಯೇ 6 ಗಂಟೆಗಳ ಕಾಲ ಕಳೆದು ಹೋಯಿತು. ರಾತ್ರಿ 9 ಗಂಟೆಗೆ ಪಾಟ್ನಾವನ್ನು ಬಿಟ್ಟ ನಾನು ಕೋಲ್ಕತ್ತಾ ತಲುಪುವಷ್ಟರಲ್ಲೇ ಮಧ್ಯರಾತ್ರಿ 1 ಗಂಟೆಯಾಗಿತ್ತು. ಅಲ್ಲಿಂದ ಕ್ಯಾಬ್ ಹಿಡಿದು ಭಾನುವಾರ ಮಧ್ಯಾಹ್ನ 1.40ರ ವೇಳೆಗೆ ಪರೀಕ್ಷಾ ಕೇಂದ್ರದ ಬಳಿಗೆ ತೆರಳಿದ್ದೆನು" ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.
ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಲು ಸೂಚನೆ
2020ನೇ ಸಾಲಿನಲ್ಲಿ 15.97 ಲಕ್ಷ ವಿದ್ಯಾರ್ಥಿಗಳು ಈಗಾಗಲೇ ನೀಟ್ ಪರೀಕ್ಷೆ ಬರೆದಿದ್ದಾರೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾಗುವುದಕ್ಕೆ ಪರೀಕ್ಷಾರ್ಥಿಗಳಿಗೆ ಮಧ್ಯಾಹ್ನ 1.30ರ ಗಡುವು ವಿಧಿಸಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಪರೀಕ್ಷೆಗಳು ಆರಂಭವಾಗಲಿದ್ದು, ಕೊವಿಡ್-19 ಸೋಂಕು ಭೀತಿ ಹಿನ್ನೆಲೆ ವೈದ್ಯಕೀಯ ತಪಾಸಣೆ ನಡೆಸುವ ಉದ್ದೇಶದಿಂದ 30 ನಿಮಿಷ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು ಎಂಬ ನಿಯಮವನ್ನು ಮಾಡಲಾಗಿತ್ತು.
10 ನಿಮಿಷದಲ್ಲೇ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿ
ಬಿಹಾರದಿಂದ ಪ್ರಯಾಣ ಆರಂಭಿಸಿದ ಸಂತೋಷ್ 24 ಗಂಟೆಗಳಲ್ಲೇ ನಿರಂತರವಾಗಿ ಬಸ್ ನ್ನು ಬದಲಿಸಿಕೊಂಡು 700 ಕಿ.ಮೀ ಸಂಚರಿಸಿದರು. ಆದರೆ ಮಧ್ಯಾಹ್ನ 1.30ರ ಬದಲಿಗೆ 1.40ಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿದ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ನೀಡಲು ನಿರಾಕರಿಸಲಾಯಿತು. "10 ನಿಮಿಷ ತಡವಾಗಿದ್ದಕ್ಕೆ ಪರೀಕ್ಷೆ ಬರೆಯುವುದಕ್ಕೆ ಅನುಮತಿ ನೀಡಲಿಲ್ಲ. ಪ್ರಾಂಶುಪಾಲರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡುವಂತೆ ಗಾರ್ಡ್ ನ್ನು ಪರಿಪರಿಯಾಗಿ ಕೇಳಿದರೂ ಅನುಮತಿ ನೀಡಲಿಲ್ಲ" ಎಂದು ವಿದ್ಯಾರ್ಥಿ ಸಂತೋಷ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಟಿಕೆಟ್ ಬುಕ್ ಮಾಡಲು ಎರಡು ದಿನ ಪರದಾಟ
"ನೀಟ್ ಪರೀಕ್ಷಾ ಕೇಂದ್ರಕ್ಕೆ ತೆರಳಲು ಎರಡು ದಿನಗಳಿಂದಲೂ ತೀವ್ರ ಪರದಾಟ ಅನುಭವಿಸಿದ್ದೇನೆ. ಅಂತಿಮವಾಗಿ ಶನಿವಾರ ಒಂದು ಬಸ್ ಟಿಕೆಟ್ ಬುಕ್ ಮಾಡಿದ್ದೆನು. ಬಡ ರೈತನ ಮಗನಾಗಿದ್ದರೂ ಪರೀಕ್ಷಾ ಕೇಂದ್ರಕ್ಕೆ ತೆರಳಲು ಕ್ಯಾಬ್ ಗಾಗಿ 300 ರೂಪಾಯಿ ನೀಡಿದ್ದೇನೆ" ಎಂದು ಸಂತೋಷ್ ಕುಮಾರ್ ಯಾದವ್ ತಿಳಿಸಿದ್ದಾರೆ.
ನೀಟ್ ಪರೀಕ್ಷೆ ಬರೆಯಲಾಗದೇ ವಿದ್ಯಾರ್ಥಿ ಕಣ್ಣೀರು
"ನನ್ನ ಜೀವನದ ಮಹತ್ವದ ವರ್ಷವನ್ನು ನಾನು ಕಳೆದುಕೊಂಡಂತೆ ಆಗಿದೆ. ಇನ್ನೇನಿದ್ದರೂ ಮುಂದಿನ ವರ್ಷದ ನೀಟ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತಾ ಪರಿಸ್ಥಿತಿ ಎದುರಾಗಿದೆ" ಎಂದು ವಿದ್ಯಾರ್ಥಿ ಸಂತೋಷ್ ಕುಮಾರ್ ಯಾದವ್ ಕಣ್ಣೀರು ಹಾಕಿದ್ದಾರೆ. ಪರೀಕ್ಷಾ ಕೇಂದ್ರದ ಎದುರಿನಲ್ಲೇ ಕಣ್ಣೀರು ಹಾಕಿದ ವಿದ್ಯಾರ್ಥಿಯು ನಂತರ ತನ್ನ ಚಿಕ್ಕಪ್ಪನ ಜೊತೆಗೆ ಸ್ವಗ್ರಾಮಕ್ಕೆ ವಾಪಸ್ಸಾಗಿದ್ದಾರೆ.