ಉದ್ಘಾಟನೆಯಾಗಿ ತಿಂಗಳಲ್ಲೇ ಕೊಚ್ಚಿಹೋದ 263 ಕೋಟಿ ರೂ ವೆಚ್ಚದ ಸೇತುವೆ
ಗೋಪಾಲ್ಗಂಜ್, ಜುಲೈ 16: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇತುವೆ ಉದ್ಘಾಟಿಸಿ ಕೇವಲ ಒಂದು ತಿಂಗಳಲ್ಲೇ ಮುರಿದುಬಿದ್ದಿದೆ. ಬಿಹಾರ ರಾಜಧಾನಿ ಪಾಟ್ನಾದಿಂದ 150 ಕಿ.ಮೀ ದೂರದಲ್ಲಿರುವ ಗೋಪಾಲ್ಗಂಜ್ನಲ್ಲಿ ಗಂಡಕ್ ನದಿಗೆ ಸೇತುವೆ ನಿರ್ಮಿಸಲಾಗಿತ್ತು. ಕಳೆದ ಜೂನ್ 16 ರಂದು ಈ ಸೇತುವೆಯನ್ನು ನಿತೀಶ್ ಕುಮಾರ್ ಉದ್ಘಾಟಿಸಿದ್ದರು.
ಆದರೆ ಕಳೆದ ನಾಲ್ಕೈದು ದಿನಗಳಿಂದ ಬಿಹಾರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಸೇತುವೆ ಮುರಿದುಬಿದ್ದಿದೆ. ಸೇತುವೆ ಮುರಿದುಬಿದ್ದಿರುವ ಬಗ್ಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಆದರೆ ಪ್ರತಿಪಕ್ಷ ನಾಯಕರು ಸರ್ಕಾರದ ಮೇಲೆ ಟೀಕೆಗಳ ಸುರಿಮಳೆ ಹರಿಸಿದ್ದಾರೆ.
ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಈ ಕುರಿತು ಟ್ವೀಟ್ ಮಾಡಿದ್ದು, ಸುಮಾರು 263 ಕೋಟಿ ರೂ ಖರ್ಚು ಮಾಡಿ, ಎಂಟು ವರ್ಷಗಳಿಂದ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ 23 ದಿನಗಳಲ್ಲೇಬ ಸೇತುವೆ ಕೊಚ್ಚಿ ಹೋಗಿದೆ. ಭ್ರಷ್ಟಾಚಾರದ ಭೀಷ್ಮ ಪಿತಾಮಹ ನಿತೀಶ್ ಕುಮಾರ್ ಈ ಬಗ್ಗೆ ಮಾತನಾಡುತ್ತಲೇ ಇಲ್ಲ.
ನಿತೀಶ್ ಕುಮಾರ್ ಆಡಳಿತದಲ್ಲಿ ಈ ರೀತಿ ಸೇತುವೆಗಳು ಕೊಚ್ಚಿ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಇಲ್ಲವಾದಲ್ಲಿ ಕೇವಲ ಪ್ರಚಾರಕ್ಕಾಗಿ ನಿರ್ಮಾಣ ಮುನ್ನವೇ ಉದ್ಘಾಟಿಸಿ ಈ ರೀತಿ ಅಚಾತುರ್ಯವಾಗಲು ಕಾರಣವಾಯಿತೇ ಎಂದು ತೇಜಸ್ವಿ ಕಿಡಿಕಾರಿದ್ದಾರೆ.
ಇದಲ್ಲದೆ ಈ ಸೇತುವೆ ಕೊಚ್ಚಿ ಹೋಗಲು ಇಲಿಗಳು ಕಾರಣ ಎನ್ನುವ ನೆಪ ಹುಡುಕದೆ ಕಳಪೆ ಕಾಮಗಾರಿಗೆ ಕಾರಣವಾದ ಉದ್ಯಮಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕಿದೆ.