ಇದಪ್ಪಾ ಸುದ್ದಿ: ಯೂನಿಫಾರ್ಮ್ ಖರೀದಿಸಲು ಮಕ್ಕಳ ಖಾತೆಗೆ 900 ಕೋಟಿ ರೂಪಾಯಿ!
ಫಾಟ್ನಾ, ಸೆಪ್ಟೆಂಬರ್ 16: "ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ನಮ್ಮ ಖಾತೆಗೆ 5.5 ಲಕ್ಷ ರೂಪಾಯಿ ಜಮೆ ಮಾಡಿದ್ದಾರೆ. ನಾನು ಆ ಹಣವನ್ನು ವಾಪಸ್ ಕೊಡುವುದಕ್ಕೆ ಸಾಧ್ಯವಿಲ್ಲ. ನನ್ನ ಖಾತೆಗೆ ಜಮೆ ಆಗಿರುವ ಹಣವನ್ನೆಲ್ಲಾ ಖರ್ಚು ಮಾಡಿದ್ದೇನೆ," ಬಿಹಾರದಲ್ಲಿ ಹೀಗೆ ಹೇಳಿದ ವ್ಯಕ್ತಿಯೊಬ್ಬ ಈಗ ಪೊಲೀಸ್ ಅತಿಥಿಯಾಗಿರುವುದು ಹಳೆಯ ಸುದ್ದಿ.
ಬ್ಯಾಂಕ್ ಅಧಿಕಾರಿಗಳ ಯಡವಟ್ಟಿನಿಂದ ವ್ಯಕ್ತಿಯೊಬ್ಬ 5.5 ಲಕ್ಷ ರೂಪಾಯಿ ಪಡೆದ ಘಟನೆ ನಡೆದ ಎರಡು ದಿನಗಳಲ್ಲಿ ಅಂಥದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 900 ಕೋಟಿ ರೂಪಾಯಿಗೆ ಜಮೆ ಆಗಿರುವುದು ಇಡೀ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಅಚ್ಚರಿ ಸುದ್ದಿ: ಬಿಹಾರದಲ್ಲಿ ಬಡ ವ್ಯಕ್ತಿಯ ಬ್ಯಾಂಕ್ ಖಾತೆಗೆ 5.50 ಲಕ್ಷ ರೂ. ಜಮೆ!
ಲೈವ್ ಹಿಂದೂಸ್ತಾನ್ ವರದಿ ಪ್ರಕಾರ, ಗುರುಚಂದ್ರ ಪ್ರಸಾದ್ ಮತ್ತು ಆಶಿತ್ ಕುಮಾರ್ ಎಂಬ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬರೋಬ್ಬರಿ 900 ಕೋಟಿಗೂ ಅಧಿಕ ರೂಪಾಯಿ ಜಮೆ ಆಗಿರುವುದು ಇತ್ತೀಚಿಗೆ ಗೊತ್ತಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಳೀಯ ಕೇಂದ್ರೀಕೃತ ಸಂಸ್ಕರಣಾ ಕೇಂದ್ರ (CPC)ಕ್ಕೆ ತೆರಳಿದ ವೇಳೆಯಲ್ಲಿ ಈ ಬಗ್ಗೆ ತಿಳಿದು ಬಂದಿದೆ.
ವಿದ್ಯಾರ್ಥಿಗಳ ಖಾತೆಗೆ 900 ಕೋಟಿ ರೂಪಾಯಿ
ಬಿಹಾರದ ಇಬ್ಬರು ವಿದ್ಯಾರ್ಥಿಗಳ ಖಾತೆಗೆ ರಾಜ್ಯ ಸರ್ಕಾರದಿಂದಲೇ 900 ಕೋಟಿ ರೂಪಾಯಿ ಜಮೆ ಆಗಿದೆ. ವಿದ್ಯಾರ್ಥಿಗಳ ಶಾಲಾ ಸಮವಸ್ತ್ರಕ್ಕಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಜಮೆ ಆಗಿರುವುದು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿನ ಮೊತ್ತ ತಿಳಿದುಕೊಳ್ಳಲು ತೆರಳಿದ ಸಂದರ್ಭದಲ್ಲಿ ಗೊತ್ತಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಬ್ಯಾಂಕಿನಿಂದ ತೆರಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಬ್ಬರಿಗೆ 60 ಕೋಟಿ, ಇನ್ನೊಬ್ಬರಿಗೆ 900 ಕೋಟಿ ರೂಪಾಯಿ
ಬಿಹಾರ ಕಟಿಯಾರ್ ಜಿಲ್ಲೆಯ ಬಗೌರಾ ಪಂಚಾಯಿತಿ ವ್ಯಾಪ್ತಿಯ ಪಸ್ತಿಯಾ ಗ್ರಾಮದ ಇಬ್ಬರು ವಿದ್ಯಾರ್ಥಿಗಳ ಖಾತೆಗೆ 960 ಕೋಟಿ ರೂಪಾಯಿ ಜಮೆ ಆಗಿದೆ. ಗುರುಚಂದ್ರ ವಿಶ್ವಾಸ್ ಎಂಬ ವಿದ್ಯಾರ್ಥಿ ಖಾತೆಗೆ 60 ಕೋಟಿಗೂ ಅಧಿಕ ಹಣ ಜಮೆ ಆಗಿದ್ದರೆ, ಆಶಿತ್ ಕುಮಾರ್ ಎಂಬ ಮತ್ತೊಬ್ಬ ವಿದ್ಯಾರ್ಥಿ ಬ್ಯಾಂಕ್ ಖಾತೆಗೆ 900 ಕೋಟಿಗೂ ಅಧಿಕ ಹಣ ಜಮೆ ಆಗಿದೆ. ಈ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕಿನ ಭೆಲಗಂಜ್ ಶಾಖೆಯಲ್ಲಿದೆ.
ಹಣ ಜಮೆ ಆಗಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಶಾಕ್
ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 960 ಕೋಟಿಗೂ ಹೆಚ್ಚು ಹಣ ಜಮೆ ಆಗಿರುವ ಬಗ್ಗೆ ಹುಡುಗರು, ಗ್ರಾಮಸ್ಥರು ಮಾತ್ರವಲ್ಲ ಸ್ವತಃ ಬ್ಯಾಂಕ್ ಅಧಿಕಾರಿಗಳಲ್ಲಿಯೇ ಗೊಂದಲವನ್ನು ಸೃಷ್ಟಿಸಿದೆ. ನಿಜವಾಗಿಯೂ ಹಣ ಏಕೆ ಜಮೆ ಆಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದರ ಮಧ್ಯೆ ಬ್ಯಾಂಕ್ ಮ್ಯಾನೇಜರ್ ಮನೋಜ್ ಗುಪ್ತಾ, ಎರಡೂ ಮಕ್ಕಳ ಖಾತೆಯಿಂದ ಪಾವತಿಯನ್ನು ನಿಲ್ಲಿಸಲಾಗಿದೆ. ಈ ವಿಷಯವು ತನಿಖೆಯಲ್ಲಿದೆ ಎಂದು ಹೇಳಿದರು.
ಪ್ರಧಾನಿಯೇ ಹಣ ಕೊಟ್ಟಿದ್ದಾರೆ ಎಂದು ನಂಬಿದ್ದ ವ್ಯಕ್ತಿ
ಬಿಹಾರದಲ್ಲಿ ಇತ್ತೀಚಿಗೆ ಖಗಾರಿಯಾ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಬಖ್ತಿಯಾರ್ಪುರ್ ಗ್ರಾಮದ ನಿವಾಸಿ ರಂಜಿತ್ ದಾಸ್ ಖಾತೆಗೆ 5.5 ಲಕ್ಷ ರೂಪಾಯಿ ಜಮೆ ಆಗಿದೆ. ಬ್ಯಾಂಕ್ ಲೋಪದಿಂದಾಗಿ ರಂಜಿತ್ ದಾಸ್ ಖಾತೆಗೆ 5.5 ಲಕ್ಷ ರೂಪಾಯಿ ಜಮೆ ಆಗಿರುವುದನ್ನು ಅರಿತುಕೊಂಡ ಬ್ಯಾಂಕ್ ಸಿಬ್ಬಂದಿ ಅದನ್ನು ವಾಪಸ್ ನೀಡುವಂತೆ ಕೋರಿದ್ದಾರೆ. ಆದರೆ ಹಣ ವಾಪಸ್ ನೀಡುವುದಕ್ಕೆ ತಿರಸ್ಕರಿಸಿದ್ದಾರೆ. ಆ ಹಣವನ್ನು ತಾವು ಖರ್ಚು ಮಾಡಲಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಖಾತೆಗೆ ಜಮೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.
ನನ್ನ ಬ್ಯಾಂಕ್ ಖಾತೆಯಲ್ಲಿ ಹಣವೇ ಇಲ್ಲ:
"ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಯಾವಾಗ ನನ್ನ ಖಾತೆಗೆ ಹಣ ಜಮೆ ಆಯಿತೋ ಅಂದು ನಾನು ತುಂಬಾ ಸಂತೋಷವಾಗಿದ್ದೆನು. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಹಿಂದೆ ಹೇಳಿದಂತೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದರ ಭಾಗವಾಗಿ ಮೊದಲ ಕಂತಿನಲ್ಲಿ ಇಷ್ಟೊಂದು ಹಣವನ್ನು ಕಳುಹಿಸಿದ್ದಾರೆ ಎಂದು ತಿಳಿದುಕೊಂಡಿದ್ದೆನು. ನಾನು ಎಲ್ಲ ಹಣವನ್ನು ಖರ್ಚು ಮಾಡಿದ್ದು, ಇದೀಗ ನನ್ನ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ. ಬ್ಯಾಂಕ್ ಖಾತೆಗೆ ತುಂಬಲು ಅಥವಾ ಅಧಿಕಾರಿಗಳಿಗೆ ನೀಡಲು ಈಗ ನನ್ನ ಬಳಿ ಹಣವೇ ಇಲ್ಲ," ಎಂದು ರಂಜಿತ್ ದಾಸ್ ಹೇಳಿಕೆ ನೀಡಿದ್ದರು.