ಬಿಹಾರ ಪೊಲೀಸ್ ಕ್ವಾರಂಟೈನ್: ನ್ಯಾಯಾಲಯಕ್ಕೆ ಹೋಗಲು ನಿರ್ಧಾರ
ಪಾಟ್ನಾ, ಆಗಸ್ಟ್ 6: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಪಾಟ್ನಾದಿಂದ ಮುಂಬೈಗೆ ತೆರಳಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದರು.
ತನಿಖೆಗಾಗಿ ಬಂದ ಅಧಿಕಾರಿಗಳನ್ನು ಬಲವಂತಾಗಿ ಕ್ವಾರಂಟೈನ್ ಮಾಡಲಾಗಿದೆ ಎಂದು ಬಿಹಾರ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದರು. ಮುಂಬೈ ಪೊಲೀಸರು ಸುಶಾಂತ್ ಕೇಸ್ ಕುರಿತು ಸಹಕಾರ ನೀಡುತ್ತಿಲ್ಲ, ಹಾಗಾಗಿ, ಉದ್ದೇಶಪೂರ್ವಕವಾಗಿ ಎಸ್ಪಿ ವಿನಯ್ ತಿವಾರಿ ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ಆರೋಪ ಮಾಡಿದ್ದಾರೆ. ಮುಂದೆ ಓದಿ...
ಸುಶಾಂತ್ ಕೇಸ್: ಸಿಬಿಐನಿಂದ ಎಫ್ಐಆರ್, ರಿಯಾಗೆ ಇಡಿ ಸಮನ್ಸ್
ಕಾನೂನು ಹೋರಾಟ ಮಾಡಲು ನಿರ್ಧಾರ
ಪಾಟ್ನಾ ಅಧಿಕಾರಿ ವಿನಯ್ ತಿವಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಕ್ವಾರಂಟೈನ್ ಮಾಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ಗುರುವಾರ ತಿಳಿಸಿದ್ದಾರೆ. ಇಂದು ಸಂಜೆಯವರೆಗೂ ಕಾದು ನೋಡುತ್ತೇವೆ, ಬಿಟ್ಟಿಲ್ಲ ಅಂದ್ರೆ ಕೋರ್ಟ್ಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.
ನಾಲ್ಕು ಅಧಿಕಾರಿಗಳು ಪಾಟ್ನಾಗೆ ವಾಪಸ್
ಸುಶಾಂತ್ ಪ್ರಕರಣದ ತನಿಖೆಗಾಗಿ ಐಪಿಎಸ್ ವಿನಯ್ ತಿವಾರಿ ಸೇರಿ ಐದು ಜನ ಪೊಲೀಸರು ಮುಂಬೈಗೆ ಹೋಗಿದ್ದರು. ಈ ಪೈಕಿ ನಾಲ್ಕು ಜನ ಪೊಲೀಸರು ಇಂದು ಪಾಟ್ನಾಗೆ ವಾಪಸ್ ಆಗಿದ್ದಾರೆ. ಆದರೆ, ಕ್ವಾರಂಟೈನ್ ಮಾಡಿರುವ ಕಾರಣ ವಿನಯ್ ತಿವಾರಿ ಅಲ್ಲೇ ಇರಬೇಕಾಗಿದೆ. ಕಳೆದ ಭಾನುವಾರ ಕ್ವಾರಂಟೈನ್ ಮಾಡಲಾಗಿದ್ದು, 14 ದಿನಗಳ ಕಾಲ ಇರಬೇಕಿದೆ.
ತಪ್ಪ ಸಂದೇಶ ಎಂದಿದ್ದ ಕೋರ್ಟ್
ಪಾಟ್ನಾ ಪೊಲೀಸ್ ಅಧಿಕಾರಿಯನ್ನು ಮುಂಬೈನಲ್ಲಿ ಕ್ವಾರಂಟೈನ್ ಮಾಡಿದ ವಿಚಾರವನ್ನು ಬುಧವಾರ ಸುಪ್ರೀಂಕೋರ್ಟ್ ಖಂಡಿಸಿತ್ತು. ''ತನಿಖೆಗೆ ಬಂದ ಅಧಿಕಾರಿಯನ್ನು ಬಲವಂತವಾಗಿ ಕ್ವಾರಂಟೈನ್ ಮಾಡುವುದರಿಂದ ಮುಂಬೈ ಪೊಲೀಸರ ಮೇಲೆ ತಪ್ಪು ಸಂದೇಶ ಹೋಗುತ್ತೆ'' ಎಂದು ಅಭಿಪ್ರಾಯಪಟ್ಟಿತ್ತು. ನ್ಯಾಯಾಲಯ ಹೀಗೆ ಹೇಳಿದ್ಮೇಲೂ ಮುಂಬೈ ನಗರದ ಆಡಳಿತ ಮಂಡಳಿ ಅಧಿಕಾರಿಯನ್ನು ಬಿಡುಗಡೆಗೊಳಿಸದೆ ಇರುವುದು ಚರ್ಚೆಗೆ ಕಾರಣವಾಗಿದೆ.
ರಿಯಾಗೆ ಸಮನ್ಸ್, ಸಿಬಿಐ ತನಿಖೆ ಶುರು
ಬಿಹಾರ ಸರ್ಕಾರದ ಶಿಫಾರಸಿನ ಮೇರೆಗೆ ಸುಶಾಂತ್ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ಪಾಟ್ನಾ ಪೊಲೀಸರ ಎಫ್ ಐ ಆರ್ ಆಧಾರದಲ್ಲಿ ಸಿಬಿಐ ಪೊಲೀಸರು ಸಹ ಎಫ್ ಐ ಆರ್ ದಾಖಲಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಜಾರಿ ನಿರ್ದೇಶನಾಲಯದ ರಿಯಾ ಚಕ್ರವರ್ತಿಗೆ ಸಮನ್ಸ್ ನೀಡಿದೆ. ಸಿಬಿಐ ಸಹ ರಿಯಾ ಅವರನ್ನು ವಿಚಾರಿಸುವ ಸಾಧ್ಯತೆ ಹೆಚ್ಚಿದೆ.
ಮನವಿ ನಿರಾಕರಿಸಿದ ಮುಂಬೈ ಪಾಲಿಕೆ
ಪಾಟ್ನಾ ವಲಯ ಐಜಿ ಸಂಜಯ್ ಕುಮಾರ್ ಅವರು ಬಿಎಂಸಿ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಅವರಿಗೆ ಪತ್ರ ಬರೆದಿದ್ದು, ವಿನಯ್ ತಿವಾರಿ ನಗರದಲ್ಲಿ ಅಧಿಕೃತ ಕರ್ತವ್ಯದಲ್ಲಿದ್ದ ಕಾರಣ ವಿನಾಯಿತಿ ನೀಡಬೇಕೆಂದು ಕೋರಿದ್ದರು. ಆದರೆ, ಮುಂಬೈ ಪಾಲಿಕೆ ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಐಪಿಎಸ್ ಅಧಿಕಾರಿಗೆ ವಿನಾಯಿತಿ ನೀಡಲು ನಿರಾಕರಿಸಿತ್ತು.