ಬಿಹಾರದ ಜನ ಬದಲಾವಣೆ ಬಯಸಿದ್ದಾರೆ ಎಂದ ತೇಜಸ್ವಿ ಯಾದವ್
ಪಾಟ್ನಾ, ಅಕ್ಟೋಬರ್.28: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನರು ನೀಡುವ ಮತವು ಬದಲಾವಣೆಗೆ ಪೂರಕವಾಗಿರಲಿದೆ ಎಂದು ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹೇಳಿದ್ದಾರೆ.
ಬುಧವಾರ ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಎಎನ್ಐಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆಗಳು ಪ್ರಜಾಪ್ರಭುತ್ವದ ಪಾಲಿಗೆ ಉತ್ಸವದಂತೆ. ಬಿಹಾರದ ಜನರು ಈ ಬಾರಿ ಚುನಾವಣೆಯಲ್ಲಿ ನೀಡುವ ಮತವು ಬದಲಾವಣೆಗೆ ಸಾಕ್ಷಿ ಎನ್ನುವಂತೆ ಇರಲಿದೆ ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.
Bihar Election 2020 Live Updates: ಬಿಜೆಪಿ ಚಿಹ್ನೆಯುಳ್ಳ ಮಾಸ್ಕ್ ಧರಿಸಿ ಮತಗಟ್ಟೆಗೆ ಸಚಿವ ಪ್ರೇಮ್ ಕುಮಾರ್
ಬಿಹಾರದಲ್ಲಿ 15 ವರ್ಷಗಳ ಕಾಲ ಸ್ಥಾನಿಕ ಆಡಳಿತ ನೀಡಿದ ಸರ್ಕಾರವು ರಾಜ್ಯದ ಯುವಕರನ್ನು ನಿರುದ್ಯೋಗಗಳಾಗಿ ಮಾಡಿದೆ. ರೈತರು ಮತ್ತು ಕಾರ್ಮಿಕರನ್ನು ಕಷ್ಟಕ್ಕೆ ನೂಗಿದೆ. ಅವರು ರಾಜ್ಯದಲ್ಲಿ ಒಂದೇ ಒಂದು ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಬಡತನ ನಿವಾರಣೆ ಆಗಿಲ್ಲ, ಶಿಕ್ಷಣ ಮತ್ತು ಆರೋಗ್ಯ ಸ್ಥಿತಿಯೂ ಸುಧಾರಿಸಿಲ್ಲ ಎಂದು ದೂಷಿಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ನಿರುದ್ಯೋಗವೇ ಮುಖ್ಯ ಅಸ್ತ್ರ:
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗದ ಅಸ್ತ್ರವನ್ನೇ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯವನ್ನು ಸಿಎಂ ನಿತೀಶ್ ಕುಮಾರ್ ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಪ್ರವಾಹ ಪರಿಸ್ಥಿತಿ ಸೇರಿದಂತೆ ಹಲವು ರೀತಿ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಮೊದಲ ಬಾರಿಗೆ ನಾನು ಪ್ರಜೆಗಳನ್ನು ಪ್ರಾರ್ಥಿಸುತ್ತಿದ್ದೇನೆ. ಮಹತ್ವದ ಭವಿಷ್ಯಕ್ಕಾಗಿ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಮತ ನೀಡಿ ಎಂದು ತೇಜಸ್ವಿ ಯಾದವ್ ಮನವಿ ಮಾಡಿಕೊಂಡಿದ್ದಾರೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್.28ರ ಬುಧವಾರ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ 2.14 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1.01 ಕೋಟಿ ಮಹಿಳೆಯರಾಗಿದ್ದು, 599 ತೃತೀಯ ಲಿಂಗದವರು ಸೇರಿದ್ದಾರೆ ಎಂದು ಚುನಾವಣಾ ಆಯೋಗವು ತಿಳಿಸಿದೆ. 71 ವಿಧಾನಸಭಾ ಕ್ಷೇತ್ರಗಳಲ್ಲಿ 952 ಪುರುಷ ಮತ್ತು 114 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು 2 ಕೋಟಿಗೂ ಅಧಿಕ ಮತದಾರರು ಒಟ್ಟು 1066 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.