ಮಹಾಘಟಬಂಧನಕ್ಕೆ ವಾಪಸ್ ಬನ್ನಿ: ನಿತೀಶ್ಗೆ ರಾಬ್ರಿ ದೇವಿ ಆಹ್ವಾನ
ಪಟ್ನಾ, ಜೂನ್ 4: ಲೋಕಸಭೆ ಚುನಾವಣೆಯ ಬೆನ್ನಲ್ಲೇ ಬಿಜೆಪಿ ಜತೆ ಮುನಿಸಿಕೊಂಡಿರುವ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರಿಗೆ ಮಹಾಘಟಬಂಧನಕ್ಕೆ ಮರಳಿ ಸೇರ್ಪಡೆಯಾಗುವಂತೆ ಆರ್ಜೆಡಿ ನಾಯಕಿ ರಾಬ್ರಿ ದೇವಿ ಆಹ್ವಾನ ನೀಡಿದ್ದಾರೆ.
ಮಹಾ ಮೈತ್ರಿಕೂಟಕ್ಕೆ ವಾಪಸ್ ಬರುವಂತೆ ಆರ್ಜೆಡಿ ನಾಯಕರೊಬ್ಬರು ನಿತೀಶ್ ಕುಮಾರ್ ಅವರಿಗೆ ಸಲಹೆ ನೀಡಿದ್ದರು. ಅದಕ್ಕೆ ಪೂರಕವಾಗಿ ಮಾತನಾಡಿರುವ ರಾಬ್ರಿ ದೇವಿ, ಒಂದು ವೇಳೆ ನಿತೀಶ್ ಮಹಾ ಮೈತ್ರಿಕೂಟಕ್ಕೆ ವಾಪಸ್ ಬಂದರೆ ತಮ್ಮ ಅಭ್ಯಂತರವೇನೂ ಇಲ್ಲ ಎಂದಿದ್ದಾರೆ.
ಆದರೆ, ಈ ಸಂಬಂಧ ಯಾವುದೇ ನಿರ್ಧಾರವನ್ನು ಆರ್ಜೆಡಿ ಪಕ್ಷದ ಹಿರಿಯ ಮುಖಂಡರು ತೆಗೆದುಕೊಳ್ಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡಲು ನಿತೀಶ್ ಕುಮಾರ್ ಅವರು ಬಿಜೆಪಿಯೇತರ ಪಕ್ಷಗಳೊಂದಿಗೆ ಕೈಜೋಡಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಹೇಳಿಕೆ ನೀಡಿದ್ದರು.
ಲೋಕಸಭೆ ಚುನಾವಣೆಯ ಬಳಿಕ ಸರ್ಕಾರ ರಚಿಸಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಿಂದ ಜೆಡಿಯುಗೆ ಕೇವಲ ಒಂದು ಸಚಿವ ಸ್ಥಾನದ ಆಫರ್ ನೀಡಲಾಗಿತ್ತು. ಇದನ್ನು ನಿತೀಶ್ ತಿರಸ್ಕರಿಸಿದ್ದರು. ಬಳಿಕ ಬಿಹಾರದಲ್ಲಿ ಸಂಪುಟ ವಿಸ್ತರಣೆ ಮಾಡಿದ್ದ ನಿತೀಶ್, ಎಂಟು ಆರ್ಜೆಡಿ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರೆ, ಬಿಜೆಪಿಗೆ ಕೇವಲ ಒಂದು ಸ್ಥಾನ ನೀಡಿದ್ದರು. ಇದು ಎರಡೂ ಪಕ್ಷಗಳ ಮೈತ್ರಿಯಲ್ಲಿ ಒಡಕು ಮೂಡಿಸಲಿದೆ ಎಂದು ಹೇಳಲಾಗುತ್ತಿದೆ.