ಬಿಹಾರ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿದ ಲಾಲೂ ಆಡಿಯೋ "ರೀಲು"!
ಪಾಟ್ನಾ, ನವೆಂಬರ್.25: ಬಿಹಾರ ರಾಷ್ಟ್ರೀಯ ಜನತಾ ದಳದ ಮಾಜಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಜೊತೆಗೆ ಪಕ್ಷಾಂತರಕ್ಕಾಗಿ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದ ಸಂಭಾಷಣೆಯ ಆಡಿಯೋವೊಂದು ವಿಧಾನಸಭಾ ಕಲಾಪದಲ್ಲಿ ಭಾರಿ ಸದ್ದು ಗದ್ದಲಕ್ಕೆ ಕಾರಣವಾಯಿತು.
ಬಿಹಾರದ ವಿಧಾನಸಭಾ ಸಭಾಪತಿ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯುತ್ತಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿಯಾಗಿ ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ನಾಮಪತ್ರ ಸಲ್ಲಿಸಿದ್ದರು. ಮಹಾಘಟಬಂಧನ್ ಅಭ್ಯರ್ಥಿಯಾಗಿ ಅವಧ್ ಬಿಹಾರಿ ಚೌಧರಿ ಸ್ಪರ್ಧಿಸಿದ್ದರು.
''ಕಾಂಗ್ರೆಸ್ಸಿಗರು ಫೈವ್ ಸ್ಟಾರ್ ಸಂಸ್ಕೃತಿ ತೊರೆದರೆ ಉಳಿಗಾಲ''
ವಿಧಾನಸಭೆ ಸ್ಪೀಕರ್ ಚುನಾವಣೆ ಸಂದರ್ಭದಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಗಿದೆ ಎಂದು ಆರೋಪಿಸಿ ಆರ್ ಜೆಡಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಹಾಜರಿರುವ ಶಾಸಕರ ಹಾಜರಾತಿ ಪುಸ್ತಕವನ್ನು ತೋರುವಂತೆ ಪಟ್ಟು ಹಿಡಿದರು. ಸದನದ ಬಾವಿಗಿಳಿದು ಹಂಗಾಮಿ ಸ್ಪೀಕರ್ ಜಿತನ್ ರಾಮ್ ಮಾಂಝಿ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದು, ಗಲಾಟೆಗೆ ಕಾರಣವಾಯಿತು.
|
ಹಂಗಾಮಿ ಸ್ಪೀಕರ್ ವಿರುದ್ಧ ಭುಗಿಲೆದ್ದ ಆಕ್ರೋಶ
ಬಿಹಾರದ ವಿಧಾನಸಭೆ ಸ್ಪೀಕರ್ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪರಿಷತ್ ಸದಸ್ಯ ಅಶೋಕ್ ಚೌಧರಿ ಹಾಜರಾಗಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಮೇಲ್ಮನೆ ಸದಸ್ಯರು ಕೆಳಮನೆ ಅಧಿವೇಶನದಲ್ಲಿ ಹಾಜರಾಗುವುದರಿಂದ ಯಾವುದೇ ತೊಂದರೆಯಿಲ್ಲ. ಅವರು ಸ್ಪೀಕರ್ ಆಯ್ಕೆಯಲ್ಲಿ ಮತ ಚಲಾವಣೆಯನ್ನು ಮಾಡುವುದಿಲ್ಲ ಎಂದು ಹಂಗಾಮಿ ಸ್ಪೀಕರ್ ಜಿತನ್ ರಾಮ್ ಮಾಂಝಿ ಹೇಳಿದರು. ಆದರೆ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಸ್ಪೀಕರ್ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಆಡಿಯೋದಲ್ಲಿ ರೆಕಾರ್ಡ್ ಆಗಿರುವುದೇನು?
ಬಿಜೆಪಿ ಶಾಸಕ ಪವನ್ ಗೆಲುವಿಗೆ ಶುಭ ಕೋರಿದ ಲಾಲೂ ಪ್ರಸಾದ್ ಯಾದವ್, ವಿಧಾನಸಭಾ ಸ್ಪೀಕರ್ ಚುನಾವಣೆ ಸಂದರ್ಭದಲ್ಲಿ ನೀವು ನಮಗೆ ಬೆಂಬಲವನ್ನು ನೀಡಿರಿ. ನಾವು ಎನ್ ಡಿಎ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರ ರಚಿಸುತ್ತೇವೆ. ತದನಂತರದಲ್ಲಿ ನಿಮಗೆ ಸಚಿವ ಸ್ಥಾನವನ್ನು ನೀಡುತ್ತೇವೆ" ಎಂದು ಲಾಲೂ ಪ್ರಸಾದ್ ಯಾದವ್ ಆಮಿಷವೊಡ್ಡಿದ್ದರು ಎನ್ನಲಾಗಿದೆ.
ಲಾಲೂ ಪ್ರಸಾದ್ ಯಾದವ್ ವಿರುದ್ಧ ಸುಶೀಲ್ ದೂಷಣೆ
ಎನ್ ಡಿಎ ಶಾಸಕರಿಗೆ ಲಾಲೂ ಪ್ರಸಾದ್ ಯಾದವ್ ಅವರು ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಆರೋಪಿಸಿದ ಮರುದಿನವೇ ಆಡಿಯೋ ಕ್ಲಿಪ್ ಬಿಡುಗಡೆಯಾಗಿತ್ತು. "ಒಂದು ಖಾಸಗಿ ದೂರವಾಣಿ ಸಂಖ್ಯೆಯಿಂದ ಬಿಜೆಪಿ ಶಾಸಕರಿಗೆ ಕರೆ ಮಾಡಿದ ಲಾಲೂ ಪ್ರಸಾದ್ ಯಾದವ್ ಹಣ ಮತ್ತು ಸಚಿವಗಿರಿ ಆಮಿಷವೊಡ್ಡಿದ್ದರು. ಈ ಸಂಖ್ಯೆಗೆ ನಾನು ಕರೆ ಮಾಡಿದ ಸಂದರ್ಭದಲ್ಲಿ ಸ್ವತಃ ಲಾಲೂ ಪ್ರಸಾದ್ ಅವರೇ ಕರೆಯನ್ನು ಸ್ವೀಕರಿಸಿದ್ದರು. ಜೈಲಿನಲ್ಲಿದ್ದುಕೊಂಡು ಇಂಥ ಕೆಳಮಟ್ಟದ ರಾಜಕಾರಣ ಮಾಡಬೇಡಿ. ಇದು ಸಾಧ್ಯವಾಗುವ ಕೆಲಸವಲ್ಲ ಅಂತಾ ಹೇಳಿದ್ದೆನು" ಎಂದು ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿದ್ದರು.
ಬಿಜೆಪಿ ಶಾಸಕ ಲಾಲೂ ಪ್ರಸಾದ್ ಯಾದವ್ ಬಗ್ಗೆ ಹೇಳಿದ್ದೇನು?
ಲಾಲೂ ಪ್ರಸಾದ್ ಯಾದವ್ ಅವರು ತಮಗೆ ಕರೆ ಮಾಡಿರುವ ಬಗ್ಗೆ ಬಿಜೆಪಿ ಶಾಸಕ ಲಾಲನ್ ಯಾದವ್ ಸ್ಪಷ್ಟಪಡಿಸಿದ್ದಾರೆ. "ನಾನು ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಜೊತೆಗೆ ಕುಳಿತಿದ್ದೆ. ಈ ವೇಳೆ ನನಗೆ ಫೋನ್ ಕರೆಯೊಂದು ಬಂದಿದ್ದು ಲಾಲೂ ಪ್ರಸಾದ್ ಯಾದವ್ ಎಂದು ಹೇಳುತ್ತಿರುವ ವ್ಯಕ್ತಿಯೊಬ್ಬರು ನಿಮ್ಮ ಜೊತೆಗೆ ಮಾತನಾಡಬೇಕಂತೆ ಎಂದು ನನ್ನ ಆಪ್ತ ಸಹಾಯಕರು ತಿಳಿಸಿದರು. ಆ ಮಾತನ್ನು ಕೇಳಿ ನಾನು ಮತ್ತು ಸುಶೀಲ್ ಕುಮಾರ್ ಮೋದಿ ಸಹ ಶಾಕ್ ಆದೆವು. ಕೊನೆಗೆ ಫೋನ್ ತೆಗೆದುಕೊಂಡು ಮಾತನಾಡಿದಾಗ ಲಾಲೂ ಪ್ರಸಾದ್ ಯಾದವ್ ಅವರು ನನ್ನ ಚುನಾವಣೆಯ ಗೆಲುವಿಗೆ ಶುಭಾಷಯ ಕೋರಿದರು. ಹಿರಿಯ ರಾಜಕಾರಣಿಯಾದ ಹಿನ್ನೆಲೆ ನಾನೂ ಕೂಡಾ ಅವರ ಆಶೀರ್ವಾದವನ್ನು ಕೋರಿದೆ. ನಂತರ ಮಾತನಾಡಿದ ಅವರು ಸ್ಪೀಕರ್ ಚುನಾವಣೆ ಸಂದರ್ಭದಲ್ಲಿ ಕಲಾಪಕ್ಕೆ ಗೈರು ಹಾಜರಾಗುವಂತೆ ಸೂಚಿಸಿದರು. ಇದಕ್ಕೆ ಒಪ್ಪಿಕೊಂಡರೆ ಅವರು ರಚಿಸುವ ಸರ್ಕಾರದಲ್ಲಿ ತಮಗೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದರು ಎಂದು ಲಾಲನ್ ಯಾದವ್ ತಿಳಿಸಿದ್ದಾರೆ.