ಬಿಹಾರದಲ್ಲಿ ಲಾಲೂ ಆರ್ಜೆಡಿ ಛಿದ್ರ? ದಾಯಾದಿ ಕಲಹಕ್ಕೆ ಕಾಂಗ್ರೆಸ್ ಬೇಸ್ತು
ಉತ್ತರಪ್ರದೇಶದಲ್ಲಿ ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ ಹೊಸಪಕ್ಷವನ್ನು ಸ್ಥಾಪಿಸಿ, ನಲವತ್ತಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗ, ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಕೂಟ ತನ್ನ ರಾಜಕೀಯ ತಂತ್ರಗಾರಿಕೆಯನ್ನೇ ಬದಲಾಯಿಸಬೇಕಾಗಿ ಬಂತು. ಕುಟುಂಬ ರಾಜಕಾರಣದಿಂದ ಜರ್ಝರಿತರಾಗಿರುವ ಮುಲಾಯಂ ಸಿಂಗ್ ಯಾದವ್ ಎದುರಿಸುತ್ತಿರುವ ಪರಿಸ್ಥಿತಿಯನ್ನೇ ಈಗ ಬಿಹಾರದ ವರ್ಣರಂಜಿತ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಬಿರ್ಸಾಮುಂಡ ಜೈಲಿನಲ್ಲಿ ಕೂತು ಅನುಭವಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲಾಲೂ ಪುತ್ರರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಆರಂಭವಾದ ಕೌಟುಂಬಿಕ ಕಲಹ ಈಗ ಪಕ್ಷದ ಭವಿಷ್ಯವನ್ನೇ ಮಂಕಾಗಿಸುವತ್ತ ಸಾಗುತ್ತಿದೆ. ಲಾಲೂ ಪತ್ನಿ ರಾಬ್ಡಿದೇವಿ, ಒಬ್ಬ ಮಗನ ಪರವಾಗಿ ನಿಂತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತಿದೆ. ಜೊತೆಗೆ, ಆರ್ಜೆಡಿ ಜೊತೆ ಮೈತ್ರಿಮಾಡಿಕೊಂಡಿರುವ ಕಾಂಗ್ರೆಸ್ಸಿಗೂ ಇದು ಚುನಾವಣೆಯ ವೇಳೆ ತೀವ್ರ ಹಿನ್ನಡೆಯಾಗುವ ಸಾಧ್ಯತೆಯೇ ಹೆಚ್ಚು.
ಕುಟುಂಬ ಕಲಹದಿಂದ ಸಿಟ್ಟಾಗಿರುವ ಲಾಲು ಪ್ರಸಾದ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್, ಆರ್ಜೆಡಿಯಿಂದ ಹೊರಬಂದು 'ಲಾಲು ರಾಬ್ಡಿ ಮೋರ್ಚಾ' ಎನ್ನುವ ಹೊಸ ಪಕ್ಷವನ್ನು ಹುಟ್ಟುಹಾಕಿದ್ದಾರೆ. ಮೊದಲೇ ಬಿಹಾರದಲ್ಲಿನ ಮಹಾಘಟಬಂಧನದ ಮನಸ್ತಾಪಗಳಿಗೆ ಈ ಘಟನೆ ಇನ್ನಷ್ಟು ತುಪ್ಪಸುರಿದಿದೆ.
ಮಹಾಮೈತ್ರಿಕೂಟದ ಲಾಲೂ ಕನಸಿಗೆ ದೊಡ್ಡ ಮಗನೇ ಅಡ್ಡಿ
ಮದುವೆಯಾದ ಆರೇ ತಿಂಗಳಲ್ಲಿ ತೇಜ್ ಪ್ರತಾಪ್ ವಿಚ್ಛೇದನಕ್ಕೆ ಅರ್ಜಿ ಹಾಕಿ, ಮನೆಬಿಟ್ಟು ಹೋಗಿದ್ದರು. ನಾಲ್ಕು ಗೋಡೆಯ ಮಧ್ಯೆ ಪರಿಹಾರವಾಗಬೇಕಿದ್ದ ಕೌಟುಂಬಿಕ ಕಲಹವೊಂದು, ಬಿಹಾರದ ಮನೆಮನೆಯ ಮಾತಿನ ವಸ್ತುವಾಗಿತ್ತು. ಈಗ, 22ವರ್ಷದ ಹಿಂದೆ ತನ್ನ ತಂದೆ ಹುಟ್ಟುಹಾಕಿದ ಆರ್ಜೆಡಿ ಪಕ್ಷವನ್ನು ತೊರೆಯಲು ತೇಜ್ ಪ್ರತಾಪ್ ನಿರ್ಧರಿಸಿದ್ದಾರೆ.
ಸರಣ್ ಕ್ಷೇತ್ರದಿಂದ ಆರ್ಜೆಡಿ, ತನ್ನ ಅಭ್ಯರ್ಥಿಯಾಗಿ ಚಂದ್ರಕಾ ರೈ ಹೆಸರನ್ನು ಪ್ರಕಟಿಸಿದೆ
ಹೊಸ ಪಕ್ಷ ಘೋಷಿಸಿದ ಬೆನ್ನಲ್ಲೇ, ತನ್ನ ತಾಯಿ ರಾಬ್ಡಿದೇವಿಯನ್ನು, ಲಾಲೂ ಹಿಂದೆ ಪ್ರತಿನಿಧಿಸುತ್ತಿದ್ದ ಸರಣ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ತೇಜ್ ಪ್ರತಾಪ್ ಒತ್ತಾಯಿಸಿದ್ದಾರೆ. ಒಂದು ವೇಳೆ, ತನ್ನ ತಾಯಿ ನಿಲ್ಲದೇ ಇದ್ದ ಪಕ್ಷದಲ್ಲಿ, ಹೊಸ ಪಕ್ಷದ ಹೆಸರಿನಲ್ಲಿ ತಾನೇ ಸ್ಪರ್ಧಿಸುವುದಾಗಿ ತೇಜ್ ಪ್ರತಾಪ್ ಹೇಳಿದ್ದಾರೆ. ಈ ಕ್ಷೇತ್ರದಿಂದ ಆರ್ಜೆಡಿ, ತನ್ನ ಅಭ್ಯರ್ಥಿಯಾಗಿ ಚಂದ್ರಿಕಾ ರಾಯ್ ಹೆಸರನ್ನು ಪ್ರಕಟಿಸಿದೆ. ಚಂದ್ರಿಕಾ ರಾಯ್, ತೇಜ್ ಪ್ರತಾಪ್ ಅವರ ಮಾವ (ಪತ್ನಿಯ ತಂದೆ). ಬಿಜೆಪಿಯಿಂದ ರಾಜೀವ್ ಪ್ರತಾಪ್ ರೂಢಿ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. (ಚಿತ್ರದಲ್ಲಿ ಚಂದ್ರಿಕಾ ರಾಯ್, ಎಡದಿಂದ ಮೊದಲಿನವರು)
ಬಿಹಾರ ಮಹಾಮೈತ್ರಿಕೂಟದಲ್ಲಿ ಮನಸ್ತಾಪ: ಕಾಂಗ್ರೆಸ್ ಒಂಟಿಯಾಗಿ ಸ್ಪರ್ಧೆ?
ಆರ್ಜೆಡಿ ಮುಖಂಡ ತೇಜಸ್ವಿ ಪ್ರಸಾದ್ ಯಾದವ್ ಅವರ ಸೀಟು ಚೌಕಾಸಿ
ಮದನ್ ಮೋಹನ್ ಝಾ, ಕಾಂಗ್ರೆಸ್ ಬಿಹಾರ ಘಟಕದ ಅಧ್ಯಕ್ಷರಾದ ನಂತರ, ಪಕ್ಷದ ಪರಿಸ್ಥಿತಿ ಸುಧಾರಿಸುತ್ತಿತ್ತು. ಆದರೆ, ಆರ್ಜೆಡಿ ಮುಖಂಡ ತೇಜಸ್ವಿ ಪ್ರಸಾದ್ ಯಾದವ್ ಅವರ ಸೀಟು ಚೌಕಾಸಿಯ ನಂತರ ಕಾಂಗ್ರೆಸ್, ಆರ್ಜೆಡಿಯ 'ಬಿ ಟೀಂ' ಆಗಿದೆ ಎಂದು ಬಿಹಾರದ ಹಿರಿಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಮುಖವಾಗಿ ಮಿಥಿಲಾಂಚಲ್ ಭಾಗದಲ್ಲಿ ಕಾಂಗ್ರೆಸ್ ಸುಧೃಡವಾಗಿದ್ದರೂ, ಪಕ್ಷ ನಿರೀಕ್ಷಿಸಿದಷ್ಟು ಸ್ಥಾನ ಸಿಗಲಿಲ್ಲ ಎನ್ನುವುದು ಕಾಂಗ್ರೆಸ್ಸಿಗರು ಬೇಸರಕ್ಕೆ ಕಾರಣವಾಗಿದೆ.
|
ಬೇಗುಸರಾಯ್ ಕ್ಷೇತ್ರದಿಂದ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಸ್ಪರ್ಧೆ
ಬಿಹಾರದ ನಲವತ್ತು ಸೀಟಿನಲ್ಲಿ, ಹೊಂದಾಣಿಕೆಯ ಪ್ರಕಾರ ಆರ್ಜೆಡಿ 19, ಕಾಂಗ್ರೆಸ್ 9, ಆರ್ ಎಲ್ ಎಸ್ಪಿ 5, ಎಚ್ ಎ ಎಂ (ಎಸ್) 3, ವಿಐಪಿ 3 ಮತ್ತು ಸಿಪಿಐ (ಎಂಎಲ್) 1ಸ್ಥಾನದಲ್ಲಿ ಸ್ಪರ್ಧಿಸಲಿದೆ. ಆರ್ಜೆಡಿಗೆ ಬಿಟ್ಟುಕೊಡಲಾಗಿರುವ ಬೇಗುಸರಾಯ್ ಕ್ಷೇತ್ರದಲ್ಲಿ ಜೆಎನ್ ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಕಮ್ಯೂನಿಸ್ಟ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಕನ್ಹಯ್ಯಾಗೆ ಬೆಂಬಲ ನೀಡುವ ಸಾಧ್ಯತೆ ಕ್ಷೀಣಿಸಿದ್ದು, ಮಹಾಘಟಬಂದನ್ ನಿಂದ ತನ್ವೀರ್ ಹಸನ್ ಮತ್ತು ಬಿಜೆಪಿಯಿಂದ ಗಿರಿರಾಜ್ ಸಿಂಗ್ ಸ್ಪರ್ಧಿಸಲಿದ್ದಾರೆ.
ಹೊಸ ಪಕ್ಷ ಘೋಷಿಸಿದ ತೇಜ್ ಪ್ರತಾಪ್, ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರಾ
ಉತ್ತರಪ್ರದೇಶದಲ್ಲೂ ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಜೊತೆ ಹೊಂದಾಣಿಕೆ ಬಯಸಿತ್ತು. ಆದರೆ ಅಖಿಲೇಶ್ ಮತ್ತು ಮಾಯಾವತಿ ಕಾಂಗ್ರೆಸ್ ಪಕ್ಷವನ್ನು ದೂರಕ್ಕೆ ಇಟ್ಟಿದ್ದರು. ಇನ್ನು ಬಿಹಾರದಲ್ಲೂ ಆರ್ಜೆಡಿ ಮೈತ್ರಿ ಮಾಡಿಕೊಳ್ಳಲು ಅಷ್ಟೇನೂ ಉತ್ಸುಕತೆ ತೋರಲಿರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಆರ್ಜೆಡಿ ಮತ್ತು ಕಾಂಗ್ರೆಸ್, ಪ್ರಚಾರಕ್ಕೆ ಸಿದ್ದತೆ ನಡೆಸಿಕೊಳ್ಳುತ್ತಿರುವಾಗಲೇ, ತೇಜ್ ಪ್ರತಾಪ್ ಪಕ್ಢದಿಂದಲೇ ಹೊರಬಂದಿದ್ದಾರೆ. ಹೊಸ ಪಕ್ಷ ಘೋಷಿಸಿದ ತೇಜ್ ಪ್ರತಾಪ್, ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರಾ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟನೆಯಿಲ್ಲ.
ಕಾಂಗ್ರೆಸ್ಸಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು ಡೌಟು
ಹಿಂದಿ ಬೆಲ್ಟ್ ರಾಜ್ಯಗಳಲ್ಲಿ ಹೊಂದಾಣಿಕೆ ಕಾಂಗ್ರೆಸ್ ನಿರೀಕ್ಷಿಸಿದಂತೆ ನಡೆಯುತ್ತಿಲ್ಲ. ಒಂದು ವೇಳೆ, ತೇಜ್ ಪ್ರತಾಪ್ ತಮ್ಮ ಅಭ್ಯರ್ಥಿಗಳನ್ನು ಎಲ್ಲಾ ನಲವತ್ತು ಕ್ಷೇತ್ರದಲ್ಲಿ ಕಣಕ್ಕಿಳಿಸಿದರೆ, ಅದರ ಲಾಭ ನೇರವಾಗಿ ಬಿಜೆಪಿ ಮೈತ್ರಿಕೂಟಕ್ಕೆ ಅನ್ನುವುದು ಸ್ಪಷ್ಟ. ಹಾಗಾಗಿ, ಈಗಿನ ರಾಜಕೀಯ ಚಿತ್ರಣದ ಪ್ರಕಾರ, ಬಿಹಾರದಲ್ಲಿ ಹೆಚ್ಚು ಸ್ಥಾನಗಳನ್ನು ಸೀಟು ಹೊಂದಾಣಿಕೆಯ ಮೂಲಕ ಗಳಿಸಲು ಬಯಸಿದ್ದ ಕಾಂಗ್ರೆಸ್ಸಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು ಡೌಟು.